ಧಾರವಾಡ ಅಪಘಾತ; ಮೃತರ ಕುಟುಂಬದವರಿಂದ ಪ್ರತಿಭಟನೆ
ದಾವಣಗೆರೆ, ಜನವರಿ 29: ಧಾರವಾಡ ತಾಲೂಕಿನ ಇಟಿಗಟ್ಟಿ ಬಳಿ ಜನವರಿ 15ರಂದು ಟ್ರಕ್ ಮತ್ತು ಟೆಂಪೋ ಟ್ರಾವೆಲರ್ ಮುಖಾಮುಖಿ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ದಾವಣಗೆರೆ ಮೂಲದ 13 ಜನರು ಮೃತಪಟ್ಟಿದ್ದರು.
ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ ಕುಟುಂಬ ಸದಸ್ಯರು ಹಾಗೂ ಹುಬ್ಬಳ್ಳಿ-ಧಾರವಾಡ ನಾಗರಿಕರ ಸುರಕ್ಷತಾ ವೇದಿಕೆ ವತಿಯಿಂದ ಫೆಬ್ರವರಿ 6ರಂದು ದಾವಣಗೆರೆಯಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.
ಆಡಳಿತ ವರ್ಗದ ನಿರ್ಲಕ್ಷ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ. ಫೆಬ್ರವರಿ 6ರಂದು ಬೆಳಗ್ಗೆ 7 ಗಂಟೆಗೆ ದಾವಣಗೆರೆ ನಗರದ ಐಎಂಎ ಹಾಲ್ ಆವರಣದಿಂದ ಅಪಘಾತ ಸ್ಥಳಕ್ಕೆ ಜಾಥ ಕೈಗೊಳ್ಳಲಾಗಿದೆ.

"ಅಪಘಾತ ನಡೆದ ಸ್ಥಳದಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರುವ ಕಾರ್ಯಕ್ರಮ ನಡೆಯಲಿದೆ. ನಂತರ ಸರ್ಕಾರದ ವೈಫಲ್ಯದ ವಿರುದ್ಧ ಹಾಗೂ ಇಂತಹ ದುರ್ಘಟನೆಗಳು ಮರುಕಳಿಸದಂತೆ ಅಲ್ಲಿನ ಪೊಲೀಸ್, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುತ್ತದೆ. ಘಟನೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ" ಎಂದು ನೊಂದ ಕುಟುಂಬದ ಡಾ. ರವಿಕುಮಾರ್ ಮಾಹಿತಿ ನೀಡಿದ್ದಾರೆ.
"ಕಳೆದ 25 ವರ್ಷದಿಂದಲೂ ಈ ರಸ್ತೆಯಲ್ಲಿ ಇಂತಹ ಅಪಘಾತಗಳು ಸಾಮಾನ್ಯವಾಗಿವೆ. ಎಲ್ಲಾ ಕಡೆ 6 ಪಥದ ರಾಷ್ಟ್ರೀಯ ಹೆದ್ದಾರಿಗಳಿದ್ದರೂ, ಈ ಭಾಗದಲ್ಲಿ ಮಾತ್ರ ಇನ್ನೂ 2 ಪಥದ ಹೆದ್ದಾರಿ ಇದೆ. ಈ ಸಮಸ್ಯೆ ಸರಿಪಡಿಸಬೇಕಾದ ಸರ್ಕಾರಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿವೆ. ಇದರಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ" ಎಂದು ನೊಂದ ಕುಟುಂಬದ ಡಾ. ರಮೇಶ್ ಆರೋಪಿಸಿದ್ದಾರೆ.
ದಾವಣಗೆರೆಯಿಂದ ಲೇಡಿಸ್ ಕ್ಲಬ್ನ ಸದಸ್ಯರು ಗೋವಾಗೆ ಪ್ರವಾಸಕ್ಕೆ ತೆರಳುವ ವೇಳೆ ಧಾರವಾಡ ಬಳಿ ಜನವರಿ 15ರಂದು ಬೆಳಗ್ಗೆ ರಸ್ತೆ ಅಪಘಾತ ನಡೆದಿತ್ತು. ಈ ಅಪಘಾತದಲ್ಲಿ ಒಟ್ಟು 13 ಜನರು ಮೃತಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ರಾಜಕೀಯ ನಾಯಕರು ಅಪಘಾತದ ಬಗ್ಗೆ ಟ್ವೀಟ್ ಮಾಡಿದ್ದರು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದರು.












Click it and Unblock the Notifications