ಮೊದಲು ಮಾಸ್ಕ್ ಹಾಕಿಕೊಳ್ಳಿ ಸರ್: ಶಾಸಕರಿಗೆ ತಿಳಿ ಹೇಳಿದ ದಾವಣಗೆರೆ ಡಿಸಿ
ದಾವಣಗೆರೆ, ನವೆಂಬರ್ 26: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದ್ದರೂ ಸೋಂಕು ಹರಡುವಿಕೆಯ ಭೀತಿ ತಗ್ಗಿಲ್ಲ. ಈ ಕುರಿತು ಜನರಲ್ಲಿ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಆದರೆ ಜನಪ್ರತಿನಿಧಿಗಳೂ ಕೊರೊನಾ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ.
ದಾವಣಗೆರೆಯಲ್ಲೂ ಗುರುವಾರ ಇಂಥದ್ದೊಂದು ಘಟನೆ ನಡೆಯಿತು. ಶಾಸಕರೊಬ್ಬರು ಮಾಸ್ಕ್ ಧರಿಸದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಜಿಲ್ಲಾಧಿಕಾರಿಗಳು ಅವರಿಗೆ ಮಾಸ್ಕ್ ಧರಿಸುವಂತೆ ಸೂಚನೆ ನೀಡಿದ ಪ್ರಸಂಗ ನಡೆಯಿತು.
ದಾವಣಗೆರೆ ತಾಲೂಕಿನ ಆನಗೋಡ ಗ್ರಾಮ ಒನ್ ಕಾರ್ಯಕ್ರಮವನ್ನು ಗುರುವಾರ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ಅವರು ಉದ್ಘಾಟನೆ ಮಾಡಿದರು. ಈ ವೇಳೆ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಉಸ್ತುವಾರಿ ಸಚಿವರೊಂದಿಗೆ ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ಅವರು ಫಲಾನುಭವಿಗಳಿಗೆ ಸರ್ಟಿಫಿಕೇಟ್ ನೀಡುತ್ತಿದ್ದರು.

ಈ ಸಂದರ್ಭದಲ್ಲಿ ಶಾಸಕ ಲಿಂಗಣ್ಣ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಮಹಂತೇಶ್ ಬೀಳಗಿ ಅವರು, "ಮೊದಲು ಮಾಸ್ಕ್ ಹಾಕಿಕೊಳ್ಳಿ ಸರ್" ಎಂದು ಕೂಗಿ ಹೇಳಿದರು, ಇದರಿಂದ ಸ್ವಲ್ಪ ವಿಚಲಿತರಾಗಿ ಮುಜುಗರಕ್ಕೆ ಒಳಗಾದರು ಶಾಸಕ ಲಿಂಗಣ್ಣ ಮಾಸ್ಕ್ ಎಳೆದುಕೊಂಡರು.
ದಾವಣಗೆರೆಯಲ್ಲಿ ಕೊರೊನಾ ಪ್ರಕರಣ: ದಾವಣಗೆರೆಯಲ್ಲಿ ಒಟ್ಟು 21506 ಪ್ರಕರಣಗಳು ದಾಖಲಾಗಿದ್ದು, 21003 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 240 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 263 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.












Click it and Unblock the Notifications