ದಾವಣಗೆರೆ, ಬಳ್ಳಾರಿಯಲ್ಲಿ ಶಕ್ತಿ ದೇವತೆಗಳ ಜಾತ್ರೆ
ದಾವಣಗೆರೆ, ಫೆಬ್ರವರಿ 29: ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ದುಗ್ಗಮ್ಮನ ಜಾತ್ರೆ ನೋಡಲು ಬಲು ಸೊಗಸು. ಈ ಜಾತ್ರೆಯನ್ನು ಕಣ್ತುಂಬಿಕೊಳ್ಳಲೆಂದೇ ಭಕ್ತರು ಕಾತರದಿಂದ ಕಾಯುತ್ತಿರುತ್ತಾರೆ.
ಇದೀಗ ಆ ಜಾತ್ರೆ ಸಮಯ ಬಂದೇ ಬಿಟ್ಟಿದೆ. ಮಾರ್ಚ್ 1 ರಿಂದ 5 ರವರೆಗೂ ನಡೆಯುವ ದುಗ್ಗಮ್ಮನ ಜಾತ್ರೆಗೆ ರಾಜ್ಯದ ವಿವಿಧ ಕಡೆಗಳಿಂದ ಲಕ್ಷಾಂತರ ಜನ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಜಾತ್ರೆಯನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಈ ಬಾರಿ ಜಾತ್ರೆಗೆ ಬಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮಹಾನಗರ ಪಾಲಿಕೆ ಸಜ್ಜಾಗಿದೆ. ಇದು ಹಳೇ ದಾವಣಗೆರೆಯಲ್ಲಿ ಇರುವ ದೇವಸ್ಥಾನ ಆಗಿರುವುರಿಂದ ಪಿ.ಬಿ ರಸ್ತೆಯಿಂದ ಹಳೆ ದಾವಣಗೆರೆಗೆ ಹೋಗುವ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳಿಗೆ ನಿರ್ಬಂಧ ಹೇರಲಾಗುವುದೆಂದು ತಿಳಿದುಬಂದಿದೆ.
ಇದರಿಂದ ಭಕ್ತರಿಗೆ ದೇವಿಯ ದರ್ಶನಕ್ಕೆ ಯಾವುದೇ ಕಿರಿಕಿರಿ ಇಲ್ಲದಂತಾಗುತ್ತದೆ. ಜಾತ್ರೆ ನಡೆಯುವ ದಿನಗಳಲ್ಲಿ ನೀರು, ವಿದ್ಯುತ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಬಳ್ಳಾರಿಯಲ್ಲಿ ಮಾ.3ರಿಂದ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ: ಬಳ್ಳಾರಿಯಲ್ಲೂ ಮಾರ್ಚ್ 3ರಿಂದ ಶ್ರೀ ಕನಕ ದುರ್ಗಮ್ಮ ಸಿಡಿಬಂಡಿ ರಥೋತ್ಸವ ನಡೆಯಲಿದ್ದು, ರಥೋತ್ಸವದ ಅಂಗವಾಗಿ ಬಳ್ಳಾರಿ ನಗರ ಡಿವೈಎಸ್ಪಿ ರಾಮರಾವ್ ರವರ ನೇತೃತ್ವದಲ್ಲಿ ಭದ್ರತೆ ಹಾಗೂ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಸಲಾಗಿದೆ.
ಬಳ್ಳಾರಿ ಜಿಲ್ಲೆಯ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ಇಲಾಖೆ, ಕಾರಾಗೃಹ ಇಲಾಖೆ ,ಕರ್ನಾಟಕ ರಸ್ತೆ ಸಾರಿಗೆ ಇಲಾಖೆ, ನಗರ ವಿದ್ಯುತ್ ಇಲಾಖೆ, ಮಹಾನಗರ ಪಾಲಿಕೆ, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಸೇರಿದಂತೆ ಕನಕ ದುರ್ಗಮ್ಮ ದೇವಸ್ಥಾನದ ಆಡಳಿತ ಮಂಡಳಿ ಸಭೆ ನಡೆಸಿ, ಭಕ್ತರಿಗೆ ದೇವಿಯ ಸುಸೂತ್ರ ದರ್ಶನಕ್ಕೆ ಅನುಕೂಲಕರ ವಾತಾವರಣ ಕಲ್ಪಿಸಿಕೊಡುವ ಕುರಿತು ಚಿಂತಿಸಲಾಯಿತು.












Click it and Unblock the Notifications