ಮೊದಲು ಮಾಸ್ಕ್ ಹಾಕಿಕೊಳ್ಳಿ ಸರ್: ಶಾಸಕರಿಗೆ ತಿಳಿ ಹೇಳಿದ ದಾವಣಗೆರೆ ಡಿಸಿ
ದಾವಣಗೆರೆ, ನವೆಂಬರ್ 26: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದ್ದರೂ ಸೋಂಕು ಹರಡುವಿಕೆಯ ಭೀತಿ ತಗ್ಗಿಲ್ಲ. ಈ ಕುರಿತು ಜನರಲ್ಲಿ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಆದರೆ ಜನಪ್ರತಿನಿಧಿಗಳೂ ಕೊರೊನಾ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ.
ದಾವಣಗೆರೆಯಲ್ಲೂ ಗುರುವಾರ ಇಂಥದ್ದೊಂದು ಘಟನೆ ನಡೆಯಿತು. ಶಾಸಕರೊಬ್ಬರು ಮಾಸ್ಕ್ ಧರಿಸದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಜಿಲ್ಲಾಧಿಕಾರಿಗಳು ಅವರಿಗೆ ಮಾಸ್ಕ್ ಧರಿಸುವಂತೆ ಸೂಚನೆ ನೀಡಿದ ಪ್ರಸಂಗ ನಡೆಯಿತು.
ಹೊಸ ಅಭಿಯಾನ; ಮಾಸ್ಕ್ ಧರಿಸಿ, ಇಲ್ಲಾ ದಂಡ ಕಟ್ಟಿ!
ದಾವಣಗೆರೆ ತಾಲೂಕಿನ ಆನಗೋಡ ಗ್ರಾಮ ಒನ್ ಕಾರ್ಯಕ್ರಮವನ್ನು ಗುರುವಾರ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ಅವರು ಉದ್ಘಾಟನೆ ಮಾಡಿದರು. ಈ ವೇಳೆ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಉಸ್ತುವಾರಿ ಸಚಿವರೊಂದಿಗೆ ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ಅವರು ಫಲಾನುಭವಿಗಳಿಗೆ ಸರ್ಟಿಫಿಕೇಟ್ ನೀಡುತ್ತಿದ್ದರು.
ಈ ಸಂದರ್ಭದಲ್ಲಿ ಶಾಸಕ ಲಿಂಗಣ್ಣ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಮಹಂತೇಶ್ ಬೀಳಗಿ ಅವರು, "ಮೊದಲು ಮಾಸ್ಕ್ ಹಾಕಿಕೊಳ್ಳಿ ಸರ್" ಎಂದು ಕೂಗಿ ಹೇಳಿದರು, ಇದರಿಂದ ಸ್ವಲ್ಪ ವಿಚಲಿತರಾಗಿ ಮುಜುಗರಕ್ಕೆ ಒಳಗಾದರು ಶಾಸಕ ಲಿಂಗಣ್ಣ ಮಾಸ್ಕ್ ಎಳೆದುಕೊಂಡರು.
ದಾವಣಗೆರೆಯಲ್ಲಿ ಕೊರೊನಾ ಪ್ರಕರಣ: ದಾವಣಗೆರೆಯಲ್ಲಿ ಒಟ್ಟು 21506 ಪ್ರಕರಣಗಳು ದಾಖಲಾಗಿದ್ದು, 21003 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 240 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 263 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.