ದಾವಣಗೆರೆ ಮೇಯರ್ ಸ್ಥಾನ ಎಸ್ಟಿಗೆ ಮೀಸಲು: ಬಿಜೆಪಿಗೆ ಮುಖಭಂಗ, ಕೈ ಪಾಳೆಯದಲ್ಲಿ ಸಂತಸ...!
ದಾವಣಗೆರೆ, ಸೆ.30: ದಾವಣಗೆರೆ ಮಹಾನಗರ ಪಾಲಿಕೆಯ ನಾಲ್ಕನೇ ಅವಧಿಯ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಪಡಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರಕ್ಕೆ ಮುಖಭಂಗ ಆಗಿದೆ. ಈಗ ಮೇಯರ್ ಸ್ಥಾನಕ್ಕೆ ಎಸ್ಟಿ ಹಾಗೂ ಉಪಮೇಯರ್ ಸಾಮಾನ್ಯ ಮಹಿಳೆಗೆ ನಿಗದಿಯಾಗಿ ಆದೇಶ ಹೊರಬಿದ್ದಿದೆ. ಈ ಮೂಲಕ ಬೆಣ್ಣೆನಗರಿಯಲ್ಲಿ ಮೇಯರ್ ಗದ್ದುಗೆ ಗುದ್ದಾಟಕ್ಕೆ ಮತ್ತೊಮ್ಮೆ ಪಾಲಿಕೆ ಸಾಕ್ಷಿಯಾಗಲಿದೆ.
2023ರ ಫೆಬ್ರವರಿ ತಿಂಗಳಿಗೆ ಮೂರನೇ ಅವಧಿಗೆ ಆಯ್ಕೆಯಾಗಿರುವ ಜಯಮ್ಮ ಗೋಪಿನಾಯ್ಕ್ ಆಡಳಿತಾವಧಿ ಮುಕ್ತಾಯವಾಗಲಿದೆ. ನಾಲ್ಕನೇ ಅವಧಿಗೆ ಮೇಯರ್ ಪಟ್ಟ ಗಿಟ್ಟಿಸಲು ಚದುರಂಗದಾಟ ಕಾವೇರಲಿದೆ.
ಬಿಎಸ್ವೈ ಆದರ್ಶದಂತೆ ಎಲ್ಲಾ ಜಾತಿ, ವರ್ಗಕ್ಕೆ ಧ್ವನಿಯಾಗಿ ಕೆಲಸ ಮಾಡುವೆ: ಬಿವೈ ವಿಜಯೇಂದ್ರ
ರಾಜ್ಯ ಸರ್ಕಾರವು ಕಾನೂನಿನ ಪ್ರಕಾರ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಎಸ್ಟಿ ಮೀಸಲಾತಿ ನೀಡಬೇಕಿತ್ತು. ಎರಡು ಬಾರಿ ಸಾಮಾನ್ಯ ಹಾಗೂ ಮೂರನೇ ಅವಧಿಗೆ ಎಸ್ಸಿ ಮಹಿಳಾ ಸ್ಥಾನ ಮೀಸಲಾತಿ ಆಗಿತ್ತು. ನಾಲ್ಕನೇ ಬಾರಿ ಎಸ್ಟಿಗೆ ಮೀಸಲಾತಿ ಘೋಷಣೆ ಮಾಡಬೇಕಿತ್ತು. ಆದರೆ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಎಂದು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಪಾಲಿಕೆ ಸದಸ್ಯೆ ಸವಿತಾ ಗಣೇಶ್ ಹುಲ್ಲುಮನಿ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕಾನೂನಿನ ಪ್ರಕಾರ ಎಸ್ಟಿಗೆ ಮೀಸಲಾತಿ ನಿಗದಿಪಡಿಸಿ ತೀರ್ಪು ನೀಡಿತು. ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಈಗ ಅಧಿಸೂಚನೆ ಹೊರಡಿಸಿದ್ದು, ದಾವಣಗೆರೆ ಎಸ್ಟಿಗೆ ಮೇಯರ್ ಸ್ಥಾನ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಇನ್ನು ಕಾಂಗ್ರೆಸ್ ನಲ್ಲಿ ಐವರು ಎಸ್ಟಿ ಸಮುದಾಯಕ್ಕೆ ಸೇರಿದ ಸದಸ್ಯರಿದ್ದರೆ, ಬಿಜೆಪಿಯಲ್ಲಿ ಈ ಸಮುದಾಯದ ಯಾವ ಕಾರ್ಪೊರೇಟರ್ ಇಲ್ಲ.
