ಅನಾರೋಗ್ಯದಿಂದ ಅಗಲಿದ ಯೋಧನಿಗೆ ಗೌರವದ ವಿದಾಯ
ದಾವಣಗೆರೆ, ಮೇ 24: ಗಡಿ ಭದ್ರತಾ ಪಡೆಯಲ್ಲಿ (ಬಾರ್ಡರ್ ಸೆಕ್ಯುರಿಟಿ ಫೋರ್ಸ್) ಕರ್ತವ್ಯ ನಿರ್ವಹಿಸುತ್ತಿದ್ದ ಹರಪ್ಪನಹಳ್ಳಿ ತಾಲ್ಲೂಕಿನ ಕಸವನಹಳ್ಳಿ ಗ್ರಾಮದ ಯೋಧ ಬಂಡೇರ ವಸಂತ್ ಶನಿವಾರ ರಾತ್ರಿ ನಿಧನರಾಗಿದ್ದು ಪೊಲೀಸ್ ಇಲಾಖೆಯ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 39 ವರ್ಷ ಪ್ರಾಯದ ಯೋಧ ಬಂಡೇರ ವಸಂತ್, ಚಿಕಿತ್ಸೆ ಪಡೆಯಲೆಂದು ತನ್ನ ಸ್ವಗ್ರಾಮ ಹರಪ್ಪನಹಳ್ಳಿ ತಾಲ್ಲೂಕಿನ ಕಸವನಹಳ್ಳಿಗೆ ವಾಪಾಸ್ ಬಂದಿದ್ದರು. ಬಳಿಕ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಶನಿವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅನಾರೋಗ್ಯದಿಂದ ಅಗಲಿದ ಯೋಧನಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಪೊಲೀಸ್ ಗೌರವ ಸಲ್ಲಿಸುವ ಮೂಲಕ ಅಂತಿಮ ಸಂಸ್ಕಾರ ನಡೆಸಲಾಗಿದೆ. ಡಿವೈಎಸ್ಪಿ ವಿ.ಎಸ್. ಹಾಲಮೂರ್ತಿ, ಸಿಪಿಐ ನಾಗರಾಜ್ ಎಸ್. ಕಮ್ಮಾರ ಮಾರ್ಗದರ್ಶನದಂತೆ ಅರಸೀಕೆರೆ ಠಾಣೆ ಪಿಎಸ್ಐ ನಾಗರತ್ನಮ್ಮ ನೇತೃತ್ವದಲ್ಲಿ ಪೊಲೀಸರ ತಂಡ ಅಂತಿಮ ಗೌರವ ಸಲ್ಲಿಸಿದ್ದಾರೆ.

ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಹೋದರರನ್ನು ಯೋಧ ಬಂಡೇರ ವಸಂತ್ ಅಗಲಿದ್ದಾರೆ.












Click it and Unblock the Notifications