ಸೆ.26ರಿಂದ ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ
ದಾವಣಗೆರೆ, ಆಗಸ್ಟ್ 28: ಸೆಪ್ಟಂಬರ್ ತಿಂಗಳ 26ರಿಂದ 29ರೊಳಗೆ ಎರಡು ದಿನ ಬೆಣ್ಣೆನಗರಿ ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಇದಕ್ಕೆ ಪೂರ್ವಸಿದ್ಧತೆ ಈಗಿನಿಂದಲೇ ಶುರು ಮಾಡಿಕೊಳ್ಳಲಾಗುತ್ತಿದೆ.
ಇದು ಮುಂದಿನ 2023ರ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಕಾರ್ಯಕಾರಿಣಿ ನಡೆಸಲಾಗುತ್ತಿದೆ ಎಂಬ ಮಾತು ಕೇಳಿಬರಲಾರಂಭಿಸಿದೆ.
ಅಪೂರ್ವ ರೆಸಾರ್ಟ್ಗೆ ಭೇಟಿ ನೀಡಿದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಪರಿಶೀಲಿಸಿದರು. ಕಾರ್ಯಕಾರಿಣಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು, ಪಕ್ಷದ ಮುಖಂಡರು, ಆರ್ಎಸ್ಎಸ್ ನಾಯಕರು ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ಎಲ್ಲಾ ನಾಯಕರು ಉಳಿದುಕೊಳ್ಳುವ ಸಲುವಾಗಿ ಅಪೂರ್ವ ರೆಸಾರ್ಟ್ ಸೇರಿದಂತೆ ದೊಡ್ಡ ದೊಡ್ಡ ಹೋಟೆಲ್ಗಳನ್ನು ಈಗಿನಿಂದಲೇ "ಬುಕ್' ಮಾಡಲಾಗುತ್ತಿದೆ.

ದಾವಣಗೆರೆಯೇ ಏಕೆ?
ರಾಜಕೀಯ ಪಕ್ಷಗಳ ಪಾಲಿಗೆ ದಾವಣಗೆರೆ ಅದೃಷ್ಟದ ತಾಣ. ಮಾಜಿ ಸಿಎಂ ಎಸ್. ಬಂಗಾರಪ್ಪ ಹೊಸ ಪಕ್ಷ ಕಟ್ಟಿದಾಗ ದೊಡ್ಡ ಸಮಾವೇಶ ಮಾಡಿ ಯಶಸ್ವಿಯಾಗಿದ್ದು ಈ ನೆಲದಲ್ಲೇ. ಕಾಂಗ್ರೆಸ್ ಸೇರಿದಂತೆ ಬೇರೆ ಬೇರೆ ಪಕ್ಷಗಳು ಇಲ್ಲಿಯೇ ಸಮಾವೇಶ, ಕಾರ್ಯಕಾರಿಣಿ ಸೇರಿದಂತೆ ರಾಜಕೀಯ ಕಹಳೆ ಮೊಳಗಿಸುವುದು ವಾಡಿಕೆ ಎಂಬಂತಾಗಿದೆ. ಇನ್ನೊಂದೂವರೆ ವರ್ಷದಲ್ಲಿ ವಿಧಾನಸಭೆ ಚುನಾವಣೆ, ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಬರುತ್ತಿದ್ದು, ಇದಕ್ಕೆ ಪೂರ್ವಭಾವಿ ಮಾಡಿಕೊಳ್ಳುವ ಸಲುವಾಗಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಇಲ್ಲಿ ನಡೆಸಲಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಕ್ಕಿಮುಷ್ಠಿ ಶುರುವಾಗಿದ್ದೇ ಇಲ್ಲಿ!
ಇನ್ನು ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2018ರಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಆಗ ಬಿಜೆಪಿ ಕೇಂದ್ರ ನಾಯಕರಾಗಿದ್ದ ಅಮಿತ್ ಶಾ ಇಲ್ಲಿಂದಲೇ ಮನೆ ಮನೆಗೆ ತೆರಳಿ 'ಅಕ್ಕಿಮುಷ್ಠಿ' ಅಭಿಯಾನ ಕೈಗೊಂಡಿದ್ದರು. ದಾವಣಗೆರೆಯ ಬಾತಿಯಲ್ಲಿ ಮನೆಗಳಿಗೆ ಹೋಗಿ ಅಕ್ಕಿ ಸಂಗ್ರಹ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದರು. ಬಿಜೆಪಿ ಅಧಿಕಾರಕ್ಕೆ ಬರದಿದ್ದರೂ ಉತ್ತಮ ಫಲಿತಾಂಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕಾರಿಣಿ ಸಭೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ದಾವಣಗೆರೆ ಮಧ್ಯ ಕರ್ನಾಟಕದ ಹೆಬ್ಬಾಗಿಲು ಆಗಿರುವ ಕಾರಣ ಹಾಗೂ ಇಲ್ಲಿಂದ ಪ್ರಾರಂಭಿಸಿದರೆ ಒಳ್ಳೆಯದಾಗುತ್ತೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಇಲ್ಲಿ ಆಯೋಜಿಸಲಾಗುತ್ತಿದೆ. ಕಾರ್ಯಕಾರಿಣಿ ಸಭೆ ಎಲ್ಲಿ ನಡೆಸಬೇಕೆಂಬ ಬಗ್ಗೆ ಸ್ಥಳ ನಿಗದಿಯಾಗಿಲ್ಲ. ಎರಡು ಮೂರು ಕಡೆ ಸ್ಥಳ ನೋಡಿದ್ದರೂ ಅಂತಿಮಗೊಂಡಿಲ್ಲ. ಒಟ್ಟಿನಲ್ಲಿ ಕಮಲ ಪಡೆ ಇನ್ನು ಚುನಾವಣೆ ದೂರ ಇದ್ದರೂ ಈಗಿನಿಂದಲೇ ತಯಾರಿ ಆರಂಭಿಸುತ್ತಿರುವುದು ಕುತೂಹಲ ಕೆರಳಿಸಿದೆ.

