ವಿಶೇಷ ವರದಿ: ದಾವಣಗೆರೆಗೆ ಸಚಿವ ಸ್ಥಾನ 'ಮಿಸ್' ಆಗಲು ಕಾರಣ ಇಲ್ಲಿದೆ ನೋಡಿ...!
ದಾವಣಗೆರೆ, ಆಗಸ್ಟ್ 04: ಮಧ್ಯ ಕರ್ನಾಟಕದ ವಾಣಿಜ್ಯ ಜಿಲ್ಲೆ ದಾವಣಗೆರೆಗೆ ಸಚಿವ ಸ್ಥಾನ ಈ ಬಾರಿ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಶಾಸಕರಿಗೆ ನಿರಾಸೆ ಆಗಿದ್ದು ಯಾಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಯಾಕೆಂದರೆ ಕಳೆದ ಮೂರು ಕಾಲು ವರ್ಷದಿಂದಲೂ ಬೇರೆ ಜಿಲ್ಲೆಯವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆದರೆ ಈಗಲೂ ಅದು ಮರುಕಳಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರದ ವರಿಷ್ಠರಲ್ಲಿ ಜಿಲ್ಲೆಯ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಿ ಎಂಬ ಮನವಿಗೆ ಬಿಜೆಪಿ ಹೈಕಮಾಂಡ್ ಮಣೆ ನೀಡಿಲ್ಲ. ಇದರಿಂದಾಗಿ ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಿದೆ.
ದೆಹಲಿ ಮಟ್ಟದಲ್ಲಿಯೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಲಾಬಿ ಮಾಡಿದ್ದರು. ಇನ್ನೇನೂ ಇವರ ಹೆಸರು ಫೈನಲ್ ಆಗಿ ಬಿಡ್ತು ಎಂಬ ಮಾತು ಕೇಳಿ ಬಂದಿತ್ತು. "ಸಿಡಿ' ವಿಚಾರ ಬಂದ ಬಳಿಕ ರೇಣುಕಾಚಾರ್ಯರಿಗೆ ಸಚಿವ ಸ್ಥಾನ ನೀಡದಿರಲು ಹೈಕಮಾಂಡ್ ನಿರ್ಧಾರಕ್ಕೆ ಬಂದಿದೆ. ಕೊರೊನಾದಂತ ಸಂಕಷ್ಟದ ವೇಳೆಯಲ್ಲಿ ರೇಣುಕಾಚಾರ್ಯ ಮಾಡಿದ ಕೆಲಸಗಳು ರಾಜ್ಯ ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲಿಯೂ ಗಮನ ಸೆಳೆದಿತ್ತು. ಆದ್ರೆ ವೈಯಕ್ತಿಕ ಕಾರಣದಿಂದಾಗಿ ಎಂ.ಪಿ. ರೇಣುಕಾಚಾರ್ಯ ಮತ್ತೆ ಸಚಿವರಾಗುವ ಅವಕಾಶ ಕಳೆದುಕೊಂಡರು ಎನ್ನಲಾಗುತ್ತಿದೆ.

'ಒಗ್ಗಟ್ಟಿನ ಶಕ್ತಿ'ಗೂ ಸಿಗಲಿಲ್ಲ ಬೆಲೆ!
ಈ ಬಾರಿಯ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ದಾವಣಗೆರೆ ಜಿಲ್ಲೆಗೆ ಸ್ಥಾನ ಸಿಕ್ಕೇ ಸಿಗುತ್ತೆ ಎಂಬ ಅತಿಯಾದ ಆತ್ಮವಿಶ್ವಾಸ ಇತ್ತು. ಐವರು ಶಾಸಕರು ಒಟ್ಟಾಗಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪರ ಬಳಿ 'ಒಗ್ಗಟ್ಟಿನ ಶಕ್ತಿ' ಪ್ರದರ್ಶಿಸಿದ್ದರು. ಜಿಲ್ಲೆಯ ಒಬ್ಬರಿಗಾದರೂ ಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದರು. ಆದರೆ ಇದು ಫಲ ಕೊಟ್ಟಿಲ್ಲ.
ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಜಗಳೂರು ಶಾಸಕ ಎಸ್.ವಿ. ರಾಮಚಂದ್ರಪ್ಪ, ಮಾಯಕೊಂಡದ ಪ್ರೊ.ಲಿಂಗಣ್ಣ ಪಕ್ಕಾ ಬಿ.ಎಸ್. ಯಡಿಯೂರಪ್ಪ ಆಪ್ತರು. ಇನ್ನು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಆರ್ಎಸ್ಎಸ್ ಗರಡಿಯಲ್ಲಿ ಪಳಗಿದವರು.

