ಶಕ್ತಿ ಯೋಜನೆ ತಂದ ಆಪತ್ತು: ಆಟೋ ಚಾಲಕರ ಆಕ್ರೋಶ, ಜುಲೈ.3 ಆಟೋ ರ್ಯಾಲಿ
ದಾವಣಗೆರೆ, ಜುಲೈ 1: ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಹಿಳೆಯರು ಎಲ್ಲಾ ಕಡೆ ಪ್ರವಾಸ ಮಾಡುತ್ತಿದ್ದಾರೆ. ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವ ಕಾರಣ ದೇವಸ್ಥಾನ ಸೇರಿದಂತೆ ಪ್ರವಾಸೋದ್ಯಮ ತಾಣಗಳು ತುಂಬಿ ತುಳುಕುತ್ತಿವೆ.
ಇದು ಮಹಿಳೆಯರ ಸಂತೋಷಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ಆಟೋ, ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಬೀದಿಗಿಳಿದಿದ್ದಾರೆ. ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯೊಂದರಲ್ಲಿ ಸಾವಿರಾರು ಆಟೋಗಳು, ಟ್ಯಾಕ್ಸಿಗಳು ಸಂಚರಿಸುತ್ತವೆ. ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿರುವುದರಿಂದ ಆಟೋ, ಟ್ಯಾಕ್ಸಿ ಚಾಲಕರು ಬಾಡಿಗೆ ಇಲ್ಲದೇ ಪರದಾಡುವಂತಾಗಿದೆ. ಮಹಿಳೆಯರ ಜೊತೆ ಪುರುಷರೂ ಸಹ ಪ್ರಯಾಣ ಬೆಳೆಸುವುದರಿಂದ ತೊಂದರೆಯಾಗಿದೆ.

ನಗರ ಸಾರಿಗೆ ಬಸ್ ಗಳಲ್ಲಿಯೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡುತ್ತಿರುವುದರಿಂದ ಆಟೋ ಹತ್ತುವರರ ಸಂಖ್ಯೆಯೂ ದಿನಕಳೆದಂತೆ ಕಡಿಮೆ ಆಗುತ್ತಿದೆ. ಇದರಿಂದ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಮಾಲೀಕರು ಬೀದಿಗೆ ಬೀಳುವಂತಾಗಿದೆ. ಮಾತ್ರವಲ್ಲ, ನಗರ ಸಾರಿಗೆ ಬಸ್ ಗಳಲ್ಲಿ ಉಚಿತ ವ್ಯವಸ್ಥೆ ಇರುವುದರಿಂದ ಆಟೋ, ಟ್ಯಾಕ್ಸಿಯಲ್ಲಿ ಏಕೆ ಪ್ರಯಾಣ ಮಾಡಬೇಕು ಎನ್ನುವುದು ಮಹಿಳೆಯರ ವಾದವಾಗಿದೆ.
ಇನ್ನು ಶಾಲಾ ಕಾಲೇಜುಗಳಿಗೆ ಬರುತ್ತಿದ್ದ ವಿದ್ಯಾರ್ಥಿನಿಯರು ಈಗ ಸರ್ಕಾರಿ ಬಸ್ ಗೆ ಕಾಯುತ್ತಿದ್ದಾರೆ. ಆಟೋ, ಟ್ಯಾಕ್ಸಿ ಮೂಲಕ ಶಾಲಾ ಕಾಲೇಜುಗಳಿಗೆ ಬರುತ್ತಿದ್ದ ಕಾಲೇಜು ಹುಡುಗಿಯರು ಈಗ ಬಸ್ ಅನ್ನು ಹೆಚ್ಚಾಗಿ ಆಶ್ರಯಿಸಿರುವುದರಿಂದ ಅಲ್ಲಿಯೂ ಹೊಡೆತ ಜಾಸ್ತಿಯಾಗಿದೆ.
ರಿಕ್ಷಾ ಚಾಲಕರು, ಮಾಲೀಕರ ಆಗ್ರಹವೇನು...?
ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಟ್ಟಿರುವುದರಿಂದ ಆಟೋ ಚಾಲಕರ ಬದುಕು ಕಷ್ಟವಾಗಿದೆ. ಕೂಡಲೇ ರಾಜ್ಯ ಸರ್ಕಾರವು ಮಧ್ಯಪ್ರವೇಶಿಸಿ ಆಟೋ ಚಾಲಕರ ಸಹಾಯಕ್ಕೆ ಬರಬೇಕು ಎಂಬುದು ಶ್ರೀ ಕೃಷ್ಣ ಸಾರಥಿ ಆಟೋ ಮತ್ತು ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಂಘ ಆಗ್ರಹವಾಗಿದೆ.

