ದಾವಣಗೆರೆ ಡಿಸಿಯಿಂದ ಶಾಸಕ ರೇಣುಕಾಚಾರ್ಯಗೆ ಕ್ಲಾಸ್
ದಾವಣಗೆರೆ, ಮಾರ್ಚ್ 29: ಕೇಂದ್ರ ಮತ್ತು ರಾಜ್ಯ ಸರ್ಕಾರದ ಲಾಕ್ ಡೌನ್ ಆದೇಶವನ್ನು ಗಾಳಿಗೆ ತೂರಿ ತಮ್ಮ ಬೆಂಬಲಿಗರ ಗುಂಪಿನೊಂದಿಗೆ ನಗರ ಸುತ್ತಾಟ ನಡೆಸಿದ ಹೊನ್ನಾಳಿ ಶಾಸಕರಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತರಾಟೆ ತೆಗೆದುಕೊಂಡ ಘಟನೆ ನಗರದಲ್ಲಿ ಭಾನುವಾರ ನಡೆದಿದೆ.
ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಕೊರೊನಾ ಜಾಗೃತಿ ಹೆಸರಿನಲ್ಲಿ ಗುಂಪು ಕಟ್ಟಿಕೊಂಡು ಇಂದು ನಗರದ ದುರ್ಗಾಂಭಿಕಾ ದೇವಸ್ಥಾನ ಪ್ರದೇಶದೆಲ್ಲೆಡೆ ಕೊರೊನಾ ಜಾಗೃತಿ ಮೂಡಿಸಲು ಸುತ್ತಾಡಿದ್ದಾರೆ. ಆದರೆ ತಾವೇ ಕೇಂದ್ರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.
ಪ್ರಧಾನಿ ನರೇಂದ್ರ ಮೋದಿ ಮನೆ ಬಿಟ್ಟು ಹೊರ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಕೊರೊನಾ ಜಾಗೃತಿ ಅಂತ ಹೇಳಿ ಎಂ.ಪಿ ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಅನೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಗುಂಪಾಗಿ ನಗರ ಪ್ರದಕ್ಷಿಣೆ ಹಾಕುತ್ತಿದ್ದರು.

ಇದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಹೀಗೆ ಗುಂಪು ಕಟ್ಟಿಕೊಂಡು ಜಾಗೃತಿ ಮೂಡಿಸುವುದು ಸರಿಯಲ್ಲ. ಇದರಿಂದ ಮತ್ತಷ್ಟು ತೊಂದರೆಯಾಗುತ್ತದೆ. ಇದು ಪ್ರಚಾರದ ಸಮಯವಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಜಾಗೃತಿ ಜಾಥಾದಲ್ಲಿ ರೇಣುಕಾಚಾರ್ಯ ಅವರಿಗೆ ಮೇಯರ್ ಬಿ.ಜೆ ಅಜಯಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಉಮಾ ರಮೇಶ್, ಪಿ.ಸಿ ಶ್ರೀನಿವಾಸ್ ಭಟ್, ಶಿವನಗೌಡ ಪಾಟೀಲ್ ಸೇರಿದಂತೆ ಅನೇಕ ಕಾರ್ಯಕರ್ತರು, ಬೆಂಬಲಿಗರು ಸಾಥ್ ನೀಡಿದರು.
ನಾನು ನನ್ನ ಮತ ಕ್ಷೇತ್ರದಲ್ಲಿ ಓಡಾಡಿದ್ದೇನೆ. ನಾನು ಸಚಿವ ಕೂಡ, ಹಾಗಾಗಿ ನನಗೆ ಓಡಾಡುವ ಹಕ್ಕಿದೆ ಎಂದು ರೇಣುಕಾಚಾರ್ಯ ಜಿಲ್ಲಾಧಿಕಾರಿಗೆ ತಿರುಗೇಟು ನೀಡಿದರು.
ನನಗೆ ಬೈಯುವ ಅಧಿಕಾರ ಯಾರಿಗೂ ಇಲ್ಲ. ನಾನು ರಾಜ್ಯದಲ್ಲಿ ಎಲ್ಲಿಬೇಕಾದರು ಸುತ್ತಾಡಬಹುದು. ನನಗೆ ಯಾರು ಬೈಯ್ತಾರೆ, ಅಧಿಕಾರಿಗಳಿಗಷ್ಟೆ ಕರ್ತವ್ಯ ಇರಲ್ಲ, ನಮಗೂ ಇರುತ್ತೆ ಎಂದು ಕಿಡಿಕಾರಿದರು.












Click it and Unblock the Notifications