ಕೌಶಲಯುಕ್ತ, ವೃತ್ತಿ ಆಧಾರಿತ, ಮೌಲಿಕ ಶಿಕ್ಷಣಕ್ಕೆ ದಾವಣಗೆರೆ ವಿಶ್ವವಿದ್ಯಾಲಯ ಒತ್ತು
ದಾವಣಗೆರೆ, ಆಗಸ್ಟ್ 19: "ಅಂತಾರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸ್ಪರ್ಧೆಯಲ್ಲಿ ನಮ್ಮ ಮಕ್ಕಳನ್ನು ಕೌಶಲಯುಕ್ತವಾಗಿ, ವೃತ್ತಿಪರವಾಗಿ ಸಿದ್ಧಗೊಳಿಸುವ ಉದ್ದೇಶದಿಂದ ಆರಂಭಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದಾವಣಗೆರೆ ವಿಶ್ವವಿದ್ಯಾನಿಲಯ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಅನುಷ್ಠಾನಕ್ಕೆ ತರಲು ಸಜ್ಜಾಗಿದೆ," ಎಂದು ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಶರಣಪ್ಪ. ವಿ. ಹಲಸೆ ಹೇಳಿದರು.
"ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಉದ್ದೇಶಿಸಲಾಗಿದೆ. ಅಲ್ಲದೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ವ್ಯಾಸಂಗದ ವಿಷಯವನ್ನು ವಿದ್ಯಾರ್ಥಿಗಳೇ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ."
"ಪಠ್ಯಕ್ರಮ, ಕಲಿಕೆ ಜೊತೆ ಕೌಶಲ, ಭಾಷೆಗೂ ಆದ್ಯತೆ ನೀಡಲಾಗುತ್ತಿದೆ. ದೇಸಿ ಸಂಸ್ಕೃತಿ, ಮಾನವೀಯ ಮೌಲ್ಯ, ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ಉದ್ದೇಶವನ್ನೂ ಒಳಗೊಂಡಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಮಕ್ಕಳ ಬದುಕಿನ ಭವಿಷ್ಯ ರೂಪಿಸಲು ನೆರವಾಗಲಿದೆ," ಎಂದು ಕುಲಪತಿ ಪ್ರೊ. ಶರಣಪ್ಪ. ವಿ. ಹಲಸೆ ತಿಳಿಸಿದರು.

"ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರಲು ಕಾರ್ಯ ಯೋಜನೆ ರೂಪಿಸಿದ್ದು, ಸ್ಥಳೀಯ ಸಂಸ್ಕೃತಿಗೆ ಅನುಗುಣವಾಗಿ ಪಠ್ಯಕ್ರಮ ಮತ್ತು ಬೋಧನಾ ಕ್ರಮವನ್ನು ಹೊಸ ನೀತಿಯಲ್ಲಿ ಅಳವಡಿಸಲಾಗಿದೆ. ಈ ಯೋಜನೆಯನ್ನು ಕಲಿಕೆಯ ಚಿತ್ರಣ ಬದಲಿಸಿ, ಸ್ವಾವಲಂಬಿ ಭಾರತ ಕಟ್ಟಲು ನೆರವಾಗಲಿದೆ."
"ನೂತನ ನೀತಿಯು ಶೈಕ್ಷಣಿಕ ಕ್ಷೇತ್ರದಲ್ಲಿ ಪರಿವರ್ತನೆಯ ಅವಕಾಶಗಳನ್ನು ತೆರೆದಿಡಲಿದೆ. ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಎದುರಾಗುವ ಎಲ್ಲ ಸಮಸ್ಯೆ, ಆತಂಕಗಳನ್ನು ನಿವಾರಿಸಲು ವಿಶ್ವವಿದ್ಯಾನಿಲಯ ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಲು ಬದ್ಧವಾಗಿ ಕೆಲಸ ಮಾಡಲಿದೆ."
"ಉನ್ನತ ಶಿಕ್ಷಣದಲ್ಲಿ ಗುರುತರ ಬದಲಾವಣೆಗೆ ಈಗಿರುವ ಶೈಕ್ಷಣಿಕ ರಚನೆಯ ಕ್ರಮವನ್ನು ಬದಲಿಸಲಾಗಿದೆ. ಪ್ರಸ್ತುತ ಮೂರು ವರ್ಷದ ಸ್ನಾತಕ ಪದವಿಯಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ. ಕೌಶಲ ಆಧಾರಿತ ಶಿಕ್ಷಣವೇ ಮುಖ್ಯವಾಗಿದ್ದು, ವಿದ್ಯಾರ್ಥಿ ಪದವಿ ಮುಗಿಸಿದ ನಂತರ ಉದ್ಯೋಗಕ್ಕೆ ಸಿದ್ಧನಾಗುವಂತೆ ತಯಾರು ಮಾಡಲು ಪ್ರಸ್ತುತ ಶಿಕ್ಷಣ ಪದ್ಧತಿ ಸಹಕಾರಿ ಆಗಲಿದೆ."