ಯಾವ ಅಸಮಾಧಾನವೂ ಇಲ್ಲ
ಸ್ಥಳ ಪರಿಶೀಲನೆ ಬಳಿಕ ಮಾತನಾಡಿದ ಸಚಿವ ಭೈರತಿ ಬಸವರಾಜ್, "ನಮ್ಮಲ್ಲಿ ಯಾವುದೇ ಬಿರುಕಿಲ್ಲ, ಒಗ್ಗಟ್ಟಾಗಿದ್ದೇವೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಮುನಿರತ್ನ ಅಸಮಾಧಾನಗೊಂಡಿದ್ದರು. ಆದರೆ ಈಗ ಸಚಿವ ಸ್ಥಾನ ಸಿಕ್ಕಿದೆ. ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ಮುನಿರತ್ನ, ಸೋಮಶೇಖರ್ ಹಾಗೂ ನಾನು ಒಟ್ಟಿಗೆ ಕುಳಿತು ಚರ್ಚಿಸಿದ್ದೇವೆ. ಯಾವ ಭಿನ್ನಾಭಿಪ್ರಾಯವೂ ಇಲ್ಲ,'' ಎಂದು ಸ್ಪಷ್ಟಪಡಿಸಿದ್ದಾರೆ.
Recommended Video

ಮಾಜಿ ಸಿಎಂ ಯಡಿಯೂರಪ್ಪಗೆ ಬೆಂಬಲ
"ಪಕ್ಷ ಸಂಘಟನೆ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರಲ್ಲದೇ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಮ್ಮ ನಾಯಕರು. ಅದರಲ್ಲಿ ಎರಡು ಮಾತಿಲ್ಲ. ಹಿರಿಯರು, ಪಕ್ಷವನ್ನು ಹಗಲಿರುಳು ಕಷ್ಟಪಟ್ಟು ಕಟ್ಟಿದ್ದಾರೆ. ಈಗ ಮತ್ತೆ ಪಕ್ಷ ಸಂಘಟನೆ ಮಾಡಲು ಹೊರಟರೆ ನಾವೆಲ್ಲರೂ ಸಹಕಾರ ನೀಡುತ್ತೇವೆ. ಪಕ್ಷದ ಹೈಕಮಾಂಡ್ ಎಲ್ಲಿಯೂ ಯಾವುದನ್ನು ಬೇಡ ಎಂದು ಹೇಳಿಲ್ಲ,'' ಎಂದು ತಿಳಿಸಿದರು.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ, "ಸಿಎಂ, ಗೃಹ ಸಚಿವರು ಮಾಹಿತಿ ನೀಡುತ್ತಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ ಎಂದ ಅವರು, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಲು ಸರ್ಕಾರ ಸಿದ್ಧವಿದೆ,'' ಎಂದು ಹೇಳಿದರು.












Click it and Unblock the Notifications