ಆನ್ಲೈನ್ನಲ್ಲಿ ಮತದಾರರ ಸೆಳೆಯುವ ತಂತ್ರ: ದಾವಣಗೆರೆಯಲ್ಲಿ 59 ಲಾಪ್ಟಾಪ್ ವಶ
ದಾವಣಗೆರೆ, ಏಪ್ರಿಲ್ 12: ಆನ್ಲೈನ್ ಮೂಲಕ ಬಿಜೆಪಿ ಪರ ಪ್ರಚಾರ ತಂತ್ರ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ. ಯಾವುದೇ ರೀತಿಯ ಅನುಮತಿ ಪಡೆಯದೇ ಟೆಲಿ ಕಾಲ್ ಮೂಲಕ ಮತದಾರರ ಸೆಳೆಯುವ ಪ್ರಯತ್ನ ನಡೆಯುತ್ತಿದ್ದ ಸ್ಥಳದಲ್ಲಿ 59ಕ್ಕೂ ಹೆಚ್ಚು ಲ್ಯಾಪ್ ಟಾಪ್ ವಶಪಡಿಸಿಕೊಂಡ ಘಟನೆ ನಗರದ ಚೇತನ ಹೊಟೇಲ್ ಎದುರುಗಡೆ ಇರುವ ರಾಮಕೃಷ್ಣ ಆರ್ಥೋಪೆಡಿಕ್ ಎಸೆನ್ ಷಿಯಲ್ಸ್ ಆಸ್ಪತ್ರೆ ಕಟ್ಟಡದಲ್ಲಿ ನಡೆದಿದೆ.
ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿ 60ಕ್ಕೂ ಜನರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತಿತ್ತು. ಟೆಲಿಕಾಲ್ ಮೂಲಕ ಕರೆ ಮಾಡಿ ಕಳೆದ ಐದು ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಸಾಧನೆ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹೇಳುವುದು, ಬಿಜೆಪಿಯ ಕಮಲ ಗುರುತಿಗೆ ಮತ ಚಲಾಯಿಸುವಂತೆ ಆಮಿಷ ಒಡ್ಡುವ ರೀತಿಯಲ್ಲಿ ಆನ್ಲೈನ್ ಮೂಲಕ ಮತದಾರರ ಸೆಳೆಯುವ ಯತ್ನ ಮಾಡಲಾಗುತಿತ್ತು ಎನ್ನುವ ಆರೋಪ ಕೇಳಿ ಬಂದಿದೆ.

60ಕ್ಕೂ ಹೆಚ್ಚು ಟೆಲಿ ಕಾಲರ್ಗಳನ್ನು ಈ ಕೆಲಸಕ್ಕೆ ನಿಯೋಜನೆ ಮಾಡಲಾಗಿತ್ತು. ಸೂರ್ಯ ಎಂಬುವವರ ಹೆಸರಿನಲ್ಲಿ ಅಗ್ರಿಮೆಂಟ್ ಆಗಿದ್ದ ಕಚೇರಿಯನ್ನು ಚುನಾವಣಾಧಿಕಾರಿಗಳು ಸೀಜ್ ಮಾಡಿದ್ದಾರೆ. ಗುಜರಾತ್, ಬಿಹಾರ ಮೂಲದವರಿಂದ ಕಾರ್ಯ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದ್ದು, ಸ್ಥಳೀಯರಿಗೆ ಉದ್ಯೋಗ ನೀಡುವ ನೆಪದಲ್ಲಿ ಈ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ.
ಬಿಜೆಪಿ ಸಾಧನೆಗಳ ಬಗ್ಗೆ, ಕಾಂಗ್ರೆಸ್ ಪಕ್ಷ ಅವಹೇಳನ ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ ಎಂಬ ದೂರು ಕೇಳಿ ಬಂದಿದೆ. ಟೆಲಿ ಕಾಲ್ ಮೂಲಕ ಮತದಾರರಿಗೆ ಬಿಜೆಪಿಗೆ ಮತ ಹಾಕುವಂತೆ ಆಮಿಷ ಹಾಗೂ ವೆಬ್ ಸೈಟ್, ವ್ಯಾಟ್ಸಪ್ ಗ್ರೂಪ್ ಮಾಡಿ ಕಾಂಗ್ರೆಸ್ ತೇಜೋವಧೆ ಮಾಡಲಾಗುತಿತ್ತು ಎಂದು ಹೇಳಲಾಗಿದೆ.

