ದಾವಣಗೆರೆ; ರೈತರು, ವರ್ತಕರಿಗೆ ವಂಚನೆ, 2 ಕೋಟಿ ಪೊಲೀಸರ ವಶಕ್ಕೆ!

ದಾವಣಗೆರೆ, ಅಕ್ಟೋಬರ್ 27; ಮೆಕ್ಕೆಜೋಳ ಮಾರಾಟ ಮಾಡಿ ಹಣ ಸಿಗದೇ ರೈತರು ಕಂಗಾಲಾಗಿದ್ದರು. ಪೊಲೀಸ್ ಠಾಣೆ, ಶಾಸಕರು, ಸಚಿವರು, ಸಂಸದರ ಮನೆ ಬಾಗಿಲು ಬಡಿದಿದ್ದು ಅಲ್ಲದೇ, ಬೀದಿಗಿಳಿದು ಹೋರಾಟ ಮಾಡಿದ್ದರು. ಸಾಲ ಮಾಡಿ ಬೆಳೆ ಬೆಳೆದಿದ್ದರೂ ಹಣ ಮಾತ್ರ ಕೈ ಸೇರಿರಲಿಲ್ಲ.

ರೈತರು ಹಾಗೂ ವರ್ತಕರು ಸೇರಿ ಬರೋಬ್ಬರಿ 125 ಮಂದಿಗೆ ವಂಚನೆ ಮಾಡಲಾಗಿತ್ತು. ಹಣ ಕೊಡುತ್ತೇವೆ ಅಂತಾ ಸತಾಯಿಸುತ್ತಲೇ ಇದ್ದರು. ಕೇಳಿದಾಗಲೆಲ್ಲಾ ಒಂದೊಂದು ಸಬೂಬು ಹೇಳಿ ಕಳುಹಿಸುತ್ತಿದ್ದರು. ಆದರೆ ಯಾವಾಗ ಪೊಲೀಸ್ ಠಾಣೆಗೆ ದೂರು ದಾಖಲಾಯಿತೋ ದಾವಣಗೆರೆ ಎಸ್ಪಿ ರಿಷ್ಯಂತ್ ಗಮನಕ್ಕೆ ಪ್ರಕರಣ ಬಂದಿತು. ಅಲ್ಲಿಂದ ಪ್ರಕರಣದ ತನಿಖೆ ಬಿರುಸುಗೊಂಡಿತ್ತು. ರೈತರು ಮತ್ತು ವರ್ತಕರ ಹೋರಾಟಕ್ಕೆ ಈಗ ಫಲ ಸಿಕ್ಕಿದೆ.

ರೈತರು ಮತ್ತು ವರ್ತಕರಿಂದ ಮೆಕ್ಕೆಜೋಳ ಖರೀದಿಸಿ ಹಣ ಕೊಡದೇ ವಂಚಿಸುತ್ತಿದ್ದ ಆಸಾಮಿಗಳಿಂದ ದಾವಣಗೆರೆ ಪೊಲೀಸರು ಕೋಟ್ಯಾಂತರ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ಬರೋಬ್ಬರಿ 2 ಕೋಟಿ 68 ಲಕ್ಷದ 91 ಸಾವಿರದ ನಾಲ್ಕುನೂರ ಎಪ್ಪತ್ತು ರೂಪಾಯಿ ನಗದು ಆರೋಪಿಗಳಿಂದಲೇ ಪಡೆದು ರೈತರಿಗೆ ಪೊಲೀಸರು ನೀಡಲಿದ್ದಾರೆ.

Cheating To Farmers At Davanagere Police Recovers 2 Crore Money

ವಂಚನೆ ಪ್ರಕರಣದಲ್ಲಿ 6 ಆರೋಪಿಗಳಿದ್ದು, ಅವರೆಲ್ಲರೂ ಈಗಾಗಲೇ ಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ. ವಶಕ್ಕೆ ಪಡೆದಿರುವ ಹಣವನ್ನು ಕೋರ್ಟ್‌ಗೆ ಒಪ್ಪಿಸಿ, ಬಳಿಕ ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಎಸ್ಪಿ ರಿಷ್ಯಂತ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗಡಿಗುಡಾಳ್ ಗ್ರಾಮದಲ್ಲಿ ದಲ್ಲಾಳಿ ವ್ಯಾಪಾರ ಮಾಡುತ್ತಿದ್ದ ಶಿವಲಿಂಗಯ್ಯ, ದಾವಣಗೆರೆ ತಾಲೂಕಿನ ನರಗನಹಳ್ಳಿಯ ದಲ್ಲಾಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ್, ಸರಸ್ವತಿ ನಗರದ ಕಂಟ್ರಾಕ್ಟರ್ ಮಹೇಶ್ವರಯ್ಯ, ಹರಿಹರ ತಾಲೂಕಿನ ಸಾಲಕಟ್ಟೆ ಗ್ರಾಮದ ವಾಗೀಶ್, ಚಂದ್ರು ಹಾಗೂ ಪಿಬಿ ರಸ್ತೆಯ ಕೆನರಾ ಬ್ಯಾಂಕ್ ಉದ್ಯೋಗಿ ಶಿವಕುಮಾರ್ ಎಂಬುವವರಿಂದ ಈ ಹಣ ವಸೂಲಿ ಮಾಡಲಾಗಿದೆ.

ಈ ಆರು ಮಂದಿಯೂ ಈಗ ಕೋರ್ಟ್‌ನಲ್ಲಿ ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ. ಈಗ ವಸೂಲಿ ಮಾಡಿರುವ ಹಣವನ್ನು ಕೋರ್ಟ್‌ಗೆ ಸಲ್ಲಿಸಿ ನಂತರ ಇವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎಸ್ಪಿ ರಿಷ್ಯಂತ್ ತಿಳಿಸಿದರು.

ರೈತರಿಗೆ ಮೋಸ ಮಾಡಿದ 1, 51,86,470 ರೂ. ಅಂದರೆ ಶೇಕಡಾ ನೂರಕ್ಕೆ ನೂರರಷ್ಟು ಹಣ ವಶಪಡಿಸಿಕೊಳ್ಳಲಾಗಿದೆ. ವರ್ತಕರಿಗೆ ಮೋಸ ಮಾಡಿದ್ದ 1,17,05,000 ರೂಪಾಯಿಯನ್ನು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗಡಿಗುಡಾಳು ಗ್ರಾಮದಲ್ಲಿ ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳು ಸತ್ತವರ ಹೆಸರಿನಲ್ಲಿ ನಕಲಿ ಅಕೌಂಟ್ ಮಾಡಿ ಅದಕ್ಕೆ ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡುತ್ತಿದ್ದರು.

ಇನ್ನು ತೀವ್ರವಾಗಿ ಅಸ್ವಸ್ಥಗೊಂಡಿರುವವರ ಹೆಸರಿನಲ್ಲಿಯೂ ಇದೇ ರೀತಿ ಮಾಡಿದ್ದರು. ಈಗ ವಶ ಪಡಿಸಿಕೊಂಡಿರುವ ಹಣವನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ಆನಂತರ ಆರೋಪಿಗಳನ್ನು ಬಂಧಿಸಲು ಅನುಮತಿ ಕೋರಲಾಗುವುದು. ಈಗಾಗಲೇ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದು, ಆರೋಪಿಗಳನ್ನು ಕೋರ್ಟ್ ಅನುಮತಿ ಪಡೆದು ಮತ್ತೆ ವಶಕ್ಕೆ ಪಡೆದು ವಿಚಾರಣೆನಡೆಸಲಾಗುತ್ತದೆ.

ಏನಿದು ಪ್ರಕರಣ?; ದಾವಣಗೆರೆ ನಗರದ ಆಂಜನೇಯ ಏಜೆನ್ಸೀಸ್ ಮಾಲೀಕ ಎಂ. ಆರ್. ಸಂತೋಷ್ ದಾವಣಗೆರೆಯ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಲ್ಲಿ 2021ರ ಮಾರ್ಚ್ 17ರಂದು ಗಡಿಗುಡಾಳು ಗ್ರಾಮದ ಶಿವಲಿಂಗಯ್ಯ ಎಂಬುವವರಿಗೆ ಸೇರಿದ ಕೆ. ಸಿ. ಟ್ರೇಡರ್ಸ್ ಮತ್ತು ಜಿಎಂಸಿ ಗ್ರೂಪ್ಸ್ ಗೆ ಮೆಕ್ಕೆಜೋಳ ಮಾರಾಟ ಮಾಡುತ್ತಿದ್ದೆವು. 15 ರಿಂದ 20 ದಿನಗೊಳಗಾಗಿ ಶಿವಲಿಂಗಯ್ಯ ರೈತರು ಮತ್ತು ವರ್ತಕರಿಗೆ ಮೆಕ್ಕೆಜೋಳದ ಹಣ ಸಂದಾಯ ಮಾಡುತ್ತಿದ್ದರು. ಅದರಂತೆ ರೈತರು ಮತ್ತು ವರ್ತಕರಿಂದ ಮೆಕ್ಕೆಜೋಳವನ್ನು ಶಿವಲಿಂಗಯ್ಯ ಖರೀದಿ ಮಾಡಿದ್ದರು. ಆದರೆ ಒಟ್ಟು 47,42,439 ರೂ. ಬಾಕಿ ಕೊಡಬೇಕಿತ್ತು. ಕೇಳಿದರೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ರೈತರು ಮತ್ತು ವರ್ತಕರಿಗೆ ನೀಡಬೇಕಿರುವ ಹಣದ ಬಗ್ಗೆ ಶಿವಲಿಂಗಯ್ಯ ಬಳಿ ಕೇಳಿದಾಗ ಮೆಕ್ಕೆಜೋಳದ ಹಣವನ್ನು ನನ್ನ ಬ್ಯಾಂಕ್ ಖಾತೆಯಿಂದ ಆರ್‌ಟಿಜಿಎಸ್ ಮತ್ತು ಕ್ಯಾಶ್ ಮೂಲಕ ನಮ್ಮ ಸಂಬಂಧಿ ಚೇತನ್, ವಾಗೀಶ್, ಚಂದ್ರ ಹಾಗೂ ಕೆನರಾಬ್ಯಾಂಕ್ ಉದ್ಯೋಗಿ ಶಿವಕುಮಾರ್ ತಮ್ಮ ಸ್ವಂತ ಹಾಗೂ ಪರಿಚಯಸ್ಥರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು.

