ಶಾಸಕ ರಾಮಪ್ಪ ಪುತ್ರಿಯ ವಿವಾಹದಲ್ಲಿ ಕೋವಿಡ್ ಉಲ್ಲಂಘನೆ: ನೋಟಿಸ್ ನೀಡಿದ ದಾವಣಗೆರೆ ಡಿಸಿ
ದಾವಣಗೆರೆ, ಜುಲೈ 3: ಶುಕ್ರವಾರದಂದು ಹರಿಹರದಲ್ಲಿ ನಡೆದ ಶಾಸಕ ಎಸ್. ರಾಮಪ್ಪನವರ ಪುತ್ರಿಯ ವಿವಾಹದಲ್ಲಿ ಕೋವಿಡ್ ಉಲ್ಲಂಘನೆಯಾದ ಕಾರಣ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರು ತಹಶೀಲ್ದಾರ ಸೇರಿದಂತೆ ಇತರೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಹರಿಹರ ತಹಶೀಲ್ದಾರ ಕೆ.ಬಿ. ರಾಮಚಂದ್ರಪ್ಪ, ಪಿಎಸ್ಐ ಅವರಿಗೆ ನೋಟಿಸ್ ನೀಡಿರುವ ಜಿಲ್ಲಾಧಿಕಾರಿ, "ಕೋವಿಡ್ ಮಾರ್ಗಸೂಚಿ ಪಾಲನೆ ಆಗದಿದ್ದರೂ ಯಾಕೆ ಕ್ರಮ ಜರುಗಿಸಿಲ್ಲ ಎಂದು ಸಿಪಿಐ ಸತೀಶ್ ಕುಮಾರ್ ಹಾಗೂ ಪಟ್ಟಣ ಪಂಚಾಯಿತಿ ಆಯುಕ್ತೆ ಎಸ್. ಲಕ್ಷ್ಮೀ ಅವರಿಗೂ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ,'' ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ನ ನಾಯಕರು, ಜಿಲ್ಲೆಯ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೇವಲ 40 ಜನರಿಗೆ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗಿತ್ತಾದರೂ, ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಮದುವೆ ಸಮಾರಂಭದಲ್ಲಿ ಸಾಮಾಜಿಕ ಅಂತರ ಉಲ್ಲಂಘನೆ ಸ್ಪಷ್ಟವಾಗಿತ್ತು ಜೊತೆಗೆ ಸ್ಯಾನಿಟೈಸರ್, ಮಾಸ್ಕ್ ಧರಿಸುವ ಪಾಲನೆಯಾಗಿರಲಿಲ್ಲ. ಶಾಸಕರ ಪುತ್ರಿಯ ಮದುವೆ ಎಂಬ ಕಾರಣಕ್ಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ
ಆಕ್ರೋಶಕ್ಕೆ ಕಾರಣವಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಬರುತ್ತಾರೆ ಎಂಬ ಮಾಹಿತಿ ಮೊದಲೇ ಅಧಿಕಾರಿಗಳಿಗೆ ಗೊತ್ತಿತ್ತು. ಈ ವೇಳೆ ಜನ ಜಮಾಯಿಸುವ ಸಾಧ್ಯತೆ ಇರುವ ಸುಳಿವೂ ಇತ್ತು. ಆದರೂ, ಹರಿಹರ ತಹಶೀಲ್ದಾರ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.
"ಸಾಮಾನ್ಯ ಜನರಿಗಾದರೆ ದಂಡ ಹಾಕುತ್ತಾರೆ, ಶಾಸಕರಿಗಾದರೆ ಯಾಕೆ ಅನುಮತಿ ನೀಡಲಾಗಿದೆ. ಕೇವಲ ನೋಟಿಸ್ ನೀಡಿದರೆ ಸಾಕಾ? ಕಾನೂನು ರೀತಿಯಲ್ಲಿ ಶಾಸಕರ ವಿರುದ್ಧವೂ ಕ್ರಮ ಜರುಗಿಸಬೇಕು,'' ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.












Click it and Unblock the Notifications