"ಹೊಸ ಪದ್ಧತಿಯಲ್ಲಿ ಎಂ.ಫಿಲ್ ಪದವಿಗೆ ಅವಕಾಶವಿಲ್ಲ. ಅದಕ್ಕೆ ಬದಲಾಗಿ ಪಿಎಚ್ಡಿಗೆ ಆದ್ಯತೆ ನೀಡಲಾಗಿದೆ. ಪದವಿ ಶಿಕ್ಷಣದಲ್ಲಿ ಆಸಕ್ತಿಯ ಒಂದು ವಿಷಯವನ್ನು ಮುಖ್ಯವಾಗಿ ಅಧ್ಯಯನ ಮಾಡಿದರೆ, ಎರಡು ವಿಷಯಗಳನ್ನು ಮೈನರ್ ಆಗಿ ಕಲಿಯಬಹುದು."
"ಇಲ್ಲವಾದರೆ ಎರಡು ಮುಖ್ಯ ವಿಷಯಗಳನ್ನು ಕಲಿಯಬಹುದು. ವಿದ್ಯಾರ್ಥಿಗಳು ವಿಜ್ಞಾನ, ವಾಣಿಜ್ಯ, ಶಿಕ್ಷಣ, ಕಲಾ ಸೇರಿದಂತೆ ಯಾವುದೇ ವಿಷಯದ ಪದವಿಯನ್ನು ಓದಲು ಅವಕಾಶ ಇದೆ. ಉದಾಹರಣೆಗೆ ವಿಜ್ಞಾನ ವಿಷಯಗಳ ಜೊತೆಗೆ ಕಲಾ, ವಾಣಿಜ್ಯ ವಿಭಾಗದ ಯಾವುದೇ ವಿಷಯದೊಂದಿಗೆ ಪದವಿ ಪಡೆಯಬಹುದು. ಅಲ್ಲದೆ ಕೋರ್ಸ್ಗಳನ್ನು, ಕಾಲೇಜುಗಳನ್ನು, ವಿಶ್ವವಿದ್ಯಾಲಯವನ್ನೂ ಸೇರಿ ಓದು ಮುಂದುವರಿಸಲು ಅವಕಾಶ ಇದೆ. ಓದಿನ ಮಧ್ಯೆ ಸೀಮಿತ ಅವಧಿಗೆ ವಿಶ್ರಾಂತಿ ಪಡೆಯಲೂ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ನಂತರ ಮುಂದಿನ ಕೋರ್ಸ್ ಮುಂದುವರಿಸಬಹುದು."
ಮಾತೃ ಭಾಷೆಯಲ್ಲಿ ಶಿಕ್ಷಣಕ್ಕೆ ಆದ್ಯತೆ
"ಕಲಿಕೆ, ಬೋಧನೆಗಳಲ್ಲಿ ತಂತ್ರಜ್ಞಾನದ ಬಳಕೆಗೆ ಒತ್ತು, ಮಾತೃಭಾಷೆ ಜೊತೆಗೆ ಭಾಷೆ, ವಿಷಯಗಳ ಅಧ್ಯಯನಕ್ಕೂ ಅವಕಾಶ ನೀಡಲಾಗಿದೆ. ವೃತ್ತಿಪರವಾದ ಮೌಲಿಕ ಶಿಕ್ಷಣವು ಪ್ರಸ್ತುತ ನೂತನ ಶಿಕ್ಷಣದ ನೀತಿಯಗುರಿ ಮತ್ತು ಉದ್ದೇಶವಾಗಿದೆ. ವಿದ್ಯಾರ್ಥಿಗಳಿಗೆ ಪದವಿ ನಂತರ ಸ್ವಾವಲಂಬಿ ಬದುಕು ನಿರ್ಮಾಣಕ್ಕೆ ಅವಕಾಶ ನೀಡುವ ಶಿಕ್ಷಣ ಇದಾಗಿದೆ. ಪದವಿ ಹಂತದಿಂದಲೇ ಆಯ್ಕೆ ವಿಷಯದಲ್ಲಿ ಪರಿಣತಿ ಪಡೆಯುವುದು, ಆಸಕ್ತಿಯ ವಿಷಯದಲ್ಲಿ ವೃತ್ತಿಪರ ಕೌಶಲಗಳನ್ನು ರೂಢಿಸಿಕೊಳ್ಳುವುದು ಮತ್ತು ಅದರ ಜೀವನ ಕಟ್ಟಿಕೊಳ್ಳಲು ಬೇಕಾದ ತರಬೇತಿ ನೀಡುವುದು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣದ ಗುರಿ ಸಾಧಿಸಲು ಉತ್ತಮ ಬೋಧನಾ ಶೈಲಿ, ಸುಧಾರಿತ ಪಠ್ಯಕ್ರಮ ಮತ್ತು ಬೋಧನಾ ಕ್ರಮ ಅಭಿವೃದ್ಧಿಗೆ ಗಮನ ನೀಡಲಾಗುವುದು," ಎಂದರು.

