ತಾಂಡಗಳ ಅಭಿವೃದ್ಧಿಗಾಗಿ 100 ಕೋಟಿ ಮೀಸಲು: ಸಿಎಂ
ದಾವಣಗೆರೆ, ಫೆಬ್ರವರಿ 14: ಸಂತ ಸೇವಾಲಾಲ್ ರ 281 ನೇ ಜಯಂತಿಯನ್ನು ದಾವಣಗೆರೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಆಚರಿಸಲಾಯಿತು. ಸೇವಾಲಾಲ್ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಯಡಿಯೂರಪ್ಪ, ಮುಂದಿನ ಎರಡು ವರ್ಷಗಳಲ್ಲಿ ಲಂಬಾಣಿ ತಾಂಡಗಳನ್ನು ಕಂದಾಯ ತಾಂಡಗಳಾಗಿ ಮಾಡುತ್ತೇನೆಂದು ಭರವಸೆ ನೀಡಿದರು.
ಲಂಬಾಣಿ ಕಲೆ, ಸಂಸ್ಕೃತಿ, ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಲಂಬಾಣಿ ಕಲೆ ಭಾಷಾಭಿವೃದ್ದಿ ಅಕಾಡೆಮಿ ಸ್ಥಾಪಿಸುತ್ತೇನೆ, ಅಷ್ಟೇ ಅಲ್ಲದೇ ಮಾರ್ಚ 5 ರಂದು ಮಂಡನೆ ಮಾಡುವ ಬಜೆಟ್ ನಲ್ಲಿ ಲಂಬಾಣಿ ತಾಂಡ ಅಭಿವೃದ್ದಿಗಾಗಿ 100 ರುಪಾಯಿ ಕೋಟಿ ಮೀಸಲಿಡುತ್ತೇನೆ ಎಂದರು.
ಮೂರು ವರ್ಷದ ಅಧಿಕಾರದ ಅವಧಿಯಲ್ಲಿ ಬಂಜಾರ ಸಮಾಜ ಯಾವುದೇ ಸಮಸ್ಯೆ ಇಲ್ಲದೇ, ನೆಮ್ಮದಿ, ಗೌರವ, ಸ್ವಾಭಿಮಾನದಿಂದ ಬದುಕುವ ಎಲ್ಲಾ ವ್ಯವಸ್ಥೆ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ವೇದಿಕೆ ಮೇಲೆ ಹಾಲಿ ಹಾಗೂ ಮಾಜಿ ಸಚಿವರ ವಾಗ್ವಾದ
ಸೇವಾಲಾಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್, ಬಂಜಾರ ಸಮುದಾಯದ ಅಭಿವೃದ್ದಿಗೆ ಬಜೆಟ್ ನಲ್ಲಿ 300 ಕೋಟಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು..ಅಷ್ಟೇ ಅಲ್ಲದೇ ಬಂಜಾರ ಸಮುದಾಯವರನ್ನು ಕೆಪಿಎಸ್ ಸಿ ಸದಸ್ಯರನ್ನಾಗಿ, ಎಂ ಎಲ್ ಸಿ ಗಳನ್ನಾಗಿ ನೇಮಕ ಮಾಡಬೇಕೆಂದು ಪಟ್ಟು ಹಿಡಿದರು.

ಅಲ್ಲದೇ ಸಿಎಂ ಯಡಿಯೂರಪ್ಪ ನವರು ಲಂಬಾಣಿ ಸಮಾಜಕ್ಕೆ ಸಾಕಷ್ಟು ಅನುದಾನ ನೀಡಿದ್ದು, ಹಾಡಿ ಹಟ್ಟಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದ ಪ್ರಭು ಚೌಹಾಣ್, ಬಂಜಾರ ಸಮುದಾಯಕ್ಕೆ ನೀಡಿದ ಕೊಡಿಗೆಗಳನ್ನು ಹೇಳಿ ಯಡಿಯೂರಪ್ಪ ರಾಜಾಹುಲಿ ಎಂದು ಘೋಷಣೆ ಕೂಗಿದರು.
ಈ ನಡುವೆ ಪ್ರವೇಶಿಸಿದ ಮಾಜಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ, ಮಾಜಿ ಸಿಎಂ ಸಿದ್ದರಾಮಯ್ಯನವರ ಕೊಡುಗೆಗಳನ್ನು ಹೇಳಿ "ಹೌದು ಹುಲಿಯಾ' ಎಂದರು. ಈ ವೇಳೆ ಯಡಿಯೂರಪ್ಪ ಇಬ್ಬರನ್ನು ಸಮಾಧಾನ ಮಾಡಿ ಪಿ.ಟಿ.ಪರಮೇಶ್ವರ್ ನಾಯ್ಕರಿಗೆ ಮಾತನಾಡಲು ಅನುಕೂಲ ಮಾಡಿಕೊಟ್ಟರು.












Click it and Unblock the Notifications