ದಾವಣಗೆರೆ ವಿಶೇಷ; ಶಾಮನೂರು ಫ್ಯಾಮಿಲಿ v/s ಸಿದ್ದೇಶ್ವರ್ ವಾರ್!
ದಾವಣಗೆರೆ, ಜುಲೈ 05; ದಾವಣಗೆರೆ ನಗರದ ಕೆ. ಬಿ. ಬಡಾವಣೆಯಲ್ಲಿ ಆಯೋಜಿಸಿದ್ದ ಕೊರೊನಾ ಉಚಿತ ಲಸಿಕೆ ಶಿಬಿರದಿಂದ ಶುರುವಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಗ್ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಸಂಸದ ಜಿ. ಎಂ. ಸಿದ್ದೇಶ್ವರ್ ಬೆಂಬಲಿಗರ ವಾಕ್ಸಮರ ಬಿಸಿಲಿನ ಕಾವು ಏರಿದಂತೆ ಜಾಸ್ತಿಯಾಗತೊಡಗಿದೆ.
ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಮಲ್ಲಿಕಾರ್ಜುನ್ ನೇತೃತ್ವದಲ್ಲಿ 200 ಲಸಿಕೆ ನೀಡಲು ನಿರ್ಧರಿಸಲಾಗಿತ್ತು. ಅಂತೆಯೇ ಕೆ. ಬಿ. ಬಡಾವಣೆಯಲ್ಲಿ ಶಿಬಿರವನ್ನೂ ಆಯೋಜಿಸಲಾಗಿತ್ತು. ಸರ್ಕಾರದಿಂದ ನೀಡುತ್ತೇವೆ ಎಂದಿದ್ದ 300 ಕೋವಿಶೀಲ್ಡ್ ಬರಲಿಲ್ಲ. ಸ್ಥಳಕ್ಕೆ ಬಂದಿದ್ದ ಶಿವಶಂಕರಪ್ಪ, ಸಿದ್ದೇಶ್ವರ್ ವಿರುದ್ಧ ಬೆಂಕಿಯಂತ ಹೇಳಿಕೆ ಕೊಟ್ಟಿದ್ದರು. ಬಳಿಕ ಬಿಜೆಪಿಯವರು ಇದಕ್ಕೆ ಪ್ರತಿ ಹೇಳಿಕೆ ನೀಡತೊಡಗಿದರು.
ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಶಾಮನೂರು ಶಿವಶಂಕರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. "ಸಿದ್ದೇಶ್ವರ್ ವಿರುದ್ಧ ಮಾತನಾಡಿದರೆ ಹಗರಣಗಳು, ಹುಳುಕುಗಳನ್ನು ಹೊರ ತೆಗೆಯುತ್ತೇನೆ. ನಾವು ಬೆನ್ನು ತೋರಿಸಿ ಹೋಗುವವರಲ್ಲ. ಎಲ್ಲಾ ಸವಾಲಿಗೆ ಸಿದ್ಧರಿದ್ದೇವೆ. ದಾಖಲೆ ಸಮೇತ ಚರ್ಚೆಗೆ ತಯಾರಿದ್ದೇವೆ. ಹೈಸ್ಕೂಲ್ ಮೈದಾನಕ್ಕೆ ಬರಲಿ" ಎಂಬ ಸವಾಲು ಹಾಕಿದ್ದರು.

ಕಾಂಗ್ರೆಸ್ ಮುಖಂಡರು ಇದಕ್ಕೆ ಪ್ರತಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಕೆಂಡಕಾರಿದರು. ನಾವು ಎಲ್ಲದಕ್ಕೂ ರೆಡಿ ಇದ್ದೇವೆ. ನಮ್ಮಲ್ಲೂ ದಾಖಲಾತಿಗಳಿವೆ. ಚರ್ಚೆಗೆ ನಾವೂ ಸಿದ್ಧರಿದ್ದೇವೆ. ಸಂಸದರಾಗಿ ಸಿದ್ದೇಶ್ವರ್ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ? ಎಂಬುದನ್ನು ಸಾಬೀತುಪಡಿಸಲಿ ಎಂದರು.
ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್ ಅಧಿಕಾರದಲ್ಲಿದ್ದಾಗ ಯಾವೆಲ್ಲಾ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ? ಎಂಬುದನ್ನು ನಾವು ದಾಖಲೆ ಸಮೇತ ನೀಡುತ್ತೇವೆ. ಶಾಮನೂರು ಕುಟುಂಬದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಯಶವಂತರಾವ್ ಹಾಗೂ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ ಮಾತನಾಡಿ, "ಜನರಿಗೆ ಲಸಿಕೆ ಕೊಡಿ ಎಂದರೆ ಎಸ್ಪಿ, ಡಿಸಿ ಹಿಂದೆ ಓಡಾಡುವ ಸಿದ್ದೇಶ್ವರ್ ಯಾವ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ?. ದೆಹಲಿಗೆ ಹೋಗಿ ಲಸಿಕೆ ತರುವುದನ್ನು ಬಿಟ್ಟು ಇಲ್ಲೇ ಅಡ್ಡಾಡುತ್ತಿದ್ದಾರೆ. ದಾಖಲಾತಿಗಳಿದ್ದರೆ ಬಿಡುಗಡೆ ಮಾಡಲಿ. ಆಗ ಬಿಡುಗಡೆ ಮಾಡ್ತೀನಿ, ಈಗ ಬಿಡುಗಡೆ ಮಾಡ್ತೇನೆ ಎನ್ನುವುದು ಯಾಕೆ?" ಎಂದು ಪ್ರಶ್ನಿಸಿದರು.
"ತಪ್ಪು ಮಾಡಿದ್ದರೆ ಸಂಬಂಧಪಟ್ಟ ಇಲಾಖೆಯವರು ಕ್ರಮ ತೆಗೆದುಕೊಳ್ಳುತ್ತಾರೆ. ಅದನ್ನು ಬಿಟ್ಟು ಹತಾಶೆಯಿಂದ ಬೇಕಾಬಿಟ್ಟಿಯಾಗಿ ಹೇಳಿಕೆ ನೀಡಿದರೆ ಸಹಿಸೋಲ್ಲ" ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಈಗ ಯಾವುದೇ ಚುನಾವಣೆ ಇಲ್ಲದಿದ್ದರೂ ದಾವಣಗೆರೆಯಲ್ಲಿ ಲಸಿಕೆ ರಾಜಕೀಯದ ಫೈಟ್ ಜೋರಾಗಿದೆ. ಇದು ಯಾವ ಹಂತಕ್ಕೆ ಹೋಗುತ್ತದೆ? ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications