ಜಿಟ್ಟಿನಕಟ್ಟಿ ಶಾಲಾ ಮಕ್ಕಳಿಗೆ ತೆಂಗಿನ ಚಪ್ಪರದ ಶೆಡ್ಡೇ ಬೋಧನಾ ಕೊಠಡಿ!
ದಾವಣಗೆರೆ, ಜುಲೈ.09: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹೋಬಳಿಯ ತೌಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಟ್ಟಿನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದಾಗಿ ಮಕ್ಕಳಿಗೆ ತಾತ್ಕಾಲಿಕವಾಗಿ ಚಪ್ಪರದ ಸೂರು ನಿರ್ಮಿಸಿ ಬೋಧನೆ ಮಾಡಲಾಗುತ್ತಿದೆ.
ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಒಂದು ಕಡೆ ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ನಡುವೆ ಮಕ್ಕಳು ಶಾಲೆಗೆ ಅಕ್ಷರ ಕಲಿಯಲು ಬಂದರೆ ಸರ್ಕಾರಿ ಶಾಲೆಗಳಲ್ಲಿ ಇಂಥಹ ಪರಿಸ್ಥಿತಿ ನಿರ್ಮಾಣವಾಗಿದೆ.
1957 ರಲ್ಲಿ ಆರಂಭವಾದ ಜಿಟ್ಟಿನಕಟ್ಟಿಯ ಈ ಶಾಲೆಯಲ್ಲಿ ಸದ್ಯ ಒಂದರಿಂದ ಏಂಟನೇ ತರಗತಿವರೆಗಿನ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ಸುಮಾರು 160 ಮಕ್ಕಳಿದ್ದು, ಶಾಲೆಯ ಒಂಭತ್ತು ಕೊಠಡಿಗಳ ಪೈಕಿ, ನಾಲ್ಕು ಶಿಥಿಲಗೊಂಡಿರುವುದರಿಂದ ಕೆಡವಲಾಗಿದೆ.

ಇದುವರೆಗೂ ಕೊಠಡಿಯ ನಿರ್ಮಾಣಕ್ಕೆ ಶಿಕ್ಷಣ ಇಲಾಖೆ ಮತ್ತು ಸರ್ಕಾರ ಮುಂದಾಗಿಲ್ಲ. ಹೀಗಾಗಿ ಮಕ್ಕಳಿಗೆ ಚಪ್ಪರವೇ ಬೋಧನಾ ಕೊಠಡಿಗಳಾಗಿವೆ. ಸದ್ಯ ಐದು ಕೊಠಡಿಗಳಲ್ಲಿ ಮೂರು ಕೊಠಡಿಗಳು ಹಾಳಾಗಿದ್ದು, ಚಾವಣಿ ಬಿರುಕು ಬಿಟ್ಟಿದೆ. ಮಳೆಗಾಲದ ಬಂದರೆ ಈ ಕೊಠಡಿಗಳಲ್ಲಿ ಮಳೆ ನೀರು ಸೋರುತ್ತದೆ.
ನಾಲ್ಕನೇ ತರಗತಿಯ ಮಕ್ಕಳಿಗೆ ತೆಂಗಿನ ಚಪ್ಪರ ನಿರ್ಮಿಸಿ ಭೋಧನೆಗೆ ಅವಕಾಶ ನೀಡಿದರೆ, ಆರನೇ ತರಗತಿಯ ವಿದ್ಯಾರ್ಥಿಗಳು ಶಾಲೆಯ ರಂಗಮಂದಿರ ಮತ್ತು ಮುಖ್ಯ ಶಿಕ್ಷಕರ ಕೊಠಡಿಯ ಹೊರಗೆ ಓದುತ್ತಿದ್ದಾರೆ.

ಮಕ್ಕಳ ಪರಿಸ್ಥಿಯನ್ನು ಕಂಡು ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರು ಸೇರಿ ತೆಂಗಿನ ಗರಿ ತಂದು ಚಪ್ಪರ ನಿರ್ಮಿಸಿ ಕೊಟ್ಟ ತಾತ್ಕಾಲಿಕ ಶೆಡ್ ನಲ್ಲಿ ಮಳೆ, ಗಾಳಿ, ಬಿಸಿಲು ಇವುಗಳ ಮಧ್ಯೆ ವಿದ್ಯಾರ್ಥಿಗಳು ಪಾಠ ಕೇಳುವ ವಾತಾವರಣ ನಿರ್ಮಾಣವಾಗಿದೆ.
ಈ ಕುರಿತು ಮಾತನಾಡಿದ ಎಸ್ ಡಿ ಎಂ ಸಿ ಅಧ್ಯಕ್ಷ ಅಣ್ಣಪ್ಪ, ಕೊಠಡಿಗಳ ಕೊರತೆಯ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.

ಈ ಮಕ್ಕಳ ಪರಿಸ್ಥಿತಿ ನೋಡಿ ಹೆತ್ತವರ ಕರುಳು ಬಳ್ಳಿ ಚುರುಕುಗೊಂಡಿತು. ಹಾಗಾಗಿ ನಾವೇ ತೆಂಗಿನ ಗರಿ ತಂದು ತಾತ್ಕಾಲಿಕ ಚಪ್ಪರ ಹಾಕಿ ನೆರಳಿನ ವ್ಯವಸ್ಥೆ ಮಾಡಿದೆವು ಎಂದು ತಿಳಿಸಿದರು.












Click it and Unblock the Notifications