ಕ್ರಾಂತಿ ಮಾಡಿದ ಸಿಇಒ, ದಾವಣಗೆರೆ ಬಯಲು ಶೌಚ ಮುಕ್ತ ಜಿಲ್ಲೆ
ದಾವಣಗೆರೆ, ಆಗಸ್ಟ್ 29 : ಬಯಲು ಶೌಚಾಲಯ ಮುಕ್ತ ಜಿಲ್ಲೆಗಳ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದ್ದ ದಾವಣಗೆರೆ ಇಂದು 3ನೇ ಸ್ಥಾನಕ್ಕೆ ಬಂದು ನಿಂತಿದ. ಅಕ್ಟೋಬರ್ 2ರಂದು ಜಿಲ್ಲೆಯನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಲು ಸಿದ್ಧತೆಗಳು ನಡೆಯುತ್ತಿವೆ.
ದಾವಣಗೆರೆ ಜಿಲ್ಲೆಯಲ್ಲಿ ನಡೆದ ಈ ಕ್ರಾಂತಿಯ ಹಿಂದಿ ಶಕ್ತಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತಿ. ಗ್ರಾಮಗಳಲ್ಲಿ ಶೌಚಾಲಯ ಇಲ್ಲದ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದಾರೆ ಸಿಇಒ ಅಶ್ವತಿ ಅವರು.

ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ಶೌಚಾಲಯ ಕಟ್ಟಿಸಲು ಒಪ್ಪದ ವ್ಯಕ್ತಿಯೊಬ್ಬರ ಮನೆಯಲ್ಲಿ ತಾವೇ ಸ್ವತಃ ಗುದ್ದಲಿ ಹಿಡಿದು ಶೌಚಾಲಯಕ್ಕೆ ಗುಂಡಿ ತೋಡುವ ಮೂಲಕ ಅಶ್ವತಿ ಅವರು ಸುದ್ದಿ ಮಾಡಿದ್ದಾರೆ.
ಸ್ವಚ್ಛ ಭಾರತ ಅಭಿಯಾನ 2017-18ನೇ ಸಾಲಿನಲ್ಲಿ ಜಿಲ್ಲೆಯನ್ನು ಬಯಲು ಶೌಚ ಮುಕ್ತವಾಗಿಸಲು ಅವರು ಪಣ ತೊಟ್ಟಿದ್ದಾರೆ. ಅದಕ್ಕಾಗಿ ಶೌಚಾಲಯ ನಿರ್ಮಿಸಿಕೊಂಡ ಗರ್ಭಿಣಿಯರಿಗೆ ಸೀಮಂತ, ಬಾಣಂತಿಯರಿಗೆ ಮಡಿಲು ತುಂಬುವ ಯೋಜನೆ, ಶೌಚಾಲಯ ನಿರ್ಮಿಸಿಕೊಂಡ ಶಾಲಾ ಮಕ್ಕಳಿಗೆ ಪ್ರಶಂಸಾ ಪತ್ರ ನೀಡುವ ಕಾರ್ಯ ಮಾಡುತ್ತಿದ್ದಾರೆ.
ಮೂರು ತಿಂಗಳಿನಿಂದ ಪ್ರತಿ ಹಳ್ಳಿಗೂ ತೆರಳಿ ಗ್ರಾಮಸ್ಥರಿಗೆ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಇವರ ಕಾರ್ಯದ ಫಲವಾಗಿ ಬಯಲು ಶೌಚಾಲಯ ಮುಕ್ತ ಜಿಲ್ಲೆಗಳ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದ್ದ ದಾವಣಗೆರೆ ಇಂದು 3ನೇ ಸ್ಥಾನಕ್ಕೆ ಬಂದಿದೆ.
ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯನ್ನು ಅಕ್ಟೋಬರ್ 2ರಂದು ಬಯಲು ಶೌಚಾಲಯ ಮುಕ್ತ ಜಿಲ್ಲೆಯಾಗಿ ಘೋಷಣೆ ಮಾಡಬೇಕು ಎಂಬುದು ಅಶ್ವತಿ ಅವರ ಕನಸು. ಅದಕ್ಕಾಗಿ ಪ್ರಯತ್ನಗಳನ್ನು ಮಾಡುತ್ತಿದ್ದು, ಜನರು ಇವರಿಗೆ ಸಹಕಾರ ನೀಡುತ್ತಿದ್ದಾರೆ.












Click it and Unblock the Notifications