ಸ್ಥಳಕ್ಕೆ ಬಂದ ಚುನಾವಣಾಧಿಕಾರಿಗಳು ಆಗಮಿಸಿ ಕೆಲಸ ಮಾಡುವವರ ವಿಚಾರಣೆ ನಡೆಸಿದರು. ನಮಗೆ ಕೆಲಸ ಬೇಕಿತ್ತು, ಬಂದಿದ್ದೇವೆ. ಬೇರೆ ಏನೂ ಗೊತ್ತಿಲ್ಲ ಎಂದು ಸ್ಥಳದಲ್ಲಿದ್ದ ಕೆಲಸಗಾರರು ತಿಳಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಮುಖಂಡರ ದಾಳಿ
ಆನ್ಲೈನ್ ಪ್ರಚಾರ ಸ್ಥಳಕ್ಕೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ದಾಳಿ ನಡೆಸಿದರು. ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಅನುಮತಿ ಪಡೆಯದೇ ಮತದಾರರನ್ನು ಆನ್ಲೈನ್ ಮೂಲಕ ಸೆಳೆಯುವ ಮೂಲಕ ಬಿಜೆಪಿ ವಾಮಮಾರ್ಗ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.
ಸ್ಥಳದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜಮಾಯಿಸಿದರು. ಬಿಜೆಪಿಯ ಮುಖಂಡರು, ಕಾರ್ಯಕರ್ತರು ಬಂದಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಧಿಕಾರಿಗಳು ಲ್ಯಾಪ್ ಟಾಪ್ ಸೀಜ್ ಮಾಡಿ, ಕಚೇರಿಯ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

ದಾವಣಗೆರೆ ಉತ್ತರ, ದಕ್ಷಿಣದಲ್ಲಿ ಶೇ.75ರಷ್ಟು ಮತದಾನದ ಗುರಿ: ಚುನಾವಣಾಧಿಕಾರಿ ರೇಣುಕಾ
ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಕಳೆದ ಬಾರಿ ಶೇಕಡಾ 65ರಷ್ಟು ಮತದಾನ ಆಗಿತ್ತು. ಈ ಬಾರಿ ಶೇಕಡಾ 75ರಷ್ಟು ಮತದಾನದ ಗುರಿ ಹೊಂದಲಾಗಿದೆ ಎಂದು ದಾವಣಗೆರೆ ದಕ್ಷಿಣ ಚುನಾವಣಾಧಿಕಾರಿ ರೇಣುಕಾ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಉತ್ತರದಲ್ಲಿ 242 ಮತಗಟ್ಟೆಗಳಿದ್ದು, ದಕ್ಷಿಣದಲ್ಲಿ 212 ಮತಗಟ್ಟೆಗಳನ್ನು ಮಾಡಲಾಗಿದೆ. ಇಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು. ಉತ್ತರದಲ್ಲಿ ಒಟ್ಟು 2,32,014 ಹಾಗೂ ದಕ್ಷಿಣದಲ್ಲಿ 2,04,442 ಮತದಾರರಿದ್ದಾರೆ. ಉತ್ತರದಲ್ಲಿ 46 ಹಾಗೂ ದಕ್ಷಿಣದಲ್ಲಿ 40 ಸೈನಿಕ ವೋಟರ್ಸ್ ಇದ್ದಾರೆ ಎಂದು ಮಾಹಿತಿ ನೀಡಿದರು.
ಬಿಎಲ್ಒ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಮತದಾನ ಹೆಚ್ಚಳ ಮಾಡಲು ಮನೆ ಮನೆ ಭೇಟಿ ನೀಡಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಗುವುದು. 12 ಸಾವಿರ ಮತದಾರರು 80 ವರ್ಷ ಮೇಲ್ಪಟ್ಟವರು ಇದ್ದು, ಇವರಿಗೆ ಮತದಾನಕ್ಕೆ ಮನೆಯಿಂದಲೇ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ 107 ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಚುನಾವಣಾಧಿಕಾರಿಗಳ ರೂಂ ನಂ.3ರಲ್ಲಿ ಏಪ್ರಿಲ್ 13 ರಿಂದ 20 ರವರೆಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ ಎಂದರು.
ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಭ್ಯರ್ಥಿಗಳು ನಾಮಪತ್ರಗಳ ನಮೂನೆ ಪಡೆದು ಏಪ್ರಿಲ್ 20 ರೊಳಗಾಗಿ ಸಲ್ಲಿಸಬೇಕು. ನಂತರ ಸ್ವೀಕರಿಸಲಾದ ನಾಮಪತ್ರಗಳನ್ನು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಅಭ್ಯರ್ಥಿಗಳು ಏಪ್ರಿಲ್ 24 ರಂದು ಮಧ್ಯಾಹ್ನ 3 ಗಂಟೆಯೊಳಗಾಗಿ ನಾಮ ಪತ್ರಗಳನ್ನು ಹಿಂಪಡೆಯಬಹುದಾಗಿದೆ ಎಂದು ರೇಣುಕಾ ವಿವರಿಸಿದರು.












Click it and Unblock the Notifications