ಮುರುಘಾ ಮಠದ ಪ್ರಭಾರ ಉತ್ತರಾಧಿಕಾರಿಯಾಗಿ ಮಹಾಂತರುದ್ರ ಶ್ರೀ ಅವರನ್ನು ಆಯ್ಕೆ ಮಾಡಿದ್ದು ಯಾಕೆ ಗೊತ್ತಾ.?
ದಾವಣಗೆರೆ, ಸೆಪ್ಟೆಂಬರ್, 02: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮಲೆ ಮುರುಘಾ ಶರಣರನ್ನು ಬಂಧನವಾಗಿದ್ದು, ಈ ವಿಚಾರ ಬರೀ ರಾಜ್ಯ ಮಾತ್ರವಲ್ಲ, ದೇಶಾದ್ಯಂತ ಸದ್ದು ಮಾಡುತ್ತಿದೆ. ಶ್ರೀಗಳ ಪರ- ವಿರೋಧ ಪ್ರತಿಭಟನೆ, ಹೇಳಿಕೆ -ಪ್ರತಿ ಹೇಳಿಕೆ ಬರುತ್ತಲೇ ಇವೆ. ಇದರ ಬೆನ್ನಲ್ಲೇ ಹೆಬ್ಬಾಳದ ಶಾಖಾ ಮಠದ ಹಿರಿಯ ಸ್ವಾಮೀಜಿಗಳಾದ ಮಹಾಂತ ರುದ್ರ ಸ್ವಾಮೀಜಿ ಅವರನ್ನು ಮುರುಘಾ ಮಠದ ಪ್ರಭಾರ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಮುರುಘಾ ಮಠದ ಪರಂಪರೆ ಬಹಳ ದೊಡ್ಡದು. ಮುರುಘಾ ಶರಣರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾದ ಬಳಿಕ ಮಠವು ಬಿಕೋ ಎನ್ನುತ್ತಿದೆ. ಮಠದಲ್ಲಿ ನೀರವ ಮೌನ ಸೃಷ್ಟಿ ಆಗಿದ್ದು, ಭಕ್ತಗಣ ದುಃಖದಲ್ಲಿದೆ. ಇಂಹ ಪರಿಸ್ಥಿತಿಯಲ್ಲಿ ಜವಾಬ್ದಾರಿ ನಿಭಾಯಿಸುವುದು ಅಷ್ಟು ಸುಲಭವಂತೂ ಅಲ್ಲ. ತುಂಬಾ ಕಠಿಣ ಪರಿಸ್ಥಿತಿ ಇದು. ಈ ಕಾರಣಕ್ಕೆ ಮಹಾಂತ ರುದ್ರ ಸ್ವಾಮೀಜಿ ಅವರನ್ನು ಯಾಕೆ ಪ್ರಭಾರ ಉತ್ತರಾಧಿಕಾರಿಯನ್ನಾಗಿ ಮಾಡಲಾಗಿದೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.
Breaking:ಮುರುಘಾ ಶರಣರನ್ನು 4 ದಿನ ಪೊಲೀಸ್ ಕಸ್ಟಡಿಗೆ ವಹಿಸಿದ ಕೋರ್ಟ್
1981ರಿಂದಲೂ ಹೆಬ್ಬಾಳದ ಶಾಖಾ ಮಠದಲ್ಲಿ ಕಾರ್ಯ ನಿರ್ವಹಿಸಿರುವ ಮಹಾಂತ ರುದ್ರ ಸ್ವಾಮೀಜಿ ಅಪ್ಪಟ ಗೋಪ್ರೇಮಿ ಆಗಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿಯೂ ಇವರು ನಿಪುಣರಾಗಿದ್ದಾರೆ. ಸೇವಾ ಕೈಂಕರ್ಯಗಳು ಧಾರ್ಮಿಕ ವಿಧಿ ವಿಧಾನಗಳು, ಪೂಜೆ, ಪುನಸ್ಕಾರ, ಸತ್ಕಾರ, ಬಂದವರಿಗೆ ನೆರವಾಗುವುದು, ಶಿಕ್ಷಣ ಹೀಗೆ ಹಲವು ಸಮಾಜಮುಖಿ ಕಾರ್ಯಗಳಿಗೆ ಹೆಸರುವಾಸಿ ಆಗಿದ್ದಾರೆ.
