ನಟ ದುನಿಯಾ ವಿಜಯ್ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಬಂಧನ
ದಾವಣಗೆರೆ, ಆಗಸ್ಟ್ 9 : ಹಣ ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ನಟ ದುನಿಯಾ ವಿಜಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷನನ್ನು ಪೊಲೀಸರು ಬುಧವಾರ ದಾವಣಗೆರೆಯಲ್ಲಿ ಬಂಧಿಸಿದ್ದಾರೆ.
ವಜ್ರದ ವ್ಯಾಪಾರಿ ಸೋಗಿನಲ್ಲಿ ಗ್ರಾಹಕರನ್ನು ಬಂಧಿಸಿ, ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ದುನಿಯಾ ವಿಜಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಎಚ್.ಎಸ್. ದೊಡ್ಡೇಶ್, ಬೆಳ್ಳಿಬೆಟ್ಟ ಚಿತ್ರದ ನಿರ್ಮಾಪಕ ಹಾಗೂ ಹೊನ್ನಾಳಿ ತಾಲೂಕು ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಉತ್ತೇಶ್ ಎನ್ನುವರನ್ನು ಬಂಧಿಸಿದ್ದಾರೆ.
ಆರೋಪಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಬರೇಜ್ ಎ ಶೇಕ್ ಎನ್ನುವರಿಗೆ ವಜ್ರ ಕೊಡುವುದಾಗಿ ನಂಬಿಸಿ ಅಕ್ರಮ ಬಂಧನದಲ್ಲಿಟ್ಟುಕೊಂಡು ಹಣ ನೀಡುವಂತೆ ಪೀಡುಸುತ್ತಿದ್ದರು ಎನ್ನಲಾಗಿದೆ.
ಮನಬಂದಂತೆ ಹಿಂಸೆ ಕೊಟ್ಟು ಆಸ್ತಿ ವಿವರ, ಬ್ಯಾಂಕ್ ಬ್ಯಾಲೆನ್ಸ್ ಪಡೆದು ಪೊಲೀಸರಿಗೆ ದೂರು ನೀಡಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಸದ್ಯ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 36 ಸಾವಿರ ರು. ನಗದು, 1 ಫೋರ್ಡ್, 1 ಬೆನ್ಜ್ ಕಾರು, 3 ಮೊಬೈಲ್ ವಶಕ್ಕೆ ಪಡೆದಿದ್ದಾರೆ.