ಹರಿಹರ ಶಾಸಕರಿಂದ ಬಡವರಿಗೆ 10 ಸಾವಿರ ಆಹಾರ ಕಿಟ್ ವಿತರಣೆ
ದಾವಣಗೆರೆ, ಏಪ್ರಿಲ್ 22: ಹರಿಹರ ಕ್ಷೇತ್ರದ ಶಾಸಕ ಎಸ್. ರಾಮಪ್ಪ ಅವರ ಪತ್ನಿ ಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಶಾಸಕರು ತಮ್ಮ ಕ್ಷೇತ್ರದಲ್ಲಿಂದು ಬಡವರಿಗೆ 10 ಸಾವಿರಕ್ಕೂ ಹೆಚ್ಚು ಆಹಾರ ಕಿಟ್ ವಿತರಿಸಿದರು.
ಲಾಕ್ ಡೌನ್ ಹಿನ್ನೆಲೆ ಬಡವರು, ಕೂಲಿ ಕಾರ್ಮಿಕರು ಜೀವನ ಮಾಡುವುದು ಕಷ್ಟವಾದ ಹಿನ್ನೆಲೆಯಲ್ಲಿ, ಶಾಸಕರು ಆಹಾರ ಕಿಟ್ ವಿತರಿಸುತ್ತಿದ್ದಾರೆ. ಸರ್ಕಾರ ನೀಡುವ ಅಕ್ಕಿ, ಗೋಧಿ ಹೊರತು ಪಡಿಸಿ ಉಳಿದ ಅಗತ್ಯ ವಸ್ತುಗಳಾದ ಜೋಳ, ಖಾರದ ಪುಡಿ, ಎಣ್ಣೆ, ಉಪ್ಪು, ಸಕ್ಕರೆ, ಬೇಳೆ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಕಿಟ್ ವಿತರಿಸಿದರು. ಶಾಸಕರಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಸಾಥ್ ನೀಡಿದ್ದು, ಮನೆ ಮನೆಗೆ ತೆರಳಿ ಬಡವರಿಗೆ ಆಹಾರ ಕಿಟ್ ವಿತರಿಸಿದರು.

ಆಹಾರ ಕಿಟ್ ವಿತರಣೆ ನಂತರ ಮಾತನಾಡಿದ ಅವರು, ಲಾಕ್ ಡೌನ್ ನಿಂದ ಬಡ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ವೈಯಕ್ತಿಕವಾಗಿ ನನ್ನ ಕೈಲಾದಷ್ಟು ಸಹಾಯ ಮಾಡುವ ಉದ್ದೇಶದಿಂದ ಆಹಾರ ಕಿಟ್ ವಿತರಿಸುತ್ತಿದ್ದೇನೆ. ಸರ್ಕಾರ ಬಡವರಿಗೆ ಅಕ್ಕಿ, ಗೋಧಿ ಮಾತ್ರ ನೀಡುತ್ತಿದೆ ಎಂದರು.
ನಗರ, ಗ್ರಾಮೀಣ ಪ್ರದೇಶ ಸೇರಿ 10 ರಿಂದ 15 ಸಾವಿರ ಆಹಾರ ಕಿಟ್ ವಿತರಣೆ ಮಾಡುವ ಯೋಜನೆ ಇದೆ. ಸರ್ಕಾರವೂ ಕೂಡ ಇನ್ನೂ ಹೆಚ್ಚಿನ ಪಡಿತರವನ್ನು ಜನರಿಗೆ ನೀಡಬೇಕು ಎಂದು ಶಾಸಕ ಎಸ್. ರಾಮಪ್ಪ ಒತ್ತಾಯಿಸಿದರು.

ಪತ್ನಿಗೆ ಆಸ್ಪತ್ರೆಯಲ್ಲಿ ಆಪರೇಷನ್ ನಡೆಯುತ್ತಿದೆ. ಆದರೆ, ಕ್ಷೇತ್ರದ ಜನತೆಗೆ ಆಹಾರ ಕಿಟ್ ವಿತರಿಸುವ ಮಾತು ಕೊಟ್ಟಿದ್ದೆ. ಹೀಗಾಗಿ ಮೊದಲು ಬಡವರ ಸೇವೆ ಮುಖ್ಯವೆಂದುಕೊಂಡು ಇವತ್ತು ಆಹಾರ ಕಿಟ್ ವಿತರಿಸಿದ್ದೇನೆ ಎಂದು ಶಾಸಕ ರಾಮಪ್ಪ ಹೇಳಿದರು.












Click it and Unblock the Notifications