ಶಾಖ ಮಠದ ಇತಿಹಾಸ
ಇದು ಶೂನ್ಯ ಪೀಠದ ಪ್ರಥಮ ಅಧ್ಯಕ್ಷರಾದ ಅಲ್ಲಮಪ್ರಭು ಅವರಿಂದ ರಚಿತವಾದ ಮಠ ಎನ್ನಲಾಗುತ್ತದೆ. ಹೆಬ್ಬಾಳದಲ್ಲಿರುವ ಈ ಶಾಖಾ ಮಠಕ್ಕೆ 350 ವರ್ಷಗಳ ಇತಿಹಾಸ ಇದೆ. ಆಗಿನಿಂದಲೂ ಮಠಕ್ಕೆ ಯಾರೇ ಬಂದರೂ ಸತ್ಕಾರ ಮಾಡಲಾಗುತ್ತಿದ್ದು, ಅನ್ನದಾನದ ತಾಣ ಅಂತಲೇ ಈ ಮಠ ಪ್ರಸಿದ್ಧಿ ಪಡೆದಿದೆ. ಅಲ್ಲದೇ ಮಠದಲ್ಲಿ ಸ್ವಾಮೀಜಿಗಳಾಗಿರುವವರು ಪವಾಡ ಪುರುಷರು ಅಂತಲೇ ಪ್ರಸಿದ್ಧಿ ಪಡೆದಿದ್ದಾರೆ. ಶಿವಯೋಗಿ ಮಹಾರುದ್ರ ಸ್ವಾಮೀಜಿ ಅವರು ಜೀವಂತವಾಗಿ ಇಲ್ಲಿ ಲಿಂಗೈಕ್ಯರಾಗಿದ್ದಾರೆ ಎಂಬ ನಂಬಿಕೆ ಇದೆ. ಬಸವಲಿಂಗ ಸ್ವಾಮೀಜಿ ಅವರಿಗೆ ಇಂದಿಗೂ ಪವಾಡ ಪುರುಷ ಅಂತಲೇ ಕರೆಯಲಾಗುತ್ತದೆ. ಇವರು ಕ್ಯಾಮೆರಾಗಳ ಮುಂದೆಯೇ ಬರುತ್ತಿರಲಿಲ್ಲ. ಕೊನೆಗೆ ಶ್ರೀಗಳು ಯಾವ ರೀತಿಯಲ್ಲಿ ಇದ್ದರು ಹಾಗೆಯೇ ತಾಮ್ರದ ಪ್ಲೇಟ್ನಲ್ಲಿ ಚಿತ್ರ ಬರೆಯಲಾಗಿದೆ. ಇಲ್ಲಿ ದೀಪಕಂಬ, ಕಲ್ಲಿನ ಮಠ ಸೇರಿದಂತೆ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ.
ಪೀಠಾಧಿಪತಿಯಾಗಿ ಶಾಖ ಮಠಕ್ಕೆ 41 ವರ್ಷ ಸೇವೆ
ಕಾರ್ತಿಕ ಮಾಸದಲ್ಲಿ ಇಲ್ಲಿ ಒಂದು ತಿಂಗಳುಗಳ ಕಾಲ ದೀಪ ಉರಿಯುವಂತೆ ನೋಡಿಕೊಳ್ಳಲಾಗುತ್ತದೆ. ದೀಪ ಕೆಟ್ಟು ಹೋಗದಂತೆ ಉರಿಸಲಾಗುತ್ತದೆ. ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ಇಲ್ಲಿ ವಿದ್ಯಾಭ್ಯಾಸ ನೀಡಲಾಗುತ್ತದೆ. ಜೊತೆಗೆ ಅಕ್ಷರ ಕ್ರಾಂತಿ ಮಾಡಲು ಸಹ ಶ್ರಮಿಸಲಾಗಿದೆ. ಇನ್ನು ಮಹಾಂತರುದ್ರ ಸ್ವಾಮೀಜಿ ಅವರು ಈ ಮಠದ ಪೀಠಾಧಿಪತಿಯಾಗಿ 41 ವರ್ಷಗಳು ಆಗಿವೆ. ಸುದೀರ್ಘವಾದ ತಮ್ಮ ಸನ್ಯಾಸತ್ವದಲ್ಲಿ ಎಂದಿಗೂ ಕಪ್ಪುಚುಕ್ಕೆ ಅಂಟಿಸಿಕೊಂಡವರಲ್ಲ.
