ಚಂದ್ರು ಸಾವಿನ ತನಿಖೆ ಸರಿಯಾಗಿ ನಡೆಯುತ್ತಿಲ್ಲ: ಪೊಲೀಸರ ವಿರುದ್ಧ ರೇಣುಕಾಚಾರ್ಯ ಆಕ್ರೋಶ
ದಾವಣಗೆರೆ, ನವೆಂಬರ್, 05: ನನಗೆ ಬೆದರಿಕೆ ಕರೆ ಬಂದು ಒಂದು ವರ್ಷವಾಯಿತು. ದುಬೈನಿಂದ ಕರೆ ಬಂದಿತ್ತು. ಯಾರನ್ನೂ ಬಂಧಿಸಲಿಲ್ಲ. ಚಂದ್ರು ಆತ್ಮಕ್ಕೆ ಶಾಂತಿ ಸಿಗಬೇಕು. ಆತನ ಹೆಸರಿನಲ್ಲಿ ಸಾಮಾಜಿಕ ಸೇವೆ ಮಾಡುತ್ತೇನೆ. ಪೊಲೀಸರು ಪ್ರಾಥಮಿಕ ತನಿಖೆಯನ್ನೇ ಸರಿಯಾಗಿ ನಡೆಸಿಲ್ಲ. ಆತ ಕಾರಿನ ಹಿಂಬದಿ ಸೀಟಿನಲ್ಲಿ ಹೋಗಿ ಬೀಳಲು ಹೇಗೆ ಸಾಧ್ಯ? ಕಾರು ವೇಗವಾಗಿ ಬಂದು ಅಪಘಾತವಾದರೆ ನಾಲೆಯೊಳಗೆ ಆ ರೀತಿಯಲ್ಲಿ ಬೀಳಲು ಹೇಗೆ ಸಾಧ್ಯ? ನಮ್ಮ ಕುಟುಂಬದವರನ್ನೇ ಮೊದಲು ವಿಚಾರಣೆ ಮಾಡಬೇಕಿತ್ತು. ಮನೆಯಲ್ಲಿ ಗಲಾಟೆ ಆಗಿತ್ತಾ? ಬೇರೆ ವಿಚಾರವಾದರೂ ಏನಾದರೂ ಇದೆಯಾ ಎಂದು ಪ್ರಶ್ನೆ ಮಾಡಬೇಕಿತ್ತು. ಪೊಲೀಸರು ಸುಮ್ಮನೆ ಓಡಾಡಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ ಎಂದು ಆರೋಪಿಸಿದರು.
ಚಂದ್ರಶೇಖರ್ನದ್ದು ಸಹಜ ಸಾವಲ್ಲ, ಅಪಘಾತವಲ್ಲ. ಇದೊಂದು ಪೂರ್ವನಿಯೋಜಿತ ಕೊಲೆ ಎಂಬುದುನ್ನು ಎಲ್ಲರೂ ಹೇಳುತ್ತಿದ್ದಾರೆ. ಪೊಲೀಸ್ ಇಲಾಖೆ ನಡೆಸುತ್ತಿರುವ ತನಿಖೆ ಬಗ್ಗೆ ಜನರಲ್ಲಿ ವಿಶ್ವಾಸ ಕಡಿಮೆ ಆಗಿದೆ. ನೂರಾರು ಪೊಲೀಸರು, ತಂಡಗಳಿದ್ದರೂ ಚಂದ್ರು ನಾಪತ್ತೆ ಆಗಿದ್ದರೂ ಯಾಕೆ ಪತ್ತೆ ಹಚ್ಚಲಿಲ್ಲ? ಪಕ್ಷದ ಮುಖಂಡರು, ಕಾರ್ಯಕರ್ತರು ಶಿವಮೊಗ್ಗದಿಂದ ಡ್ರೋನ್ ತರಿಸಿ ಕಾರು ಮತ್ತು ಚಂದ್ರುನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿದ್ದಾರೆ. ಆದರೆ ತನಿಖೆ ಸಂಪೂರ್ಣ ವಿಫಲವಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಚಂದ್ರು ಪಾರ್ಥಿವ ಶರೀರದ ಎದುರು ರೇಣುಕಾಚಾರ್ಯ ಗೋಳಾಟ
ನಮಗೆ ನ್ಯಾಯ ಸಿಗುವ ವಿಶ್ವಾಸ ಇಲ್ಲ
ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಒಂದಂಕಿ ಲಾಟರಿ ಕೇಸ್ನಲ್ಲಿ ಸಸ್ಪೆಂಡ್ ಆಗಿದ್ದ ಅಧಿಕಾರಿ ಅಲೋಕ್ ಕುಮಾರ್. ಕಾರು ಅತಿವೇಗವಾಗಿ ಚಲನೆ ಮಾಡಿತ್ತು, ಡ್ರೋನ್ ಬಳಸಿ ಕಾರು ಪತ್ತೆ ಹಚ್ಚಲಾಗಿತ್ತು ಎನ್ನುತ್ತಾರೆ. ಇಂತಹವರಿಂದ ನಮಗೆ ನ್ಯಾಯ ಸಿಗುವ ವಿಶ್ವಾಸ ಇಲ್ಲ. ಸಾರ್ವಜನಿಕರಿಗೆ ರಕ್ಷಣೆ ನೀಡುತ್ತಾರಾ? ರಕ್ಷಕರಲ್ಲ ಇವರು ಭಕ್ಷಕರಾಗಿದ್ದಾರೆ. ಈಗ ನಡೆಸುತ್ತಿರುವ ತನಿಖೆಯಿಂದ ಸಮಾಧಾನ ಇಲ್ಲ ಎಂದು ಹೇಳಿದರು.
