ರೌಡಿಶೀಟರ್ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್
ದಾವಣಗೆರೆ, ಜನವರಿ, 05: ಕಾನೂನು ವಿರೋಧಿ ಚಟುವಟಿಕೆ ನಡೆಸಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ರೌಡಿಶೀಟರ್ಗಳು ಬಾಲಬಿಚ್ಚಿದರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ. ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಖಡಕ್ ಸೂಚನೆ ನೀಡಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲೆಯ ರೌಡಿಗಳ ಪೆರೇಡ್ ವೇಳೆ ಮಾತನಾಡಿದ ಅವರು, ನಗರದಲ್ಲಿ ಸಮಾಜಘಾತುಕ ಪ್ರಕರಣಗಳು ಮತ್ತೆ ಮತ್ತೆ ನಡೆಯುತ್ತಲೇ ಇವೆ. ಇನ್ನು ಮುಂದಿನ ದಿನಗಳಲ್ಲಿ ಇದೇ ವರ್ತನೆ ಮುಂದುವರಿಸಿದರೆ ಕಠಿಣ ಕ್ರಮ ಖಚಿತ. ಜಿಲ್ಲೆಯಲ್ಲಿ 1400 ರೌಡಿಗಳಲಿದ್ದು, ಈ ಪೈಕಿ 207 ರೌಡಿಗಳು ಬಂದಿದ್ದೀರಾ. ಕೊಲೆ, ಸುಲಿಗೆ, ಹಲ್ಲೆ, ದರೋಡೆ ಕೇಸ್ನಲ್ಲಿ 207 ರೌಡಿಶೀಟರ್ಗಳಿದ್ದರೆ, ಇತರೆ 50 ರೌಡಿಶೀಟರ್ಗಳನ್ನು ಕರೆಸಿ ಪೆರೇಡ್ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಗುತ್ತಿಗೆದಾರರ ಸಂಘದವರೆಲ್ಲರೂ ಕಾಂಗ್ರೆಸ್ನ ಚೇಲಾಗಳು: ದಾವಣಗೆರೆಯಲ್ಲಿ ಭೈರತಿ ಬಸವರಾಜ್ ಕಿಡಿ
ಜಿಲ್ಲೆಯಿಂದ ಗಡಿಪಾರು ಮಾಡಲು ಪ್ರಸ್ತಾವನೆ
ಈ ವರ್ಷ 37 ರೌಡಿಗಳು ಹೊಸದಾಗಿ ರೌಡಿಶೀಟರ್ ಪಟ್ಟಿ ಸೇರಿದ್ದಾರೆ. ಸನ್ನಡತೆ ಆಧಾರದ ಮೇಲೆ 40 ರೌಡಿಗಳಿಗೆ ರೌಡಿಶೀಟರ್ ಪಟ್ಟಿಯಿಂದ ಕೈ ಬಿಡಲು ತೀರ್ಮಾನಿಸಲಾಗಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಐವರು ರೌಡಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಮಾಜಘಾತುಕ, ಅಹಿತಕರ, ಬೆದರಿಕೆ, ಕೊಲೆ, ಸುಲಿಗೆ ಸೇರಿದಂತೆ ಯಾವುದೇ ರೀತಿಯ ಅಪರಾಧ ಪ್ರಕರಣಗಳಲ್ಲಿ ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರೌಡಿಶೀಟರ್ಗಳಿಗೆ ಎಸ್ಪಿ ಖಡಕ್ ವಾರ್ನ್
ಈ ಹಿಂದೆ ಅಪರಾಧ ಕೃತ್ಯ ಎಸಗಿದ್ದೀರಾ. ಕೆಲವರು ಉತ್ತಮ ನಡವಳಿಕೆ ರೂಪಿಸಿಕೊಂಡಿದ್ದಾರೆ. ಮತ್ತೆ ಕೆಲವರು ಬಾಲ ಬಿಚ್ಚುತ್ತಿದ್ದಾರೆ. ಇವೆಲ್ಲಾ ವಿಚಾರಗಳು ನಮ್ಮ ಗಮನದಲ್ಲಿವೆ. ನಿಮ್ಮ ವಿಳಾಸ, ಮೊಬೈಲ್ ಹಾಗೂ ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದೇವೆ. ಯಾವುದೇ ಅಪರಾಧ ಕೃತ್ಯದಲ್ಲಿ ತೊಡಗಬೇಡಿ, ಸಮಾಜದಲ್ಲಿ ಉತ್ತಮ ನಡೆತೆಯೊಂದಿಗೆ ಉತ್ತಮ ಪ್ರಜೆಗಳಾಗಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಬಿ. ಬಸರಗಿ, ಗ್ರಾಮಾಂತರ ಉಪ ವಿಭಾಗದ ಎಎಸ್ಪಿ ಕನ್ನಿಕಾ ಸಿಕ್ರಿವಾಲ್, ನಗರ ಉಪ ವಿಭಾಗ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಡಿಸಿಆರ್ಬಿ ಘಟಕದ ಡಿವೈಎಸ್ಪಿ ಬಸವರಾಜ್ ಬಿ.ಎಸ್., ಚನ್ನಗಿರಿ ಉಪ ವಿಭಾಗದ ಡಿವೈಎಸ್ಪಿ ಡಾ. ಕೆ.ಎಂ ಸಂತೋಷ್ ಹಾಗೂ ಪೊಲೀಸ್ ನಿರೀಕ್ಷಕರು, ಪಿಎಸ್ಐಗಳು ಉಪಸ್ಥಿತರಿದ್ದರು.