ಕುಮಾರಸ್ವಾಮಿಯ 5 ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಕಾಂಗ್ರೆಸ್?
ಬೆಂಗಳೂರು, ನವೆಂಬರ್ 05 : 'ಬಿಬಿಎಂಪಿಯಲ್ಲಿ ಜೆಡಿಎಸ್ ಸದಸ್ಯರಿಗೆ ಕೆಲಸ ಮಾಡಲು ಬಿಡುತ್ತಿಲ್ಲ. ಕಾಂಗ್ರೆಸ್ನವರು ಕೆಲಸ ಮಾಡುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ವರ್ಷ ಜೆಡಿಎಸ್ ಬೆಂಬಲ ನೀಡುವುದಿಲ್ಲ' ಎಂದು ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು ಬಿಬಿಎಂಪಿಯಲ್ಲಿನ ಆಡಳಿತದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಗಿದು ಎರಡೂವರೆ ತಿಂಗಳು ಕಳೆದಿದೆ. ಒಂದೇ ಒಂದು ಯೋಜನೆ ಕೈಗೆತ್ತಿಕೊಂಡಿಲ್ಲ' ಎಂದು ದೂರಿದರು. [ಬಿಬಿಎಂಪಿಯಲ್ಲಿ ಮೈತ್ರಿ ಮುರಿಯುವ ಮಾತನಾಡಿದ ಎಚ್ಡಿಕೆ]
'ಬಿಜೆಪಿ ಬಿಬಿಎಂಪಿಯಲ್ಲಿ ಆಡಳಿತ ನಡೆಸಿದಾಗ ಲೂಟಿ ಹೊಡೆದಿತ್ತು. ಕಾಂಗ್ರೆಸ್ ಬೆಂಗಳೂರು ನಗರದ ಅಭಿವೃದ್ಧಿ ಮಾಡಲಿದೆ ಎಂದು ನಮ್ಮ ಪಕ್ಷ ಬೆಂಬಲ ನೀಡಿದೆ. ಆದರೆ, ಆ ಪಕ್ಷದ ಕೆಲವು ಶಾಸಕರು ನಮ್ಮ ಸದಸ್ಯರ ಮೇಲೆಯೇ ಸವಾರಿ ಮಾಡಲು ಬರುತ್ತಿದ್ದಾರೆ' ಎಂದು ಆರೋಪಿಸಿದರು. [ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಜಯ]
'ಬಿಬಿಎಂಪಿಯಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ನೀಡಿರುವ ಬೆಂಬಲದ ಬಗ್ಗೆ ಮರುಪರಿಶೀಲನೆ ನಡೆಸಬೇಕಾಗುತ್ತದೆ. ನಾವು ಬೆಂಬಲ ಕೊಟ್ಟಿರುವುದು ಕೇವಲ ಒಂದು ವರ್ಷಕ್ಕೆ ಮಾತ್ರ. ಇದನ್ನು ಅರ್ಥ ಮಾಡಿ ಕೊಂಡರೆ ಒಳ್ಳೆಯದು' ಎಂದು ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿದರು. ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಕೇಳಿದ ಐದು ಪ್ರಶ್ನೆಗಳು ಚಿತ್ರಗಳಲ್ಲಿ......
'ಇದೆಂಥಾ ಆಡಳಿತ ಮಾಡುತ್ತಿದ್ದೀರಿ?'
'ಬೆಂಗಳೂರು ನಗರದ ರಸ್ತೆಗಳ ತುಂಬಾ ಗುಂಡಿ ಮತ್ತು ಕಸದ ರಾಶಿಗಳು ಕಾಣಿಸುತ್ತವೆ. ಈ ಬಗ್ಗೆ ಗಮನಹರಿಸಲು ಸಾಧ್ಯವಾಗದಿದ್ದಲ್ಲಿ ಎಂಥಾ ಆಡಳಿತ ಮಾಡುತ್ತೀರಿ?. ಮೇಯರ್ ಮಂಜುನಾಥ ರೆಡ್ಡಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ನಿತ್ಯ ನಗರ ಪ್ರದಕ್ಷಿಣೆ ಹಾಕಿ ಫೋಟೊಗಳಿಗೆ ಫೋಸು ನೀಡುತ್ತಿದ್ದಾರೆ' ಆಡಳಿತದ ಕಡೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲವೇ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
'ಕೇರಳ, ಗೋವಾಕ್ಕೆ ಕರೆದೊಯ್ಯಬೇಕಿತ್ತೇ?'
