ಬೆಣ್ಣೆನಗರಿಯಲ್ಲಿ ಬಂದ್ ಬಿಸಿ ಇಲ್ಲ: ರೈತರ ಹೋರಾಟದ ಕಾವು ಜೋರು...!
ದಾವಣಗೆರೆ, ಸೆಪ್ಟೆಂಬರ್ 27: ಕೃಷಿ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ಕರೆ ನೀಡಿದ್ದ ಭಾರತ್ ಬಂದ್ ಬೆಂಬಲಿಸಿ ಕರ್ನಾಟಕದಲ್ಲಿಯೂ ಪ್ರತಿಭಟನೆಗಳು ನಡೆದವು. ಬೆಣ್ಣೆನಗರಿ ದಾವಣಗೆರೆಯಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಅನ್ನದಾತರ ಕಿಚ್ಚು ಕಂಡು ಬಂದಿತು. ಹೆದ್ದಾರಿ ಹಾಗೂ ರಸ್ತೆ ತಡೆ ನಡೆಸಲು ಯತ್ನಿಸಿದವರನ್ನು ಪೊಲೀಸರು ಬಂಧಿಸಿದ ಘಟನೆಯೂ ನಡೆಯಿತು. ಕೆಲವೆಡೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ದಾವಣಗೆರೆಯಲ್ಲಿ ಶಾಲಾ ಕಾಲೇಜುಗಳು, ಅಂಗಡಿ ಮುಂಗಟ್ಟುಗಳು, ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು. ಜನರಿಗೆ ಬಂದ್ ಬಿಸಿ ತಟ್ಟಲಿಲ್ಲ, ಆದರೆ ರೈತರ ಹೋರಾಟದ ಬಿಸಿ ಇತ್ತು. ರೈತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಯತ್ನಿಸಿದ 20ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದರು. ಇದು ರೈತ ಸಂಘಟನೆಗಳ ಮುಖಂಡರು ಕೆರಳುವಂತೆ ಮಾಡಿತು. ಈ ವೇಳೆ ಪೊಲೀಸರ ವಿರುದ್ಧವೇ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ದಬ್ಬಾಳಿಕೆಗೆ ಹೆದರೋಲ್ಲ ಎಂದು ಹೇಳಿದರು.

ಹೆದ್ದಾರಿ ತಡೆ, ರಸ್ತೆ ಬಂದ್ ಮಾಡಲು ಪೊಲೀಸರು ಬಿಡಲಿಲ್ಲ. ಈ ವೇಳೆ ರೈತ ಮುಖಂಡರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಆದೇಶ ಉಲ್ಲಂಘಿಸಿ ಬಂದ್ ಮಾಡಲು ಹೋದಾಗ ರೈತರನ್ನು ಪೊಲೀಸರು ಬಂಧಿಸಿ ಪರಿಸ್ಥಿತಿ ನಿಯಂತ್ರಿಸಿದರು.
20 ರೈತರ ಬಂಧನ; ಕೃಷಿ ಹಾಗೂ ಎಪಿಎಂಸಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಬೇರೆ ಬೇರೆ ಕಡೆ ಪ್ರತಿಭಟನೆ, ಬೈಕ್ ಜಾಥಾ ನಡೆಸಿದರು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಸಂಪೂರ್ಣ ಬಂದ್ ಆಗಿರಲಿಲ್ಲ. ದಾವಣಗೆರೆ ಹೊರ ಭಾಗದ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ರಾಷ್ಟ್ರೀಯ ಹೆದ್ದಾರಿ 4 ತಡೆದು ಪ್ರತಿಭಟನೆಗೆ ಯತ್ನಿಸಿದ ಸುಮಾರು 20ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.
ರೈತ ಸಂಘಟನೆಗಳ ಪ್ರಮುಖರು, ಪ್ರತಿಭಟನಾಕಾರರು ಪೊಲೀಸರ ವಿರುದ್ಧವೇ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಅನುಮತಿ ಇಲ್ಲದಿದ್ದರೂ ಪ್ರತಿಭಟನಾಕಾರರು ಹೆದ್ದಾರಿ ಬಂದ್ ಮಾಡಲು ಮುಂದಾದರು. ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಲಾಯಿತು.

ಬಸ್ ಸಂಚಾರ ಸುಗಮ; ಬಸ್ ಸಂಚಾರ ಬಂದ್ ಮಾಡಲು ರೈತರು ಮುಂದಾದರೂ ಕೆಎಸ್ಆರ್ ಟಿಸಿ ಅಧಿಕಾರಿಗಳು ಸರ್ಕಾರದ ಆದೇಶ ಪಾಲಿಸಿದರು. ಪೊಲೀಸ್ ಬಿಗಿ ಭದ್ರತೆಯಲ್ಲಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಎಸ್ಕಾರ್ಟ್ ಭದ್ರತೆಯಲ್ಲಿ ಬಸ್ ಸಂಚಾರ ಆರಂಭಗೊಂಡಿತು. ಪ್ರಯಾಣಿಕರಿಗೆ ತೊಂದರೆ ಆಗದಂತೆ ಖುದ್ದು ಫೀಲ್ಡ್ಗೆ ಇಳಿದ ಕೆಎಸ್ಆರ್ ಟಿಸಿ ಡಿಸಿ ಸಿದ್ದೇಶ್, ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಓಡಿಸುವಂತೆ ಸೂಚಿಸಿದರು. ಬಳಿಕ ಎಂದಿನಂತೆ ಬಸ್ ಸಂಚಾರ ಶುರುವಾಯಿತು.
ತರಕಾರಿ ಸುರಿದು ಆಕ್ರೋಶ; ರಸ್ತೆಗೆ ತರಕಾರಿ ಸುರಿದು ರೈತರು ಜಯದೇವ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದರು. ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ರೈತ ಸಂಘಟನೆಗಳು, ಬೆಲೆ ಏರಿಕೆ ಯಾಗುತ್ತಿದೆ, ರೈತರ ಬೆಳೆಗೆ ಸರಿಯಾದ ಬೆಲೆಸಿಗುತ್ತಿಲ್ಲ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕೇವಲ ರೈತರಿಗಷ್ಟೇ ಅಲ್ಲ, ಬೆಲೆ ಏರಿಕೆ ಮಾಡುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿವೆ. ಮಾತ್ರವಲ್ಲ, ಜನರ ಸಂಕಷ್ಟಕ್ಕೆ ನೆರವಾಗುವ ಬದಲು ದಬ್ಬಾಳಿಕೆ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಬೇಕು. ಜನವಿರೋಧಿ, ರೈತ ವಿರೋಧಿ ನೀತಿ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.












Click it and Unblock the Notifications