ದಾವಣಗೆರೆಯಲ್ಲಿ ಕೊರೊನಾ ಲಸಿಕೆ ನೀಡುತ್ತಿದ್ದ ಕ್ಲಿನಿಕ್ ಬಂದ್ ಮಾಡಿದ ಅಧಿಕಾರಿಗಳು
ದಾವಣಗೆರೆ, ಮಾರ್ಚ್ 15: ಇಡೀ ವಿಶ್ವವನ್ನೇ ಕೊರೊನಾ ವೈರಸ್ ಗೆ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳು ಹಗಲುರಾತ್ರಿ ಎನ್ನದೇ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ದಾವಣಗೆರೆಯಲ್ಲಿ ಕಾನೂನು ಬಾಹಿರವಾಗಿ ಕೊರೊನಾ ಔಷಧಿಯನ್ನು ಸಾರ್ವಜನಿಕರಿಗೆ ನೀಡುತ್ತಿದ್ದ ಹೋಮಿಯೋಪಥಿ ಕ್ಲಿನಿಕ್ ಮೇಲೆ ಆಯುಷ್ ಅಧಿಕಾರಿಗಳು ದಾಳಿ ಮಾಡಿ ಬಂದ್ ಮಾಡಿಸಿದ್ದಾರೆ.
ದಾವಣಗೆರೆ ನಗರದ ಪಿ.ಜೆ ಬಡಾವಣೆಯ ಈಶ್ವರಮ್ಮ ಶಾಲೆಯ ಆವರಣದಲ್ಲಿರುವ ಕೊಠಡಿಯೊಂದರಲ್ಲಿ ಸತ್ಯಸಾಯಿ ಹೋಮಿಯೋಪಥಿ ಕ್ಲಿನಿಕ್ ನಡೆಸುತ್ತಿದ್ದು, ಇಂದು ಕ್ಲಿನಿಕ್ ನಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಔಷಧಿ ನೀಡಲಾಗುತ್ತದೆ ಎಂದು ಪೋಸ್ಟರ್ ಅಂಟಿಸಿದ್ದರು.
ಇದನ್ನು ನೋಡಿ ಸಾರ್ವಜನಿಕರು ಕೊರೊನಾ ವೈರಸ್ ಗೆ ಔಷಧಿ ನೀಡುತ್ತಾರೆಂದು ಔಷಧಿಗೆ ಮುಗಿಬಿದ್ದಿದ್ದಾರೆ. ಇಲ್ಲಿಗೆ ಬಂದ ಜನರಿಗೆ ಒಂದು ಹನಿ 'ಅರ್ಸನಿಕ್ ಅಲ್ಪಾ 30' ಎಂಬ ಡ್ರಾಪ್ಸ್ ಹಾಕಲಾಗಿದೆ. ಈ ಬಗ್ಗೆ ಸಾರ್ವಜನಿಕರು ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ಕ್ಲಿನಿಕ್ ಗೆ ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಕೆಪಿಎಂಇ ಪರವಾನಿಗೆ ಪಡೆಯದೇ, ಜಿಲ್ಲಾ ಆರೋಗ್ಯಾಧಿಕಾರಿಗಳ ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ಡ್ರಾಪ್ಸ್ ಹಾಕಿರುವುದು ಬೆಳಕಿಗೆ ಬಂದಿದೆ.

ಅಲ್ಲದೇ ಈಶ್ವರಮ್ಮ ಶಾಲೆಯ ಒಂದು ಕೊಠಡಿಯಲ್ಲಿ ಶೋಭಾರಾಣಿ ಎಂಬುವವರು, ಸತ್ಯಸಾಯಿ ಹೋಮಿಯೋಪಥಿ ಕೇಂದ್ರವನ್ನು ನಡೆಸಿಕೊಂಡು ಬರುತ್ತಿದ್ದರು. ಆದರೆ ಶೋಭಾರಾಣಿ ಇಲ್ಲದ ವೇಳೆಯಲ್ಲಿ ಸಿಬ್ಬಂದಿಗಳು ಸಾರ್ವಜನಿಕರಿಗೆ ಕೊರೊನ ತಡೆಗಟ್ಟುವ ಡ್ರಾಪ್ಸ್ ಹಾಕಿದ್ದಾರೆ.

ಡ್ರಾಪ್ಸ್ ಹಾಕುವಾಗ ಆರೋಗ್ಯ ಪರೀಕ್ಷೆ ಮಾಡಿ ಹಾಕದೇ, ಡಾಕ್ಟರ್ ಶೋಭಾರಾಣಿ ಅನುಪಸ್ಥಿತಿಯಲ್ಲಿ ಡ್ರಾಪ್ಸ್ ಹಾಕಿದ್ದು, ಕಾನೂನು ಬಾಹಿರವಾಗಿ ನೂರಾರು ಜನರನ್ನು ಒಂದು ಕಡೆ ಸೇರಿಸಿ ಡ್ರಾಪ್ಸ್ ಹಾಕಿದ್ದರಿಂದ ಇದೀಗ ಆಯುಷ್ ಅಧಿಕಾರಿಗಳು ಕ್ಲಿನಿಕ್ ಸೀಜ್ ಮಾಡಿದ್ದಾರೆ. ಹೊಮೀಯೋಪತಿ ವೈದ್ಯೆ ಶೋಭಾರಾಣಿ ಹಾಗೂ ಡ್ರಾಪ್ಸ್ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications