"ವಿದ್ಯುತ್ ಅಕ್ರಮ-ಸಕ್ರಮ ಯೋಜನೆ ಅಡಿಯಲ್ಲಿ ರೈತರಿಂದ ಹಗಲು ದರೋಡೆ"
ದಾವಣಗೆರೆ, ಜೂನ್ 22: ವಿದ್ಯುತ್ ಅಕ್ರಮ-ಸಕ್ರಮ ಯೋಜನೆ ಅಡಿಯಲ್ಲಿ ಗುತ್ತಿಗೆದಾರರು ರೈತರಿಂದ ಹಗಲು ದರೋಡೆ ಮಾಡುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಗಳು ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ತಾಲೂಕು ಪಂಚಾಯಿತಿ ಸದಸ್ಯರು ಬೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Recommended Video
ಸೋಮವಾರ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯ ಮುರುಗೇಂದ್ರಪ್ಪ ಮಾತನಾಡಿ, ಗಂಗಾ ಕಲ್ಯಾಣ ಮತ್ತು ವಿದ್ಯುತ್ ಅಕ್ರಮ ಸಕ್ರಮದಡಿಯಲ್ಲಿ ಗುತ್ತಿಗೆದಾರರು ರೈತರಿಂದ ಅಂದಾಜು 30-40 ಸಾವಿರ ಹಣವನ್ನು ಅಕ್ರಮವಾಗಿ ಪಡೆಯುತ್ತಿದ್ದಾರೆ. ವಿದ್ಯುತ್ ಅಕ್ರಮ ಸಕ್ರಮದಡಿ ನೂರಾರು ರೈತರು ಫಲಾನುಭವಿಗಳಿದ್ದು, ಅವರಿಂದ ಹಣ ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಿದರು.
ಬೆಸ್ಕಾಂ ಎಇಇ ಜಿ.ಎಂ. ನಾಯ್ಕ್ ಉತ್ತರಿಸಿ, ಇದು ನಮ್ಮ ಗಮನಕ್ಕೆ ಬಂದಿಲ್ಲ. ಹಣ ಕೊಟ್ಟಿರುವ ರೈತರು ನಮ್ಮ ಗಮನಕ್ಕೆ ತಂದರೆ ಕೂಡಲೇ ನಾವು ಆ ಗುತ್ತಿಗೆದಾರನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಅಕ್ರಮವಾಗಿ ಹಣ ದೋಚುತ್ತಿರುವ ಗುತ್ತಿಗೆದಾರರನ್ನು ಬ್ಲಾಕ್ಲೀಸ್ಟ್ ಗೆ ಹಾಕಲು ಸಾಧ್ಯವಾಗುತ್ತದೆ ಎಂದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ರವೀಂದ್ರ ಮಾತನಾಡಿ, 2024ರೊಳಗಾಗಿ ಪ್ರತಿ ಮನೆಗೂ ಕುಡಿಯುವ ನೀರಿನ ನಳಗಳ ಸಂಪರ್ಕಕ್ಕೆ ಕೇಂದ್ರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಉಳಿದಂತೆ ಕೃಷಿ, ಶಿಕ್ಷಣ, ಆಹಾರ ಮತ್ತು ನಾಗರೀಕ ಸರಬರಾಜು ಸೇರಿದಂತೆ ಉಳಿದ ಇಲಾಖೆಗಳ ಬಗ್ಗೆ ಚರ್ಚೆ ನಡೆಸಲಾಯಿತು.












Click it and Unblock the Notifications