ಚಂದ್ರಶೇಖರ್ ಸಾವು ಪ್ರಕರಣ: ರೇಣುಕಾಚಾರ್ಯಗೆ ಸಾಂತ್ವನ ಹೇಳಲು ಸಿಎಂ ಆಗಮನ ಸಾಧ್ಯತೆ
ಹೊನ್ನಾಳಿ, ನವೆಂಬರ್, 07: ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವು ಪ್ರಕರಣ ಕ್ಷಣಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಲೇ ಇದೆ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಶ್ರೀ ರಾಮುಲು, ಆರ್. ಅಶೋರ್, ಶಾಸಕ ರಾಜೂಗೌಡ ಸೇರಿದಂತೆ ಹಲವರು ನವೆಂಬರ್ 9ರಂದು ಹೊನ್ನಾಳಿಗೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಹೇಳಿದರು.
ಹೊನ್ನಾಳಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಭೇಟಿ ಹಿನ್ನೆಲೆ ನವೆಂಬರ್ 9ರಂದೇ ಚಂದ್ರಶೇಖರ್ಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಇಟ್ಟುಕೊಳ್ಳುವ ನಿರೀಕ್ಷೆಯಲ್ಲಿ ಇದ್ದೇವೆ. ಎಫ್ಎಸ್ಎಲ್ ವರದಿ ಮತ್ತು ಮರಣೋತ್ತರ ಪರೀಕ್ಷೆಯ ವರದಿಗಾಗಿ ನಾವು ಕಾಯುತ್ತಿದ್ದೇವೆ. ನಾಳೆ (ನವೆಂಬರ್ 08) ವರದಿ ಲಭ್ಯವಾಗುವ ಮಾಹಿತಿ ಇದೆ ಎಂದು ತಿಳಿಸಿದರು.
"ಗೌರಿಗದ್ದೆಯಲ್ಲಿರುವ ಮಠದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಬ್ಯಾಕಪ್ ಇಲ್ಲ ಎಂದು ವಿನಯ್ ಗುರೂಜಿ ಅವರು ಮಂಗಳವಾರ ಹೇಳಿದ್ದರು. ಆದ್ದರಿಂದ ತಂತ್ರಜ್ಞರನ್ನು ಕರೆಸಿ ಅದರ ಮಾಹಿತಿ ಕೊಡುವುದಾಗಿ ವಿನಯ್ ಗುರೂಜಿ ಹೇಳಿದ್ದರು. ಇದೂವರೆಗೂ ನಮಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಪೊಲೀಸರು ಸಿಸಿಟಿವಿ ಕ್ಯಾಮೆರಾದಲ್ಲಿನ ಫೂಟೇಜ್ಗಳನ್ನು ಸಂಗ್ರಹಿಸಿರುವ ಬಗ್ಗೆ ಮಾಹಿತಿ ಇಲ್ಲ," ಎಂದು ಶಾಸಕರ ಬೆಂಬಲಿಗ ಉಮೇಶ್ ನಾಯ್ಕ ಹೇಳಿದರು.

ಶಾಸಕರಿಗೆ ತುತ್ತು ತಿನ್ನಿಸಿದ್ದ ಮಹಿಳೆಯರು
ಶಾಸಕ ರೇಣುಕಾಚಾರ್ಯ ಅವರು ನ್ಯಾಮತಿ ತಾಲೂಕಿನ ಟಿ.ಗೋಪಗೊಂಡನಹಳ್ಳಿ ಗ್ರಾಮದ ದೇವಸ್ಥಾನದ ಉದ್ಘಾಟನೆಗೆ ತೆರಳಿದ್ದರು. ನಂತರ ಮನೆಗೆ ಮರಳಿದ ಅವರಿಗೆ ಮತ್ತು ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ ಕೆಲವು ಗ್ರಾಮಸ್ಥರು ತಾವು ತಂದಿದ್ದ ಅಡುಗೆಯನ್ನು ಶಾಸಕರ ಕುಟುಂಬದ ಸದಸ್ಯರಿಗೆ ಕೊಟ್ಟು ಬಂದಿದ್ದರು. ಆಗ ಏನಾದರೂ ಮಾಹಿತಿ ಲಭ್ಯ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೇ, ಸಾವಿನ ಕುರಿತು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಪೊಲೀಸರಿಂದ ವಿನಯ್ ಗುರೂಜಿ ವಿಚಾರಣೆ
ಹಾಗೆಯೇ ಚಂದ್ರಶೇಖರ್ ಸಾವಿನ ಪ್ರಕರಣ ಚುರುಕುಗೊಂಡಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಚಂದ್ರಶೇಖರ್ ಸಾವಿನ ಬಗ್ಗೆ ವರದಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ ಬೆನ್ನಲ್ಲೇ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ನಾಪತ್ತೆ ಆಗುವ ಮೊದಲು ಚಂದ್ರಶೇಖರ್ ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖಾ ತಂಡ ಚಿಕ್ಕಮಗಳೂರಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications