ನಮಾಜ್ಗೆ ಅನುಮತಿ ಕೊಟ್ಟರೆ ವಿಧಾನಸಭೆಯೊಳಗೆ ನುಗ್ಗಿ ಹನುಮಾನ್ ಚಾಲಿಸ್ ಪಠಣ: ಶ್ರೀರಾಮಸೇನೆ ಎಚ್ಚರಿಕೆ
ದಾವಣಗೆರೆ, ಜುಲೈ 16: ಕಾಂಗ್ರೆಸ್ ಶಾಸಕ ಎಂ. ಬಿ. ಫಾರೂಕ್ ವಿಧಾನಸಭೆಯೊಳಗೆ ನಮಾಜ್ ಮಾಡಲು ಅವಕಾಶ ಕೇಳಿದ್ದು ಅಕ್ಷಮ್ಯ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸ್ಪೀಕರ್ ಒಂದು ವೇಳೆ ನಮಾಜ್ಗೆ ಅವಕಾಶ ಮಾಡಿಕೊಟ್ಟರೆ ಶ್ರೀರಾಮಸೇನೆ ಹೋರಾಟ ಮಾಡುತ್ತದೆ. ವಿಧಾನಸಭೆಯೊಳಗೆ ನುಗ್ಗಿ ಹನುಮಾನ್ ಚಾಲಿಸ್ ಪಠಣ ಮಾಡುತ್ತೇವೆ ಎಂದು ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಾರೂಕ್ ಅಸಂಬದ್ಧವಾಗಿ ಮಾತನಾಡಿದರೆ ಸಹಿಸಲ್ಲ. ಬಿ. ಇ. ಎಂಜಿನಿಯರಿಂಗ್ ಮಾಡಿರುವ ಫಾರೂಕ್ ಓರ್ವ ದೊಡ್ಡ ಉದ್ಯಮಿ. ವಿಧಾನಸಭೆ ಪ್ರಜಾಪ್ರಭುತ್ವದ ದೇಗುಲ. ಇವರೇನೂ ಅವಿದ್ಯಾವಂತರಲ್ಲ. ಎಂ. ಬಿ. ಫಾರೂಕ್ ನಡೆ ಖಂಡಿಸುತ್ತೇವೆ. ವಿಧಾನ ಸಭಾಧ್ಯಕ್ಷರು ಕಡತದಿಂದ ಈ ಮಾತು ತೆಗೆಯಬೇಕು. ಕೂಡಲೇ ಫಾರೂಕ್ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಸದನದಿಂದ ಒದ್ದು ಹೊರಹಾಕಬೇಕು ಎಂದು ಹೇಳಿದರು.

ಗೋ ಶಾಲೆಗೆ ಆರ್ಎಸ್ಎಸ್ಗೆ 35 ಎಕರೆಯನ್ನು ಬಿಜೆಪಿ ಸರ್ಕಾರ ನೀಡಿತ್ತು. ಅದೇನೂ ಪಬ್, ರೆಸ್ಟೋರೆಂಟ್ಗೆ ಕೊಟ್ಟಿರಲಿಲ್ಲ. ಗೋ ಸಂರಕ್ಷಣೆಗಾಗಿ ಕೊಟ್ಟಿರುವ ಜಾಗ ತಡೆ ಹಿಡಿದಿರುವುದು ಕಾಂಗ್ರೆಸ್ ಸರ್ಕಾರದ ಕ್ರಮ ಖಂಡನೀಯ. ವಕ್ಫ್ ಬೋರ್ಡ್ ಕಬಳಿಸಿರುವ ಸಾವಿರಾರು ಎಕರೆ ಭೂಮಿ, ಜಾಗ ಕಬಳಿಸಿರುವ ಕುರಿತಂತೆ ದಾಖಲೆ ಸಮೇತ ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ. ಈ ಆಸ್ತಿ ವಾಪಸ್ ಪಡೆಯಿರಿ ತಾಕತ್ತಿದ್ದರೆ. ಸಿದ್ದರಾಮಯ್ಯ ಅವರು ಮುಸ್ಲಿಂ ತುಷ್ಟೀಕರಣ ಮಾಡುವುದು ಬಿಡದಿದ್ದರೆ ರಾಜ್ಯದ ಜನರು ಧೂಳಿಪಟ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.
ದಾವಣಗೆರೆಯಲ್ಲಿ ಲವ್ ಜಿಹಾದ್ ನಡೆಯುತ್ತಿದೆ. ದೊಡ್ಡ ದೊಡ್ಡ ಕುಟುಂಬಗಳನ್ನು ಟಾರ್ಗೆಟ್ ಮಾಡಿ ಇಂಥ ಕೃತ್ಯ ನಡೆಸಲಾಗುತ್ತಿದೆ. ಲವ್ ಜಿಹಾದ್, ಮತಾಂತರ ತಡೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರು ಪ್ರಯತ್ನಿಸಿದ್ದರು. ಮಹಿಳಾ ಪೊಲೀಸ್ ತಂಡ ರಚಿಸಿ ಲವ್ ಜಿಹಾದ್, ಮತಾಂತರ ತಡೆಯಲು ಮುಂದಾಗಬೇಕು. ಇಲ್ಲದಿದ್ದರೆ ಶ್ರೀರಾಮಸೇನೆ ರಸ್ತೆಗಿಳಿಯಲಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬಂದರೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ತಿಳಿಸಿದರು.
5 ಲಕ್ಷ ಸಹಿ ಸಂಗ್ರಹ ಅಭಿಯಾನ
ಸಮಾನ ನಾಗರಿಕ ಕಾನೂನು ಜಾರಿಗೆ ಒತ್ತಾಯಿಸಿ ರಾಜ್ಯಾದ್ಯಂತ ಐದು ಲಕ್ಷ ಸಹಿ ಸಂಗ್ರಹಿಸುವ ಅಭಿಯಾನವನ್ನು ಜುಲೈ 18ರಿಂದ 28ರವರೆಗೆ ನಡೆಸಲು ತೀರ್ಮಾನಿಸಿದೆ. ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಿದೆ ಎಂದು ಹೇಳಿದರು.