ಈ ವರ್ಷ ಪದವಿ ಹಂತದಲ್ಲಿ ನೂತನ ಶಿಕ್ಷಣ ನೀತಿ ಅನುಷ್ಠಾನಕ್ಕೆ ಆದ್ಯತೆ
"ಆರಂಭದಲ್ಲಿ ವಿಶ್ವವಿದ್ಯಾನಿಲಯದ ಐದು ವಿಭಾಗಗಳಲ್ಲಿ ಪದವಿ ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ವಾಣಿಜ್ಯ ಶಾಸ್ತ್ರ, ಎಂಬಿಎ, ಕಂಪ್ಯೂಟರ್ ವಿಜ್ಞಾನ, ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ಅಧ್ಯಯನ ವಿಭಾಗಗಳಲ್ಲಿ ಪದವಿ ತರಗತಿಗಳು ಆರಂಭಿಸಲಾಗುವುದು. ಸಾಧಕ ಬಾಧಕಗಳನ್ನು ಗಮನಿಸಿ ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಎಲ್ಲ ವಿಭಾಗಗಳೂ ಆರಂಭವಾಗಲಿವೆ."
"ಪದವಿ ಶಿಕ್ಷಣವನ್ನು ಪ್ರಸ್ತುತ ಮೂರು ವರ್ಷದ ಬದಲಾಗಿ ನಾಲ್ಕು ವರ್ಷಕ್ಕೆ ವಿಸ್ತರಿಸಲಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಒಂದು ವರ್ಷ ಪೂರೈಸಿದ ನಂತರ ಆಸಕ್ತಿ ಇರದಿದ್ದರೆ ಓದು ನಿಲ್ಲಿಸಬಹುದು ಅಥವಾ ಬೇರೊಂದು ಕೋರ್ಸ್ ಮಾಡಬಹುದು. ಆಗ ವಿದ್ಯಾರ್ಥಿಗೆ ಒಂದು ವರ್ಷ ಕೋರ್ಸ್ನ ಪ್ರಮಾಣಪತ್ರ ನೀಡಲಾಗುತ್ತದೆ. ಎರಡು ವರ್ಷಕ್ಕೆ ಡಿಪ್ಲೊಮಾ, ಮೂರು ವರ್ಷಕ್ಕೆ ಪದವಿ ಪ್ರಮಾಣ ಪತ್ರ ನೀಡಲಾಗುವುದು. ನಾಲ್ಕು ವರ್ಷ ಮುಗಿಸಿದರೆ ಆನರ್ಸ್ ಪದವಿ ನೀಡಲಾಗುತ್ತದೆ," ಎಂದು ಕುಲಪತಿ ತಿಳಿಸಿದರು.
"ಒಂದು ವೇಳೆ ವಿದ್ಯಾರ್ಥಿಯು ಸ್ನಾತಕೋತ್ತರ ಪದವಿ ಮಾಡಲು ಇಚ್ಛಿಸಿದರೆ ಮೂರು ವರ್ಷ ಪದವಿ ಓದಿದವರಿಗೆ ಎರಡು ಹಾಗೂ ನಾಲ್ಕು ವರ್ಷ ಪದವಿ ಓದಿದವರಿಗೆ ಒಂದು ವರ್ಷ ಸ್ನಾತಕೋತ್ತರ ಪದವಿಗೆ ಅವಕಾಶವಿದೆ. ಪಿಎಚ್ಡಿ ಪದವಿ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳು ನಾಲ್ಕು ವರ್ಷದ ಆನರ್ಸ್ ಪದವಿ ನಂತರ ಅವಕಾಶ ಪಡೆಯಬಹುದು ಅಥವಾ ಸ್ನಾತಕೋತ್ತರ ಪದವಿ ನಂತರವೂ ಪಡೆಯಬಹುದು," ಎಂದು ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಶರಣಪ್ಪ. ವಿ. ಹಲಸೆ ಹೇಳಿದರು.
Recommended Video
"ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಮಾರ್ಪಾಟುಗಳನ್ನು ಮಾಡಲಾಗಿದೆ. ಲಭ್ಯವಿರುವ ಕೋರ್ಸ್ಗಳಲ್ಲಿ ಶಿಕ್ಷಣವನ್ನು ಸಮರ್ಪಕವಾಗಿ, ಸಮರ್ಥವಾಗಿ ಅನುಷ್ಠಾನಕ್ಕೆ ತರಲು ಆದ್ಯತೆ ನೀಡಲಾಗಿದೆ. ಪ್ರತಿ ಹಂತದಲ್ಲಿಯೂ ವಿದ್ಯಾರ್ಥಿಗಳ ಮೌಲ್ಯಮಾಪನ ನಡೆಸಿ, ಅವರಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವ ಹಾಗೂ ಯಾವುದೇ ಸವಾಲನ್ನು ಸ್ವೀಕರಿಸಿ ಎದುರಿಸುವ ಸಾಮರ್ಥ್ಯವನ್ನು ರೂಪಿಸುವುದಕ್ಕೆ ಮನ್ನಣೆ ನೀಡಲಾಗುವುದು," ಎಂದು ಕುಲಪತಿ ಪ್ರೊ. ಶರಣಪ್ಪ. ವಿ. ಹಲಸೆ ನುಡಿದರು.












Click it and Unblock the Notifications