'ಬಿಬಿಎಂಪಿಯಲ್ಲಿ ಈ ರೀತಿಯ ಆಡಳಿತ ನೀಡಲು ಸದಸ್ಯರೆಲ್ಲರನ್ನೂ ಕೇರಳ, ಗೋವಾಕ್ಕೆ ಕರೆದುಕೊಂಡು ಹೋಗಬೇಕಿತ್ತೆ?. ಸದಸ್ಯರನ್ನು ಕರೆದುಕೊಂಡು ಹೋಗಿದ್ದ ಶಾಸಕರು ಏನು ಬೇಕಾದರು ಮಾಡಬಹುದು ಅಂದುಕೊಂಡಿದ್ದರೆ ಅದು ಸುಳ್ಳು. ಜೆಡಿಎಸ್ ಸದಸ್ಯರನ್ನು ಸರಿಯಾಗಿ ನಡೆಸಿಕೊಂಡರೆ ಮಾತ್ರ ಬೆಂಬಲ ಮುಂದುವರೆಯಲಿದೆ' ಎಂದು ಕುಮಾರಸ್ವಾಮಿ ಹೇಳಿದರು.
'ಧಿಮಾಕು ಮಾಡುವುದಕ್ಕಾ ಬೆಂಬಲ ನೀಡಿದ್ದು?'
'ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನ ಅವರು ಲಗ್ಗೆರೆಯ ನಮ್ಮ ಪಕ್ಷದ ಸದಸ್ಯೆಗೆ ಕೆಲಸ ಮಾಡಲು ಬಿಡುತ್ತಿಲ್ಲ. ಕಸ ಎತ್ತುವುದಕ್ಕೂ ಕ್ಯಾತೆ ತೆಗೆಯುತ್ತಿದ್ದಾರೆ. ಅಧಿಕಾರಿಗಳಿಗೂ ಸ್ಪಂದಿಸದಂತೆ ಸೂಚನೆ ನೀಡಿದ್ದಾರೆ. ಈ ರೀತಿ ಧಿಮಾಕು ಮಾಡುವುದಕ್ಕೆ ನಾವು ಬೆಂಬಲ ನೀಡಿಲ್ಲ?' ಎಂದು ಎಚ್ಡಿಕೆ ಸ್ಪಷ್ಟಪಡಿಸಿದರು.
'ಒಂದೇ ಒಂದು ಕಡತ ಏಕೆ ಬರುತ್ತಿಲ್ಲ?'
'ಬಿಬಿಎಂಪಿ ಮೇಯರ್ ಚುನಾವಣೆ ಮುಗಿದು ಎರಡೂವರೆ ತಿಂಗಳು ಕಳೆದರೂ ಒಂದೇ ಒಂದು ಯೋಜನೆ ಕೈಗೆತ್ತಿಕೊಂಡಿಲ್ಲ. ನಮ್ಮ ಪಕ್ಷದ ದೇವದಾಸ್ ಅವರಿಗೆ ಬೃಹತ್ ಕಾಮಗಾರಿ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಆದರೆ, ಇದುವರೆಗೂ ಅವರ ಬಳಿ ಒಂದೇ ಒಂದು ಕಡತ ಬಂದಿಲ್ಲ' ಎಂದು ಕುಮಾರಸ್ವಾಮಿ ಹೇಳಿದರು.
'ಕೆಲಸ ಮಾಡುವುದಕ್ಕೆ ಕಷ್ಟ ಏನು?’
'ಇದುವರೆಗೂ ಪಾಲಿಕೆ ಒಂದು ಯೋಜನೆಗೂ ಒಪ್ಪಿಗೆ ಕೊಟ್ಟಿಲ್ಲ. ಹೀಗೆ ಕೆಲಸ ಮಾಡಲು ನಾವು ನಿಮಗೆ ಬೆಂಬಬಲ ಕೊಟ್ಟಿಲ್ಲ. ನೀವು ಕೆಲಸ ಮಾಡದಿದ್ದರೆ ನಮ್ಮನ್ನೂ ಜನ ದೂಷಿಸುತ್ತಾರೆ. ಕೆಲಸ ಮಾಡುವುದಕ್ಕೆ ನಿಮಗೆ ಕಷ್ಟ ಏನು?' ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.