ಧಾರವಾಡ ಅಪಘಾತ; ಮತ್ತೊಬ್ಬ ಮಹಿಳೆ ಸಾವು, ಅಂಗಾಂಗ ದಾನ
ದಾವಣಗೆರೆ, ಜನವರಿ 24: ಧಾರವಾಡ ತಾಲೂಕಿನ ಇಟಿಗಟ್ಟಿ ಬಳಿ ಜನವರಿ 15ರಂದು ಟ್ರಕ್ ಮತ್ತು ಟೆಂಪೋ ಟ್ರಾವೆಲರ್ ಮುಖಾಮುಖಿ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ದಾವಣಗೆರೆಯಿಂದ ಗೆಳತಿಯರ ಜೊತೆ ಗೋವಾಗೆ ಪ್ರವಾಸಕ್ಕೆ ತೆರಳುವ ವೇಳೆ ಧಾರವಾಡ ಬಳಿ ಜನವರಿ 15ರಂದು ಬೆಳಗ್ಗೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ವೇದಾ ಮಂಜುನಾಥ್ (47) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ.
ಅಪಘಾತದ ನಡೆದ ದಿನ ಸ್ಥಳದಲ್ಲೇ 11 ಮಂದಿ ಮೃತಪಟ್ಟಿದ್ದರು. 5 ಮಂದಿ ಗಾಯಗೊಂಡಿದ್ದರು. ಗಾಯಗೊಂಡಿದ್ದ ಮಹಿಳೆಯರಲ್ಲಿ ಶಿವಮೊಗ್ಗ ಮೂಲದ ವೇದಾ ಮಂಜುನಾಥ್ ಸಹ ಒಬ್ಬರು. ಗಾಯಗೊಂಡ ವೇದಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಏರ್ ಲಿಫ್ಟ್ ಮೂಲಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ವೇದಾ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರಿಂದಾಗಿ ಅಪಘಾತ ಪ್ರಕರಣದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಅಂಗಾಂಗ ದಾನ; ವೇದಾ ಮಂಜುನಾಥ್ ಅವರ ಕುಟುಂಬ ಸಾವಿನ ದುಃಖದಲ್ಲಿ ಸಾರ್ಥಕತೆ ಮೆರೆದಿದೆ. ವೇದಾ ಅವರ ಇಚ್ಚೆಯಂತೆ ಎರಡು ಕಿಡ್ನಿ ಹಾಗೂ ಯಕೃತ್ ದಾನ ಮಾಡಲಾಗಿದೆ.
ಮೃತ ವೇದಾ ಮಂಜುನಾಥ್ ಅವರು ಶಿವಮೊಗ್ಗ ನಗರ ಕ್ಷೇತ್ರದ ಮಾಜಿ ಶಾಸಕ ಎಚ್. ಎಂ. ಚಂದ್ರಶೇಖರಪ್ಪ ಅವರ ಸಹೋದರನ ಸೊಸೆ. ಮೃತರ ಆತ್ಮಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.












Click it and Unblock the Notifications