ಹೈಕೋರ್ಟ್ ಆದೇಶಕ್ಕೆ ತಲೆ ಬಾಗಿದ ರಾಜ್ಯ ಸರ್ಕಾರ
ಇನ್ನು 2019ರಲ್ಲಿ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 22 ಸ್ಥಾನಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ ಕೇವಲ 17 ಸ್ಥಾನಗಳಲ್ಲಿ ಗೆದ್ದಿತ್ತು. ಪಕ್ಷೇತರರು, ಎಂಎಲ್ ಸಿ, ಶಾಸಕರು, ಸಂಸದರ ಮತ ಚಲಾವಣೆಗೊಂಡು ಪಾಲಿಕೆಯಲ್ಲಿ ಮೇಯರ್ ಆಗಿ ಅಜಯ್ ಕುಮಾರ್ ಆಯ್ಕೆಯಾಗಿದ್ದರು. ಆ ನಂತರ ಎಸ್. ಟಿ. ವೀರೇಶ್ ಅವರು ಮೇಯರ್ ಆಗಿ ಒಂದು ವರ್ಷ ಅಧಿಕಾರ ನಡೆಸಿದರು. ಜಯಮ್ಮ ಗೋಪಿನಾಯ್ಕ್ ಅವರು ಮೂರನೇ ಅವಧಿಯ ಮೇಯರ್ ಆಗಿ ಅಧಿಕಾರ ನಡೆಸುತ್ತಿದ್ದಾರೆ. ಈಗ ಹೈಕೋರ್ಟ್ ಆದೇಶ ನೀಡಿರುವ ಕಾರಣ ಸರ್ಕಾರ ತಲೆಬಾಗಲೇಬೇಕಿದೆ. ಜಿಲ್ಲೆಯ ಬಿಜೆಪಿ ನಾಯಕರಿಗೆ ಮುಖಭಂಗವಾಗಿದೆ.
ಇನ್ನು ಕಾಂಗ್ರೆಸ್ ಸದಸ್ಯರು ಕೈ ಕೊಟ್ಟು ಬಿಜೆಪಿಗೆ ಹಾರಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು ಐದು ವರ್ಷಗಳ ಕಾಲ ಅಧಿಕಾರ ನಡೆಸುವ ಕನಸು ಕಂಡಿತ್ತು. ಆದ್ರೆ ಈಗ ಬಿಜೆಪಿಗೆ ನಿರಾಸೆ ಆಗಿದೆ. 2023-24ರ ಅವಧಿಗೆ ಎಸ್ಟಿ ಮೇಯರ್ ಸ್ಥಾನಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಿರುವುದರಿಂದ ಬಿಜೆಪಿ ಪಾಲಿಕೆಯ ಸದಸ್ಯರಿಗೆ ನಿರಾಸೆ ಆಗಿದೆ. ವಿಜಯಪುರಕ್ಕೆ ಸಾಮಾನ್ಯ ಮಹಿಳೆ ನಿಗದಿಯಾಗಬೇಕಿತ್ತು. ದಾವಣಗೆರೆಗೆ ಎಸ್ಟಿ ಆಗಬೇಕಿತ್ತು. ಆದರೆ ಸರ್ಕಾರ ಈ ರೀತಿ ಮಾಡಿರಲಿಲ್ಲ. ಹೈಕೋರ್ಟ್ ಆದೇಶದ ಬಳಿಕ ಪಾಲನೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಕಾನೂನಿನಲ್ಲಿ ನಮಗೆ ಜಯ ಸಂದಿದೆ ಎಂದ ಕಾಂಗ್ರೆಸ್
