ದಾವಣಗೆರೆ; ಸಚಿವರ ಸಿಟಿ ರೌಂಡ್ಸ್, ಅಧಿಕಾರಿಗಳ ವಿರುದ್ಧ ಗರಂ
ದಾವಣಗೆರೆ, ಜನವರಿ 11: ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ನಗರ ಪ್ರದಕ್ಷಣೆ ಮಾಡಿದರು. ಮುಂಜಾನೆ ನಿದ್ದೆಯ ಮಂಪರಿನಲ್ಲಿದ್ದ ಅಧಿಕಾರಿಗಳ ಮೈ ಚಳಿ ಬಿಡಿಸಿದರು. ಕಾಮಗಾರಿಗಳ ವಿಳಂಬಕ್ಕೆ ತರಾಟೆಗೆ ತೆಗೆದುಕೊಂಡರು.
ಸೋಮವಾರ ಮುಂಜಾನೆ ಭೈರತಿ ಬಸವರಾಜ್ ನಗರದ ಬನಶಂಕರಿ ಬಡಾವಣೆ, ವಿದ್ಯಾನಗರದ ಎಲ್ಐಸಿ ಬಡಾವಣೆ ಸೇರಿದಂತೆ ಕುಂದವಾಡ ಕೆರೆಯ ಬಾಲಾಜಿ ನಗರದ ಬಳಿ ಭೇಟಿ ನೀಡಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ದಾವಣಗೆರೆ ನಗರದ ಶಾಮನೂರು ದ್ವಿಮುಖ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ರನ್ನು ತರಾಟೆಗೆ ತೆಗೆದುಕೊಂಡರು.

ಬಳಿಕ ಅದೇ ರಸ್ತೆಯ ಇಕ್ಕೆಲಗಳಲ್ಲಿ ರಾಶಿ-ರಾಶಿ ಕಸ ಹಾಗೂ ಮದ್ಯದ ಬಾಟಲಿಗಳನ್ನು ಕಂಡು ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡರು. ಪಾಲಿಕೆ ಆಯುಕ್ತ ವಿಶ್ವನಾಥ್ ಅವರಿಗೆ, "ರೀ ಈ ಕೆಲಸವನ್ನು ಯಾರು ಮಾಡಬೇಕು, ಇನ್ನೂ ಕಾಮಗಾರಿ ಮುಗಿಸದಿದ್ದರೆ ಗುತ್ತಿಗೆದಾರನಿಗೆ ನೋಟಿಸ್ ನೀಡಿ" ಎಂದು ಸೂಚನೆ ಕೊಟ್ಟರು.
"ಮುಂದಿನ ದಿನ ಮತ್ತೆ ನಾನು ಇಲ್ಲಿಗೆ ಬಂದಾಗ ಎಲ್ಲಾ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣಗೊಂಡಿರಬೇಕು" ಎಂದು ಸಚಿವರು ಅಧಿಕಾರಿಗಳಿಗೆ ಗಡುವು ನೀಡಿದರು.

ಸಂಪುಟ ವಿಸ್ತರಣೆ: ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಸಚಿವರು, "ವಲಸೆ ಬಂದ ಎಲ್ಲರಿಗೂ ಸಚಿವ ಸ್ಥಾನ ಕೊಡಲೇ ಬೇಕಲ್ವ?. ಮುಖ್ಯಮಂತ್ರಿ ಗಳು ಕೂಡ ಅದನ್ನೆ ಹೇಳಿದ್ದಾರೆ. ನಾವು ಕೂಡ ನಮ್ಮ ಜೊತೆಯಲ್ಲಿ ಬಂದವರಿಗೆ ಬೇಗ ಸಚಿವ ಸ್ಥಾನ ಕೊಡಿ ಎಂದು ಸಿಎಂಗೆ ಮನವಿ ಮಾಡಿದ್ದೇವೆ" ಎಂದರು.












Click it and Unblock the Notifications