ಚಂದ್ರಶೇಖರ್ಗೆ ಯಾವುದೇ ದುಶ್ಚಟ ಇರಲಿಲ್ಲ
ಚಂದ್ರಶೇಖರ್ಗೆ ಯಾವುದೇ ದುಶ್ಚಟ ಇರಲಿಲ್ಲ. ಅತಿ ವೇಗ ಚಾಲನೆಯಿಂದ ಇದು ಆಗಿಲ್ಲ. ಏನೇನೋ ಕಟ್ಟುಕಥೆ ಕಟ್ಟಿ ತನಿಖೆಯ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನಿಮ್ಮದೇ ಪಕ್ಷ ಅಧಿಕಾರದಲ್ಲಿ ಇದ್ದರೂ ನ್ಯಾಯ ಸಿಗಲಿಲ್ಲ ಅಂದರೆ ಹೇಗೆ ಎನ್ನುತ್ತಾರೆ ಎಂದು ಜನರು ನನಗೆ ಪ್ರಶ್ನೆ ಮಾಡುತ್ತಾರೆ. ಭಾನುವಾರದಿಂದ ಚಂದ್ರು ಕಾಣೆಯಾದರೂ ಪೊಲೀಸರು ಯಾಕೆ ಪತ್ತೆ ಹಚ್ಚಲಿಲ್ಲ? ನಮ್ಮ ಮುಖಂಡರು, ಜನರು ಚಂದ್ರು ಶವವನ್ನು ಪತ್ತೆ ಹಚ್ಚಿದ್ದು, ಅವರೇ ನಮಗೆಲ್ಲ. ಪೊಲೀಸರು ಸಂಪೂರ್ಣ ವಿಫಲವಾಗಿದ್ದು, ತನಿಖೆ ದಾರಿ ತಪ್ಪಿಸಲಾಗುತ್ತಿದೆ. ನನಗೆ ಅನುಕಂಪ ಬೇಕಾಗಿಲ್ಲ. ಚಂದ್ರು ಮೇಲಿನ ಅಭಿಮಾನದಿಂದ ಅಷ್ಟೋಂದು ಜನರು ಬಂದಿದ್ದರು. ದುಡ್ಡು ಕೊಟ್ಟರೆ ಮಕ್ಕಳು ಕಣ್ಣೀರು ಹಾಕುತ್ತಾರಾ? ನಾಲ್ಕು ದಿನ ನನ್ನ ಮನೆ ಕಾದರು. ಅವರು ತೋರಿಸುತ್ತಿರುವ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು ಎಂದು ಹೇಳಿದರು.
ಪೊಲೀಸರ ಮೇಲೆ ನನಗೆ ವಿಶ್ವಾಸ ಇಲ್ಲ
ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಕೆ. ಎಸ್. ಈಶ್ವರಪ್ಪ ಸೇರಿದಂತೆ ಶಾಸಕರು, ಸಚಿವರು ಎಲ್ಲರೂ ಧೈರ್ಯ ತುಂಬಿದ್ದಾರೆ. ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಅವರಿಗೆ ಮಾಧ್ಯಮದ ಮೂಲಕ ಒತ್ತಾಯಿಸುವಷ್ಟು ದೊಡ್ಡವನಲ್ಲ. ಸಿಎಂ ಸಹ ತನಿಖೆ ಸರಿಯಾಗಿ ನಡೆಯುತ್ತದೆ. ಪಾರದರ್ಶಕವಾಗಿರುತ್ತದೆ ಎಂಬ ಭರವಸೆ ನೀಡಿದ್ದಾರೆ. ಯಡಿಯೂರಪ್ಪರು ಇದೇ ಮಾತು ಹೇಳಿದ್ದಾರೆ. ಹಾಗಾಗಿ ಅವರ ಮೇಲೆ ನನಗೆ ವಿಶ್ವಾಸ ಇದೆ. ಆದರೆ ಪೊಲೀಸರ ಮೇಲೆ ನನಗೆ ವಿಶ್ವಾಸ ಇಲ್ಲ ಎಂದು ಹೇಳಿದರು.
ಕೊಲೆ ಎಂಬುದು ಗೊತ್ತಾಗುತ್ತದೆ
ಓವರ್ ಸ್ಪೀಡ್ ಆಗಿದ್ದೇ ಆದರೆ ಕಾರು ಕಾಲುವೆಗೆ ಬೀಳುತ್ತಿರಲಿಲ್ಲ. ಸೀಟ್ ಬೆಲ್ಟ್ ಹಾಕಿದ್ದರೆ ಅವನು ಸೀಸ್ನಲ್ಲಿ ಇರಬೇಕಾಗಿತ್ತು. ಏರ್ ಬ್ಯಾಗ್ ಒಪನ್ ಆಗಿದೆ. ಕೈಯಲ್ಲಿ ಹಗ್ಗ ಇರುವುದು ಪತ್ತೆಯಾಗಿದೆ. ಇದೆಲ್ಲಾ ವಿಚಾರ ನೋಡಿದರೆ ಇದೊಂದು ಕೊಲೆ ಎಂಬುದು ಗೊತ್ತಾಗುತ್ತದೆ ಎಂದು ರೇಣುಕಾಚಾರ್ಯ ಹೇಳಿದರು. ಒಟ್ಟಿನಲ್ಲಿ ಪೊಲೀಸರ ಮೇಲೆ ನನಗೆ ಯಾವುದೇ ನಂಬಿಕೆ ಇಲ್ಲ ಎಂದು ಹೇಳುತ್ತಲೇ ಶಾಸಕ ರೇಣುಕಾಚಾರ್ಯ ಚಂದ್ರಶೇಖರ್ನನ್ನು ನೆನೆದು ಕಣ್ಣೀರಿಟ್ಟಿದ್ದಾರೆ.