ಕೋನಾಪುರದಲ್ಲಿ 12 ವರ್ಷಗಳಿಂದ ಮಹಿಳೆಗೆ ಕಬ್ಬಿಣದ ಸರಪಳಿಯ ಬಂಧನ
ಹಿರಿಯೂರು, ಜುಲೈ.20: ಮಾನಸಿಕ ಕ್ಷೋಭೆಯಿಂದ ಬಳಲುತ್ತಿರುವ 21 ವರ್ಷದ ಸರಸ್ವತಿ ಎಂಬ ಯುವತಿಯನ್ನು ನಿಯಂತ್ರಣ ಮಾಡಲು ತನ್ನ ಕುಟುಂಬದ ಸದಸ್ಯರೇ ಆಕೆಯ ಕಾಲಿಗೆ ಕಳೆದ 12 ವರ್ಷಗಳಿಂದ ಸರಪಳಿ ಮತ್ತು ಸುಮಾರು 40 ಕೆಜಿ ತೂಕದ ಮರದ ತುಂಡನ್ನು ಕಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದಲ್ಲಿ ಕಂಡುಬಂದಿದೆ.
ಮಾನಸಿಕ ಕ್ಷೋಭೆಗೆ ಒಳಗಾಗಿದ್ದ ಸರಸ್ವತಿ ಗ್ರಾಮದ ಅಕ್ಕ ಪಕ್ಕದವರ ಜೊತೆಗೆ ವಿನಾಕಾರಣ ಜಗಳ ಮಾಡುವುದು , ಅನುಚಿತವಾಗಿ ವರ್ತಿಸುವುದನ್ನು ಕಂಡ ಮನೆಯವರು ಸರಸ್ವತಿಯ ಕಾಲಿಗೆ ಸರಪಳಿ ಮತ್ತು ಮರದ ಕೊರಡನ್ನು ಕಟ್ಟಿ ಅಮಾನವೀಯ ಕ್ರೂರ ಶಿಕ್ಷೆ ನೀಡಿದ್ದಾರೆ.
ಸಂತ್ರಸ್ತೆಯನ್ನು ಸದಾ ಮನೆಯ ಕೊಠಡಿಯಲ್ಲಿ ಕೂಡಿ ಹಾಕಲಾಗಿತ್ತು ಎಂದು ದೂರಲಾಗಿದೆ. ಸುದ್ದಿ ತಿಳಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಆಕೆಯನ್ನು ರಾಂಪುರ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಕಳೆದ ತಿಂಗಳ ಹಿಂದೆ 'ದುರ್ಗದ ಚಿತ್ತ ಶಾಲೆಯತ್ತ' ಎಂಬ ವಿನೂತನ ಕಾರ್ಯಕ್ರಮವನ್ನು ಚಿತ್ರದುರ್ಗ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನ ಅವರು ಹಮ್ಮಿಕೊಂಡಿದ್ದರು. ಇದೇ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನ ಅವರು ಈ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದು, ಈ ಘಟನೆ ಬೆಳಕಿಗೆ ಬಂದಿರಲಿಲ್ಲ.
ಅಕ್ಕಪಕ್ಕದವರು ಹೇಳುವಂತೆ, ಗ್ರಾಮದ ನಿಂಗಮ್ಮ ಎಂಬುವರ ಪುತ್ರಿ ಸರಸ್ವತಿ ಮೊದಲಿನಿಂದಲೂ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದು, ಇದನ್ನು ಗಮನಿಸಿದ ತಾಯಿ ನಿಂಗಮ್ಮ 10 ನೇ ವರ್ಷಕ್ಕೆ ತನ್ನ ಸಹೋದರನಾದ ಬೋಮ್ಮಣ್ಣನಿಗೆ ಸರಸ್ವತಿಯನ್ನು ಕೊಟ್ಟು ಮದುವೆ ಮಾಡಿದ್ದರು.
ನಂತರ ಸಂಸಾರದ ಬದುಕು ಹೊಂದಾಣಿಕೆಯಾಗದ ಕಾರಣ ಪತಿ ಬೋಮ್ಮಣ್ಣ ಮತ್ತೊಂದು ಮದುವೆ ಆಗಿದ್ದು, ಅದೇ ಗ್ರಾಮದಲ್ಲಿ ವಾಸವಾಗಿದ್ದಾರೆ. ಗಂಡ ಬೇರೊಂದು ಮದುವೆ ಆದ ವಿಷಯ ತಿಳಿದ ಸರಸ್ವತಿಯ ಮಾನಸಿಕ ವ್ಯಾಧಿ ಹೆಚ್ಚಾದ ಪರಿಣಾಮ ಆಕೆಯ ಮನಸ್ಸು ಚಂಚಲವಾಯಿತು.

ಆಕೆ ಮತ್ತಷ್ಟು ಉಗ್ರರೂಪ ತಾಳಿ, ಅಕ್ಕ ಪಕ್ಕದ ಮನೆಯವರು ಮತ್ತು ಗ್ರಾಮಸ್ಥರು ಓಡಾಡುವುದನ್ನು ಕಂಡು ಸಿಕ್ಕ ಸಿಕ್ಕವರನ್ನು ಗೇಲಿ ಮಾಡುತ್ತಾ, ಹಿಯಾಳಿಸುತ್ತಾ ವಿಚಿತ್ರವಾದ ವರ್ತನೆ ಮಾಡಲು ಪ್ರಾರಂಭಿಸಿದಳು.
ಇದರಿಂದ ಬೇಸತ್ತ ತನ್ನ ತಾಯಿ ನಿಂಗಮ್ಮ ಹತ್ತು ವರ್ಷದ ಹಿಂದೆ ಆಕೆಯ ಕಾಲಿಗೆ 40 ಕೆಜಿ ಭಾರದ ಕೊರಡನ್ನು ಕಟ್ಟಿದಳು. ಮತ್ತೊಂದು ಕಡೆ ಮಗಳ ವರ್ತನೆಗೆ ಬೇಸತ್ತ ತಾಯಿ ನಿಂಗಮ್ಮ ಹಿಂದೆ ಕಾಲು ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದಾಳೆ.
ವಿಶೇಷ ಎಂದರೆ ಈ ಕುಟುಂಬ ಪೂಜಾರಿಕೆ ವೃತ್ತಿ ನಿರ್ವಹಿಸಿದ್ದು, ಸರಸ್ವತಿಯ ಗಂಡ ಬೋಮ್ಮಣ್ಣನೇ ದೇವಸ್ಥಾನದ ಆರ್ಚಕನಾಗಿದ್ದಾನೆ. ಆಧುನಿಕ ಯುಗದಲ್ಲಿ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿದ್ದು, ನಾಗರೀಕ ಸಮಾಜದ ತಲೆ ಎತ್ತದಂತಾಗಿದೆ.

ಮತ್ತೊಂದು ಕಡೆ, ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಸೂಕ್ತ ಕ್ರಮ ಕೈಕೈಗೊಳ್ಳಬೇಕೆಂಬುದು ಎಲ್ಲರ ಆಶಯ.












Click it and Unblock the Notifications