ಕಾಂಗ್ರೆಸ್ ಸರ್ಕಾರ ಚುನಾವಣೆ ಮುಂಚೆ ನೀಡಿದ 5 ಗ್ಯಾರಂಟಿ ಯೋಜನೆಗಳ ಪೈಕಿ ಉಚಿತ ಬಸ್ ಪ್ರಯಾಣದಿಂದ ಆಟೋ ಚಾಲಕರು ಸಂಕಷ್ಟಕ್ಕೆ ಈಡಾಗಿದ್ದಾರೆ. ಉಚಿತ ಬಸ್ ವ್ಯವಸ್ಥೆಯಿಂದ ಆಟೋ ಚಾಲಕರಿಗೆ ಆರ್ಥಿಕವಾಗಿ ತೊಂದರೆ ಆಗಿದ್ದು,
ಆಟೋ ಚಾಲಕರ ಕುಟುಂಬಗಳು ಬೀದಿಗೆ ಬೀಳುವಂತಾಗಿವೆ.
ದಿನಕ್ಕೆ ಆಟೋ ಚಾಲಕರು 800 ರಿಂದ 900 ರೂ.ರವರೆಗೆ ಬಾಡಿಗೆ ಮಾಡಿ 250 ರಿಂದ 300 ರೂ. ಇಂಧನ ಹಾಕಿಸಿ ಉಳಿದ ಹಣದಲ್ಲಿ ಮನೆ ಬಾಡಿಗೆ, ಆಟೋ ಲೋನ್, ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಳ ಸೇರಿದಂತೆ ಖರ್ಚು ವೆಚ್ಚಗಳಿಗೆ ಆಗುತಿತ್ತು. ಆದರೆ ನಗರ ಸಾರಿಗೆ ಉಚಿತ ಬಸ್ ಪ್ರಯಾಣದಿಂದ ದಿನಕ್ಕೆ 400 ರೂ. ಬಾಡಿಗೆ ಮಾಡಲು ಕಷ್ಟಕರವಾಗಿದೆ ಎಂದು ಆಟೋ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ. ಶ್ರೀನಿವಾಸ್ ಅಳಲು ತೋಡಿಕೊಂಡಿದ್ದಾರೆ.
ಜುಲೈ 3ಕ್ಕೆ ಆಟೋ ರ್ಯಾಲಿ
ಸರ್ಕಾರಿ ಬಸ್ಗಳಿಗೆ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿರುವುದರ ವಿರುದ್ಧ ರೊಚ್ಚಿಗೆದ್ದಿರುವ ಆಟೋ, ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಜುಲೈ 3ರಂದು ಬೆಳಿಗ್ಗೆ 11.30ಕ್ಕೆ ನಗರದ ಹೈಸ್ಕೂಲ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಆಟೋ ರ್ಯಾಲಿ ನಡೆಸಿ, ಪ್ರತಿಭಟನೆ ನಡೆಸಲಾಗುವುದು. ಈ ಮೂಲಕ ರಾಜ್ಯದ ಮುಖ್ಯಮಂತ್ರಿ ಅವರಿಗೆ ಮನವಿ ಅರ್ಪಿಸಲಾಗುವುದು. ಅಲ್ಲದೇ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಜನಪ್ರತಿನಿಧಿಗಳು ಆಟೋ ಚಾಲಕರ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಆಟೋ ಚಾಲಕರ ಬೇಡಿಕೆಗಳೇನು...?
ರಾಜ್ಯದ ಆಟೋ ಚಾಲಕರ ಅಭಿವೃದ್ಧಿ ನಿಗಮ ಮಂಡಳಿ ರಚಿಸಬೇಕು. ಮನೆ ಇಲ್ಲದವರಿಗೆ ಮನೆ ನೀಡಬೇಕು. ಈ ಒಂದು ಗ್ಯಾರಂಟಿಯಿಂದ ಹಿಂದೆ ಸರಿಯುವುದಿಲ್ಲವಾದರೆ ಆಟೋ ಚಾಲಕರಿಗೆ ದುಡಿಯಲಿಕ್ಕೆ ಉದ್ಯೋಗ ಸೃಷ್ಟಿ ಮಾಡಿ ಅಥವಾ ಪ್ರತಿ ತಿಂಗಳು 20 ಸಾವಿರ ರೂ.ಗಳನ್ನು ಆಟೋ ಚಾಲಕರ ಅಕೌಂಟಿಗೆ ತುಂಬಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರವಾದ ರಾಜ್ಯಾದ್ಯಂತ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications