ಲಾಕ್ಡೌನ್ ನನ್ನ ಜೀವ ಉಳಿಸಿದೆ: ಮಾಜಿ ಶಾಸಕ ಶಿವಶಂಕರ್
ದಾವಣಗೆರೆ, ಜೂ. 16: ಕಾನೂನು ರೀತಿ ಅನುಮತಿ ಪಡೆಯದೆ ಲೇಔಟ್ ನಿರ್ಮಾಣ ಆರಂಭಿಸಿ, ಅದರಲ್ಲಿಯೂ ಕಳಪೆ ಕಾಮಗಾರಿ ಮಾಡುತ್ತಿದ್ದುದನ್ನು ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದಿದ್ದನ್ನೇ ನೆಪವಾಗಿಟ್ಟುಕೊಂಡು ಮಾಜಿ ಶಾಸಕರೊಬ್ಬರ ಸುಪಾರಿ ಕೊಲೆಯತ್ನ ನಡೆದಿದೆ. ಜನರ ಹಿತಕ್ಕಾಗಿ ಯೋಜನೆಯ ಕಳಪೆ ಕಾಮಗಾರಿ ವಿರೋಧಿಸಿದ್ದೇ ಜೀವಕ್ಕೆ ಅಪಾಯ ತಂದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕಳೆದ ಜನವರಿ ತಿಂಗಳಿನಿಂದಲೇ ಸುಪಾರಿ ಕೊಲೆ ಯತ್ನಗಳು ನಡೆದಿವೆ ಎಂಬ ಆರೋಪ ಕೇಳಿ ಬಂದಿದ್ದು, ವಾರದ ಹಿಂದಷ್ಟೆ ಮತ್ತೊಮ್ಮೆ ಕೊಲೆ ಸಂಚು ನಡೆದಿದೆ. ಇದೀಗ ಕೊಲೆಗೆ ಸುಪಾರಿ ಕೊಟ್ಟವರೂ ಸೇರಿದಂತೆ ಮೂವರನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಜೊತೆಗೆ ಮಾಜಿ ಶಾಸಕರಿಗೆ ಸೂಕ್ತ ಭದ್ರತೆಯನ್ನು ಕೊಡಲಾಗಿದೆ. ಲಾಕ್ಡೌನ್ ಜಾರಿಯಲ್ಲಿ ಇದ್ದಿದರಿಂದ ಸುಪಾರಿ ಕೊಲೆ ಸಂಚು ಸಫಲವಾಗಿಲ್ಲ!.
ಗ್ರೀನ್ ಸಿಟಿ ಲೇಔಟ್
ದಾವಣಗೆರೆ ಜಿಲ್ಲೆಯ ಹರಿಹರ ಗ್ರೀನ್ ಸಿಟಿ ಲೇಔಟ್ ಸಿಟಿ ಯೋಜನೆಯಲ್ಲಿ ಕಳಪೆ ಕಾಮಗಾರಿ ನಡೆದಿತ್ತು. ಜೊತೆಗೆ ಸಂಬಂಧಿಸಿದ ಇಲಾಖೆಗಳ ಅನುಮತಿ ಪಡೆಯದೇ ಲೇಔಟ್ ನಿರ್ಮಾಣ ಮುಂದುವರೆದಿತ್ತು. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎಚ್ ಎಸ್ ಶಿವಶಂಕರ್ ಹರಿಹರ ನಗರಸಭೆಗೆ ದೂರು ನೀಡಿದ್ದರು. ಜೊತೆಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದರು.
ಹರಿಹರದ ಕಿರ್ಲೋಸ್ಕರ್ ಪ್ರದೇಶದಲ್ಲಿ 157 ಎಕರೆ ಪ್ರದೇಶದಲ್ಲಿ ಹರಿಹರ ಗ್ರೀನ್ ಸಿಟಿ ಲೇಔಟ್ ನಿರ್ಮಾಣ ಆರಂಭವಾಗಿದೆ. ಅದರಲ್ಲಿ 57 ಎಕರೆ ಲೇಔಟ್ ನಿರ್ಮಾಣಕ್ಕೆ ಸಬ್ ಕಾಂಟ್ರಾಕ್ಟ್ ಪಡೆದಿದ್ದ ಗುತ್ತಿಗೆದಾರ ಮಂಜುನಾಥ್ ಎಂಬುವರು ಕಳಪೆ ಕಾಮಗಾರಿ ಮಾಡಿದ್ದಾರೆಂದು ಎಂದು ಮಾಜಿ ಶಾಸಕ ಶಿವಶಂಕರ್ ದೂರು ಕೊಟ್ಟಿದ್ದರು. ಹೀಗಾಗಿ ಹಲವು ಇಲಾಖೆಗಳು ಕಾಮಗಾರಿ ಪರಿಶೀಲನೆ ನಡೆಸಿ ಕಾಮಗಾರಿ ನಡೆಸದಂತೆ ತಡೆಯಾಜ್ಞೆ ನೀಡಿದ್ದವು.
ಸುಪಾರಿ ಕೊಲೆ ಯತ್ನ
ಗ್ರೀನ್ ಸಿಟಿ ಲೇಔಟ್ ಕಾಮಗಾರಿಗೆ ಹರಿಹರ ನಗರಸಭೆ ತಡೆಯೊಡ್ಡಿದ್ದರಿಂದ ಗುತ್ತಿಗೆದಾರ ಮಂಜುನಾಥ್ ಎಂಬುವರು ಕೊಲೆಗೆ ಸಂಚು ಮಾಡಿದ್ದರೆಂದು ಎಚ್.ಎಸ್. ಶಿವಶಂಕರ್ ದೂರು ಕೊಟ್ಟಿದ್ದಾರೆ.
ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಗುತ್ತಿಗೆದಾರ ಮಂಜುನಾಥ್ ಸೇರಿದಂತೆ ಕೊಲೆ ಸಂಚು ನಡೆಸಿದ್ದ ವಿನಯ್, ರಾಕೇಶ್ ಎಂಬುರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
FIR ನಲ್ಲೇನಿದೆ?
ಹರಿಹರದ ಗ್ರೀನ್ ಸಿಟಿ ಅಭಿವೃದ್ಧಿ ಪಡಿಸಲು ಕಾಮಗಾರಿ ಕಾಂಟ್ರಾಕ್ಟ್ ಪಡೆದಿರುವ ನಂದಿ ಕನ್ಸ್ಟ್ರಕ್ಷನ್ ಮಾಲೀಕರಾದ ಮಂಜುನಾಥ ಈತನು ನನಗೆ ಮೊದಲಿನಿಂದಲೂ ಪರಿಚಯ. ಈ ಹಿಂದೆ ನಮ್ಮ ಪಕ್ಷ ಜೆಡಿಎಸ್ನಲ್ಲಿದ್ದರು. ನಂತರ ರಾಜಕೀಯ ಸ್ಥಿತ್ಯಂತರದಲ್ಲಿ ಬೇರೆ ರಾಜಕೀಯ ಪಕ್ಷ ಸೇರಿದ್ದರು. ಗ್ರೀನ್ ಸಿಟಿ ಅಭಿವೃದ್ಧಿ ಬಗ್ಗೆ ಗಮನ ಹರಿಸಿದಾಗ ಯಾವುದೇ ಇಲಾಖೆಗಳಿಂದ ಕಾನೂನು ರೀತಿ ಅನುಮೋದನೆ ಪಡೆಯದೇ ಕಾಮಗಾರಿ ನಡೆಸಿರುವುದು ನನ್ನ ಗಮನಕ್ಕೆ ಬಂದಿತ್ತು.
ಈ ಕುರಿತು ಸಂಬಂಧಿಸಿದ ಇಲಾಖೆಗಳ ಗಮನ ಸೆಳೆದಾಗ, ಕಾಮಗಾರಿಯನ್ನು ಕೆಲವು ಇಲಾಖೆಗಳು ತಡೆದಿವೆ. ಇದರಿಂದ ವಿಚಲಿತನಾದ ಮಂಜುನಾಥನು ನನ್ನನ್ನು ಕೊಲೆ ಮಾಡಿದರೆ ಕಾಮಗಾರಿಯ ಕೆಲಸ ಸುಮಗವಾಗುತ್ತದೆ ಎಂದು ತಯಾರಿ ನಡೆಸಿದ್ದನು. ಕೊಲೆ ಮಾಡುವ ಉದ್ದೇಶದಿಂದ ನಂದಿ ಕನ್ಸ್ಟ್ರಕ್ಷನ್ ಮಂಜುನಾಥ, ವಿನಯ್ ಹಾಗೂ ರಾಕೇಶ್ ಎಂಬುವರು ಹರಿಹರದ ಬೈಪಾಸ್ ಬಳಿ ಇರುವ ಸಾಯಿ ಗಾರ್ಡನ್ ಹೊಟೆಲ್ ಹತ್ತಿರ ಕಳೆದ ಒಂದು ವಾರದ ಹಿಂದೆ ಸಂಚು ನಡೆಸಿದ್ದ. ಇದು ವಿರೇಶ್ ಹಿರೇಮಠ ಅವರಿಂದ ನನಗೆ ತಿಳಿದು ಬಂದಿತ್ತು.
ಕೊಲೆ ಮಾಡಲು ಸಂಚು ರೂಪಿಸಿರುವ ಮಂಜುನಾಥ, ವಿನಯ್ ಹಾಗೂ ರಾಕೇಶ್ ಅವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ರಿತ್ಯ ಪ್ರಕರಣ ದಾಖಲಿಸಲಾಗಿದೆ.
ಮಾಜಿ ಶಾಸಕ ಶಿವಶಂಕರ್ ಹೇಳಿಕೆ
ಸುಪಾರಿ ಕೊಲೆ ಸಂಚಿನ ಕುರಿತು ತಮ್ಮ ಪ್ರತಿಕ್ರಿಯೆ ಕೊಟ್ಟಿರುವ ಹರಿಹರ ಜೆಡಿಎಸ್ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಅವರು, ನನ್ನನ್ನು ಮುಗಿಸಲು ಕೆಲವರು ಒಳಸಂಚು ನಡೆಸಿ, ಸುಪಾರಿ ಕೊಟ್ಟಿದ್ದಾರೆ. ಈ ಬಗ್ಗೆ ಪೊಲೀಸ್ ವರಿಷ್ಠಧಿಕಾರಿಗೆ ದೂರು ಕೊಟ್ಟಿದ್ದೇನೆ. ನಂದಿ ಕನ್ಷ್ಟ್ರಕ್ಷನ್ ಕಂಪನಿ ಮಾಲೀಕ ಮಂಜುನಾಥ ನಮ್ಮ ಜತೆಯಲ್ಲೆ ನಮ್ಮ ಪಕ್ಷದಲ್ಲೆ ಇದ್ದವನು. ಕಿಲೋಸ್ಕರ್ ಕಂಪನಿ ಜಾಗ ಖರೀದಿ ಮಾಡಿದವರೊಂದಿಗೆ ಸೇರಿಕೊಂಡ ನಂತರ ಸಮಸ್ಯೆ ಆರಂಭವಾಯಿತು. ದುಡ್ಡಿನ ದುರಾಸೆಯಿಂದ ನಮ್ಮಿಂದ ದೂರಾದ. ನಂತರ, ಕಾಂಗ್ರೆಸ್ನೊಂದಿಗೆ ಸೇರಿಕೊಂಡ. ನಗರ ಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದಾನೆ.
ಕಿರ್ಲೋಸ್ಕರ್ ಕಂಪನಿ ಜಾಗದಲ್ಲಿ ಗ್ರೀನ್ ಸಿಟಿ ಎಂಬ ಲೇಔಟ್ ಮಾಡಿದ್ದಾರೆ. ಅದು ಇನ್ನೂ ಸರ್ಕಾರದಿಂದ ಅನುಮೋದನೆಗೊಂಡಿಲ್ಲ. ಆದ್ರೂ, ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಇದನ್ನು ವಿರೋಧಿಸಿ ನಗರಸಭೆಗೆ ಮನವಿ ಕೊಟ್ಟಿದ್ದೇನೆ. ಸಾರ್ವಜನಿಕ ಹಿತಾಸಕ್ತಿಯಿಂದ ಮನವಿ ಸಲ್ಲಿಸಿದ್ದೇನೆ. ಅದೇ ನನಗೆ ತಿರುಗು ಬಾಣವಾಗಿದೆ. ನನ್ನನ್ನು ಮುಗಿಸಲು ಜನವರಿಯಿಂದಲೇ ಒಳಸಂಚು ನಡೆಸಿದ್ದಾರೆ. ಲಾಕ್ಡೌನ್ ಅಗಿದ್ದು ನನಗೆ ವರದಾನವಾಗಿದೆ. ಬೆಂಗಳೂರಿನ ವ್ಯಕ್ತಿಯಿಂದ ಮಾರಕ ಅಸ್ತ್ರ, ವಿಷದ ಬಗ್ಗೆ ವಿಚಾರಣೆ ಮಾಡಿದ್ದಾರೆ. ಆರೋಪಿ ಮಾತನಾಡಿದ್ದನ್ನು ಅವರು ರೆಕಾರ್ಡ್ ಮಾಡಿದ್ದಾರೆ. ನನ್ನನ್ನು ಮುಗಿಸಲು ಸುಪಾರಿ ನೀಡಿದ್ದಾರೆ. ಈ ವಿಷಯ ನನಗೆ ತಿಳಿದಾಗ ಶಾಕ್ ಆಯ್ತು.
ಬೆಂಗಳೂರಿನ ವ್ಯಕ್ತಿ ನೇರವಾಗಿ ನನಗೆ ಮಾಹಿತಿ ನೀಡಿದ್ದ, ಆ ವ್ಯಕ್ತಿಯ ಹೆಸರನ್ನು ಪೊಲೀಸರಿಗೆ ತಿಳಿಸಿದ್ದೇನೆ. ರೌಡಿ ಶೀಟರ್ಗಳಾದ ವಿನಯ್, ರಾಕೇಶ್ ಸಹಾ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದಿದ್ದಾರೆ.