ಇನ್ನು ಪ್ರಸ್ತುತ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 20 ಪಾಲಿಕೆ ಸದಸ್ಯರನ್ನು ಹೊಂದಿದೆ. ನಾಲ್ವರು ಪಕ್ಷೇತರರು ಹಾಗೂ ಒಬ್ಬರು ಜೆಡಿಎಸ್ ಕಾರ್ಪೊರೇಟರ್ ಇದ್ದಾರೆ. ಇತ್ತ ಕಾನೂನಿನಲ್ಲಿ ನಮಗೆ ಜಯ ಸಂದಿದೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದರೆ, ಬಿಜೆಪಿಯವರು ತಾವು ಕೋರ್ಟ್ ಮೊರೆ ಹೋಗುವುದಾಗಿ ಹೇಳುತ್ತಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆಯ ನಾಲ್ಕನೇ ಅವಧಿಯ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಕೆಟಗೆರಿ ನಿಗದಿಪಡಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರಕ್ಕೆ ಮುಖಭಂಗ ಆಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯ ಹೊರಬರುತ್ತದೆ ಎಂಬುದಕ್ಕೆ ಪಾಲಿಕೆ ಮೇಯರ್ ಸ್ಥಾನ ಎಸ್ಟಿ ಮೀಸಲಾತಿ ನೀಡಿರುವುದೇ ಸಾಕ್ಷಿ. ಇನ್ನು ಮುಂದಾದರೂ ಬಿಜೆಪಿ ಪಾಠ ಕಲಿಯಬೇಕು ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಹೇಳಿದರು.
ಅಧಿಕಾರ ದುರುಪಯೋಗ ಮಾಡಿಕೊಂಡರೆ, ಕಾನೂನಿಗೆ ತಲೆಬಾಗಬೇಕು
ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಮಾತನಾಡಿ, 'ಪಾಲಿಕೆ ಚುನಾವಣೆ ನಡೆದಾಗ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಿಜೆಪಿ ದಾವಣಗೆರೆಯಲ್ಲಿ ವಾಸ ಇಲ್ಲದ ತೇಜಸ್ವಿನಿ ರಮೇಶ್ ಸೇರಿದಂತೆ ವಿಧಾನ ಪರಿಷತ್ ಸದಸ್ಯರ ಹೆಸರು ಸೇರಿಸಿ ಮೋಸದಿಂದ ಅಧಿಕಾರಕ್ಕೇರಿತ್ತು. ಈಗ ಹೈಕೋರ್ಟ್ ಆದೇಶದಿಂದ ರಾಜ್ಯ ಸರ್ಕಾರವು ಈಗ ಪಾಲಿಕೆಯ ನಾಲ್ಕನೇ ಅವಧಿಗೆ ಎಸ್ಟಿ ಮೀಸಲಾತಿ ನೀಡಬೇಕು. ಅಧಿಕಾರ ದುರುಪಯೋಗ ಮಾಡಿಕೊಂಡರೆ ಒಂದಲ್ಲಾ ಒಂದು ದಿನ ಸತ್ಯ ಹೊರಬರುತ್ತದೆ. ಹಾಗೆಯೇ ನಮ್ಮ ಹೋರಾಟಕ್ಕೆ ಈಗ ಜಯ ಸಿಕ್ಕಿದೆ' ಎಂದು ಹೇಳಿದರು.