ರೈತರು ಹಾಗೂ ವರ್ತಕರಿಗೆ ನೀಡಬೇಕಿರುವ ಹಣ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ತಿಳಿಸಿದ್ದರು. ಶಿವಲಿಂಗಯ್ಯ, ಚೇತನ್, ವಾಗೀಶ್, ಚಂದ್ರು, ಮಹೇಶ್ವರಯ್ಯ ಹಾಗೂ ಶಿವಕುಮಾರ್ ರೈತರು ಮತ್ತು ವರ್ತಕರಿಗೆ ಹಣ ಕೊಡದೇ ವಂಚಿಸಿರುವುದಾಗಿ ಪೊಲೀಸ್ ಠಾಣೆಗೆ ನೀಡಿದ್ದ ದೂರಿನಲ್ಲಿ ಆರೋಪಿಸಿದ್ದರು.

ಮೆಕ್ಕೆಜೋಳ ಖರೀದಿ ಮಾಡಿ ವಂಚಿಸಿದ ಮತ್ತೊಂದು ಪ್ರಕರಣವೂ ಇದೇ ಠಾಣೆಯಲ್ಲಿಯೇ ದಾಖಲಾಗಿತ್ತು. ಈ ಇಬ್ಬರು ಮಾತ್ರವಲ್ಲ, ಬರೋಬ್ಬರಿ 96 ರೈತರು ಹಾಗೂ 29 ವರ್ತಕರಿಗೆ ಬಾಕಿ ಹಣ ಕೊಡಬೇಕು ಎಂದು ಆರೋಪಿಸಿ ರೈತರು ಕೆ. ಸಿ. ಟ್ರೇಡರ್ಸ್ ಮತ್ತು ಜಿಎಂಸಿ ಗ್ರೂಪ್ಸ್ ವಿರುದ್ಧವೂ ದೂರು ನೀಡಿದ್ದರು.

ಬಡಾವಣೆ, ವಿದ್ಯಾನಗರ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿತ್ತು. ಈ ಎಲ್ಲಾ ಪ್ರಕರಣಗಳ ಬಗ್ಗೆ ರ್‌ಎಂಸಿ ಯಾರ್ಡ್ ಪೊಲೀಸರು ತನಿಖೆಗೆ ಇಳಿದರು. ರೈತರಿಗೆ ಅನ್ಯಾಯವಾದ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ನ್ಯಾಯ ಕೊಡಿಸುವ ದೃಷ್ಟಿಯಿಂದ ಎಸ್ಪಿ ರಿಷ್ಯಂತ್, ಡಿಸಿಆರ್ ಬಿ ಘಟಕದ ಪೊಲೀಸ್ ಉಪಾಧೀಕ್ಷಕ ಬಿ. ಎಸ್. ಬಸವರಾಜ್ ನೇತೃತ್ವದ 13 ಪೊಲೀಸ್ ಸಿಬ್ಬಂದಿ ತಂಡ ರಚಿಸಿ ತನಿಖೆ ನಡೆಸುವಂತೆ ಸೂಚಿಸಿದರು.

ಈ ಪ್ರಕರಣದ ಆರೋಪಿಗಳನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿ, ರೈತರು ಹಾಗೂ ವರ್ತಕರಿಗೆ ಆದ ಮೋಸದ ಹಣದಲ್ಲಿ 2,68,91,470 ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+