ರವೀಂದ್ರನಾಥ್ಗೆ ಯಾಕೆ ಸಿಗಲಿಲ್ಲ?
ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ಇಲ್ಲ ಎಂಬ ಕಾರಣಕ್ಕೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ್ರಿಗೆ ಸಚಿವ ಸ್ಥಾನ ಸಿಗಲಿಲ್ಲ. ಇನ್ನು ಆರೋಗ್ಯದ ವಿಚಾರವನ್ನೂ ಪರಿಗಣಿಸಲಾಗಿದೆ. ಆರ್ಎಸ್ಎಸ್ ಒತ್ತಡ ಇತ್ತಾದರೂ ಈ ಕಾರಣಕ್ಕೆ ನೀಡಲಾಗಿಲ್ಲ.

ಪಕ್ಷಾಂತರ ಮಾಡಿದ್ದಕ್ಕೆ ಶಿಕ್ಷೆನಾ?
ಇನ್ನು ಮಾಡಾಳ್ ವಿರೂಪಾಕ್ಷಪ್ಪ, ರೇಣುಕಾಚಾರ್ಯ, ಪ್ರೊ. ಲಿಂಗಣ್ಣ, ಎಸ್.ವಿ. ರಾಮಚಂದ್ರಪ್ಪರವರು ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಬಿಜೆಪಿ ತೊರೆದು ಹೋಗಿದ್ದರು. ಬಿಜೆಪಿಯ ಅಭ್ಯರ್ಥಿಗಳ ವಿರುದ್ಧವೇ ಕಣಕ್ಕಿಳಿದು ತೊಡೆ ತಟ್ಟಿದ್ದರು. ರವೀಂದ್ರನಾಥ್ ಮಾತ್ರ ಬಿಜೆಪಿ ಬಿಡಲಿಲ್ಲ. ಈ ನಾಲ್ವರು ಯಡಿಯೂರಪ್ಪ ಬಿಜೆಪಿಗೆ ಬಂದಾಗ ಮತ್ತೆ ಸೇರ್ಪಡೆಯಾದರು. ಆ ನಂತರ ಬಿಜೆಪಿ ಟಿಕೆಟ್ ಪಡೆದು ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬಂದಿದ್ದರು. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡ ಬಿಜೆಪಿ ಹೈಕಮಾಂಡ್ 'ಪಕ್ಷ ವಿರೋಧಿ ಚಟುವಟಿಕೆ' ನಡೆಸಿದವರಿಗೆ ಸಚಿವ ಸ್ಥಾನ ನೀಡಿದರೆ ಹೇಗೆ ಎಂಬ ಚರ್ಚೆ ನಡೆಸಲಾಗಿದೆ. ಮತ್ತೊಂದು ವಿಶೇಷ ಅಂದರೆ ಆರ್ಎಸ್ಎಸ್ ಸಹ ಪಕ್ಷ ನಿಷ್ಠೆ, ಸಂಘಟನೆಗೆ ತೊಡಗಿದವರಿಗೆ ನೀಡಬೇಕೆಂಬ ಪಟ್ಟು ಹಿಡಿದ ಕಾರಣ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ. ಈ ಕಾರಣವೂ ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಲು ಮುಖ್ಯ ವಿಷಯವಾಗಿದೆ.

ರೇಣುಕಾಚಾರ್ಯ ಹೆಸರು ಸಚಿವ ಸ್ಥಾನಕ್ಕೆ ಕೇಳಿ ಬಂದಿತ್ತು
ಇನ್ನು ಕಳೆದ ವಾರದ ಹಿಂದೆ ದೆಹಲಿಯಲ್ಲಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೆಸರು ಸಚಿವ ಸ್ಥಾನಕ್ಕೆ ಕೇಳಿ ಬಂದಿತ್ತು. ಕೊರೊನಾ ವೇಳೆಯಲ್ಲಿ ಸೋಂಕಿತರ ಜೊತೆ ನಿಂತು ಹಗಲಿರುಳು ಶ್ರಮಿಸಿದ್ದರು. ಕೋವಿಡ್ ಸೆಂಟರದ್ನಲ್ಲೇ ಇದ್ದು ರಸಮಂಜರಿ, ಊಟ, ಲಸಿಕೆ, ಚಿಕಿತ್ಸೆಗೆ ಶ್ರಮಿಸಿದ್ದರು. ಈ ವಿಚಾರ ರಾಷ್ಟ್ರಮಟ್ಟದಲ್ಲೂ ಗಮನ ಸೆಳೆದಿತ್ತು. ಹಾಗಾಗಿ ರೇಣುಕಾಚಾರ್ಯಗೆ ಸಚಿವ ಸ್ಥಾನ ಸಿಕ್ಕೇ ಬಿಡ್ತು ಎಂಬ ಮಾತು ಕೇಳಿ ಬಂದಿತ್ತು.
ಆದರೆ ಸಿ.ಪಿ. ಯೋಗೇಶ್ವರ್ ದೆಹಲಿಯಲ್ಲಿ ನಡೆಸಿದ 'ಸಿಡಿ' ರಾಜಕೀಯದಿಂದ ಕೈತಪ್ಪುವಂತಾಯ್ತು. ಇನ್ನು ಸಿಡಿ ಅಥವಾ ಮಾನ ಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂಬ ತಡೆಯಾಜ್ಞೆ ತಂದ ಬಳಿಕ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ.












Click it and Unblock the Notifications