ಸಚಿವ ಆರ್. ಶಂಕರ್ ವಿರುದ್ಧ ಹೈಕೋರ್ಟ್ ಮೊರೆ ಹೋದ ಕಾಂಗ್ರೆಸ್!
ದಾವಣಗೆರೆ, ಫೆಬ್ರವರಿ 16; ವಿಧಾನ ಪರಿಷತ್ ಸದಸ್ಯ, ತೋಟಗಾರಿಕಾ ಸಚಿವ ಆರ್. ಶಂಕರ್ ವಿರುದ್ಧ ಕಾಂಗ್ರೆಸ್ ನಾಯಕರು ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಾಲಯ ಅರ್ಜಿಯ ವಿಚಾರಣೆಗೆ ಒಪ್ಪಿಗೆ ನೀಡಿದ್ದು, ಫೆ. 17ರಂದು ವಿಚಾರಣೆ ನಡೆಯಲಿದೆ.
ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಫೆಬ್ರವರಿ 24ರಂದು ಚುನಾವಣೆ ನಡೆಯಲಿದೆ. ಮತದಾರರ ಪಟ್ಟಿಯಲ್ಲಿ ಸಚಿವ ಆರ್. ಶಂಕರ್ ಹೆಸರು ಸೇರಿಸಲಾಗಿದೆ. ಎರಡು ಕಡೆ ಸಚಿವರ ಹೆಸರು ಇದೆ ಎಂದು ಆರೋಪಿಸಿ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಿದೆ.
ಆರ್. ಶಂಕರ್ ಹೆಸರು ರಾಣೆಬೆನ್ನೂರು ನಗರಸಭೆ ಮತದಾರರ ಪಟ್ಟಿಯಲ್ಲಿದೆ. ದಾವಣಗೆರೆ ವಿಳಾಸವನ್ನು ನೀಡಿ ಮಹಾನಗರ ಪಾಲಿಕೆ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ತರಕಾರು ಅರ್ಜಿ ಸಲ್ಲಿಕೆ ಮಾಡಿದೆ.

ನ್ಯಾಯಾಲಯ ಅರ್ಜಿಯ ವಿಚಾರಣೆಗೆ ಒಪ್ಪಿಗೆ ನೀಡಿದೆ. ಫೆಬ್ರವರಿ 17ರಂದು ಅರ್ಜಿಯ ವಿಚಾರಣೆ ನಡೆಯಲಿದ್ದು, ಫೆಬ್ರವರಿ 24ರಂದು ಮೇಯರ್ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶ ಕುತೂಹಲಕ್ಕೆ ಕಾರಣವಾಗಿದೆ.
ಕುತೂಹಲ ಮೂಡಿಸಿದ ಚುನಾವಣೆ; ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಪ್ರತಿವರ್ಷ ಕುತೂಹಲ ಮೂಡಿಸುತ್ತದೆ ಕಾರಣ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲ ಸಾಧಿಸಿವೆ.
2019 ನವೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 22, ಬಿಜೆಪಿ 17, ಜೆಡಿಎಸ್ 1, ಪಕ್ಷೇತರ 5 ಮಂದಿ ಗೆದ್ದಿದ್ದಾರೆ. ಕಳೆದ ಮೇಯರ್ ಚುನಾವಣೆಯಲ್ಲಿ ನಾಲ್ವರು ಪಕ್ಷೇತರರ ಬೆಂಬಲ ಪಡೆದು ಬಿಜೆಪಿ ಮೇಯರ್ ಪಟ್ಟ ಪಡೆದಿತ್ತು.
ಈ ಬಾರಿಯೂ ಬಿಜೆಪಿ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಹೊರಟಿದೆ ಎಂದು ಕಾಂಗ್ರೆಸ್ ದೂರಿದೆ. ಬೇರೆ ಜಿಲ್ಲೆಯ ಎಂಎಲ್ಸಿಗಳನ್ನು ಮತಪಟ್ಟಿಗೆ ಸೇರ್ಪಡೆ ಮಾಡುತ್ತಿದೆ. ಸಚಿವ ಆರ್. ಶಂಕರ್, ಚಿದಾನಂದಗೌಡರನ್ನು ಸೇರ್ಪಡೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.












Click it and Unblock the Notifications