'ರಾಜ್ಯ ಸರ್ಕಾರವು ಕಾನೂನು ಹಾಗೂ ನಿಯಮದ ಪ್ರಕಾರ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಎಸ್ಟಿ ಮೀಸಲಾತಿ ನೀಡಬೇಕಿತ್ತು. ಆದರೆ, ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಎಂದು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಹೈಕೋರ್ಟ್ ಕಾನೂನಿನ ಪ್ರಕಾರ ಎಸ್ಟಿಗೆ ಮೀಸಲಾತಿ ನಿಗದಿಪಡಿಸಿ ತೀರ್ಪು ನೀಡಿದೆ. ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ದಾವಣಗೆರೆ ಎಸ್ಟಿಗೆ ಮೇಯರ್ ಸ್ಥಾನ ನಿಗದಿಪಡಿಸಿದೆ. ಈ ಮೂಲಕ ಬಿಜೆಪಿಯ ಕುತಂತ್ರ ರಾಜಕಾರಣ ಬಟಾಬಯಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ನಲ್ಲಿ ಐವರು ಎಸ್ಟಿ ಸಮುದಾಯದ ಪಾಲಿಕೆ ಸದಸ್ಯರು
ಬಿಜೆಪಿಯಲ್ಲಿ ಯಾವ ಪಾಲಿಕೆಯ ಸದಸ್ಯರು ಎಸ್ಟಿ ಸಮುದಾಯಕ್ಕೆ ಸೇರಿದವರಿಲ್ಲ. ಕಾಂಗ್ರೆಸ್ ಪಕ್ಷದಿಂದ ಐವರು ಪಾಲಿಕೆಯ ಸದಸ್ಯರು ಎಸ್ಟಿ ಸಮುದಾಯಕ್ಕೆ ಸೇರಿದವರಿದ್ದಾರೆ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಕಾಂಗ್ರೆಸ್ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಯಾವ ನಿರ್ಧಾರ ತೆಗೆದುಕೊಂಡರೂ ಬದ್ಧ ಎಂದು ಹೇಳಿದರು.
ಇನ್ನು ಕಾಂಗ್ರೆಸ್ ಮುಖಂಡ ಹುಲ್ಲುಮನಿ ಗಣೇಶ್ ಮಾತನಾಡಿ, ಹೈಕೋರ್ಟ್ ನಲ್ಲಿ ಎಸ್ಟಿ ಸಮುದಾಯಕ್ಕೆ ಅನ್ಯಾಯ ಆಗಿರುವ ಕುರಿತಂತೆ ಪಾಲಿಕೆ ಸದಸ್ಯೆ ಸವಿತಾ ಗಣೇಶ್ ಹುಲ್ಲುಮನಿ ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಸರ್ಕಾರವು ಸೆ. 30ರೊಳಗೆ ಮೀಸಲಾತಿ ನಿಗದಿಪಡಿಸುವುದಾಗಿ ಹೇಳಿತ್ತು. ಅದರಂತೆ ಎಸ್ಟಿಗೆ ದಾವಣಗೆರೆ ಮೇಯರ್ ಕೆಟಗೆರಿ ಅಧಿಸೂಚನೆ ಪ್ರಕಟಿಸಲಾಗಿದೆ. ಬಿಜೆಪಿಯವರು ಕಾನೂನು ಮೊರೆ ಹೋಗಲಿ. ನಮ್ಮದೇನೂ ಅಭ್ಯಂತರ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯ ಕೇಳಲು ಎಲ್ಲರಿಗೂ ಹಕ್ಕಿದೆ. ಅವರ ಸರ್ಕಾರ ಪ್ರಕಟಿಸಿರುವ ಅಧಿಸೂಚನೆಯ ವಿರುದ್ಧವೇ ಹೋಗುತ್ತಾರೆ ಎಂದರೆ ಬೇಡ ಎನ್ನುವವರು ಯಾರು? ಎಂದು ತಿರುಗೇಟು ನೀಡಿದರು.
ನಾನು ಹೋರಾಟ ಮಾಡಿದೆ ಎಂಬ ಕಾರಣಕ್ಕೆ ನನ್ನ ಪತ್ನಿಯೇ ಪಾಲಿಕೆಯ ಮೇಯರ್ ಆಗಬೇಕು ಎಂಬುದಿಲ್ಲ. ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಿದ್ದೇವೆ. ಪಾಲಿಕೆಯ 20 ಸದಸ್ಯರಲ್ಲಿಯೂ ಒಗ್ಗಟ್ಟಿದೆ. ಎಸ್ಟಿ ಸಮುದಾಯವರೂ ಒಂದಾಗಿದ್ದೇವೆ. ಆಪರೇಷನ್ ಕಮಲಕ್ಕೆ ಬಲಿಯಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.