ಸಮಾಜಮುಖಿ ಕಾರ್ಯಗಳಿಗೆ ಹೆಚ್ಚು ಒತ್ತು
ಗೋವುಗಳು, ಕೃಷಿ ಎಂದರೆ ಇವರಿಗೆ ಪಂಚಪ್ರಾಣ. ಗೋವುಗಳನ್ನು ಸಾಕುವುದರ ಜೊತೆಗೆ ತಾವೇ ನೇಗಿಲು ಹಿಡಿದು ಉಳುಮೆ ಮಾಡಿ, ಬೆಳೆಗಳನ್ನು ಬೆಳೆಯುತ್ತಾರೆ. ಕಸಾಯಿ ಖಾನೆಗೆ ಹೋಗುತ್ತಿದ್ದ ಎಷ್ಟೋ ಎತ್ತುಗಳು, ವಯಸ್ಸಾದ ಜಾನುವಾರುಗಳನ್ನು ಇಲ್ಲಿಗೆ ತಂದು ಬಿಡಲಾಗುತ್ತದೆ. ಆದರೂ ಶ್ರೀಗಳು ಇದುವರೆಗೂ ಬೇಸರ ವ್ಯಕ್ತಪಡಿಸದೇ, ಅವುಗಳ ಆರೈಕೆ ಮಾಡಿಕೊಂಡು ಬಂದಿದ್ದಾರೆ. ಇಲ್ಲಿರುವ ಗೋವುಗಳ ಹಾಲನ್ನು ಕರೆಯದೇ, ಹಾಲನ್ನು ಕರುಗಳಿಗೆ ಬಿಡಲಾಗುತ್ತದೆ. ಅಮೃತ್ ಮಹಲ್, ಮಲ್ನಾಡ್ ಗಿಡ್ಡ, ಕಿಲಾರ್ ಸೇರಿದಂತೆ ಬೇರೆ ಬೇರೆ ದೇಶಿ ತಳಿಗಳ ಗೋವುಗಳು ಇವರು ಪೋಷಣೆ ಮಾಡುತ್ತಿದ್ದಾರೆ.
'ಈಗಲೇ ಬೇರೆ ವಿಚಾರಗಳನ್ನು ಹೇಳುವುದಿಲ್ಲ'
ನಾಲ್ಕು ದಶಕಗಳ ಕಾಲ ಪೀಠಾಧಿಪತಿ ಆಗುವುದು ಅಂದರೆ ಸುಲಭದ ಮಾತಲ್ಲ. ನಿಷ್ಕಳಂಕ ವ್ಯಕ್ತಿತ್ವ, ತಾಳ್ಮೆ ಗುಣ ಇರಬೇಕು. ಇಷ್ಟೆಲ್ಲಾ ಗುಣಗಳು ಇರುವ ಕಾರಣದಿಂದ ಮುರುಘಾ ಮಠಕ್ಕೆ ಪ್ರಭಾರ ಉತ್ತರಾಧಿಕಾರಿಯನ್ನಾಗಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಮಹಾಂತರುದ್ರ ಸ್ವಾಮೀಜಿ ಮಾತನಾಡಿ, "ನಾನು ಗುರುವಾರ ರಾತ್ರಿ 10:30ಕ್ಕೆ ಮಠಕ್ಕೆ ಬಂದಿದ್ದೇನೆ. ಶ್ರೀಗಳೆಲ್ಲರೂ ಸೇರಿ ಚರ್ಚೆ ಮಾಡುತ್ತಿದ್ದೇವೆ. ಈಗಲೇ ಬೇರೆ ವಿಚಾರಗಳನ್ನು ಹೇಳಲು ಆಗುವುದಿಲ್ಲ," ಎಂದು ಪ್ರತಿಕ್ರಿಯೆ ನೀಡಿದರು.