ಹತ್ತು ದಿನಗಳ ಕಾಲ ರಾಜ್ಯದಲ್ಲಿ 5 ಲಕ್ಷ ಸಹಿ ಸಂಗ್ರಹ ಮಾಡಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಅವರಿಗೆ ಸಲ್ಲಿಕೆ ಮಾಡಲಾಗುವುದು. ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಏಕಕಾಲದಲ್ಲಿ ಆರಂಭವಾಗಲಿದೆ. ಗಣ್ಯ ವ್ಯಕ್ತಿಗಳು, ಸ್ವಾಮೀಜಿಗಳು, ವಕೀಲರು, ವೈದ್ಯರು ಸೇರಿದಂತೆ ಗಣ್ಯರು ಚಾಲನೆ ಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾನೂನಿನ ಅಸಮಾನತೆ ನಿವಾರಣೆ ಆಗಬೇಕು. ವಿವಾಹ ಅಸಮಾನತೆಗೆ ನಿವಾರಣೆಯಾಗಬೇಕು. ಸ್ತ್ರೀ ಸ್ವಾತಂತ್ರ್ಯ ಭೇದ ಭಾವ ತೊಲಗಬೇಕು. ಆಸ್ತಿ ಹಂಚಿಕೆ ತಾರತಮ್ಯ ಇರಬಾರದು. ಮಹಿಳೆ ಶೋಷಣೆ ಮಾಡುವಂಥ ಕಾನೂನು ಜಾರಿಯಲ್ಲಿರುವುದು ಅಪಾಯಕಾರಿ. ಜನಸಂಖ್ಯೆ, ಕುಟುಂಬ ಯೋಜನೆ ನಿಯಂತ್ರಣ, ಅಪರಾಧ ತಡೆಗೆ ಒತ್ತಾಯಿಸಿ ಈ ಅಭಿಯಾನ ನಡೆಸಲಾಗುತ್ತಿದೆ. ಈ ಬಾರಿಯ ಲೋಕಸಭೆ ಅಧಿವೇಶನದಲ್ಲಿಯೇ ಸಮಾನ ನಾಗರಿಕ ಕಾನೂನು ಜಾರಿ ಮಂಡನೆಯಾಗಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಸಾಗರ್, ಜಿಲ್ಲಾ ಉಪಾಧ್ಯಕ್ಷ ಆಲೂರು ರಾಜಶೇಖರ್, ಜಿಲ್ಲಾ ಖಜಾಂಚಿ ಶ್ರೀಧರ್, ಡಿ. ಬಿ. ವಿನೋದ್ ರಾಜ್, ಬಿ. ಜಿ ರಾಹುಲ್ ಸೇರಿದಂತೆ ಇತರರು ಹಾಜರಿದ್ದರು.











Click it and Unblock the Notifications