ಕೆಲವೇ ದಿನಗಳಲ್ಲಿ ವಿವಿ ಸಾಗರಕ್ಕೆ ನೀರು; ಅ.1ಕ್ಕೆ ಸಿಎಂ ಚಾಲನೆ
ಚಿತ್ರದುರ್ಗ, ಸೆಪ್ಟೆಂಬರ್ 27: ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಗೆ ನೀರು ಹರಿದು ಬರಲು ಕೆಲವೇ ದಿನಗಳು ಬಾಕಿ ಇವೆ. ಅ 1 ರಿಂದ ಭದ್ರಾ ನೀರನ್ನು ವಾಣಿ ವಿಲಾಸ ಜಲಾಶಯಕ್ಕೆ ಹರಿಸುವ ಕಾರ್ಯಕ್ರಮಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ತಾಲೂಕಿನ ಬೆಟ್ಟದ ತಾವರೆಕೆರೆಗೆ ಸಿಎಂ ಆಗಮಿಸುತ್ತಿದ್ದು, ಬೆಟ್ಟದ ತಾವರೆ ಕೆರೆಯಲ್ಲಿ ಬೃಹತ್ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಪ್ರಾಥಮಿಕ ಹಂತವಾಗಿ ಮುಖ್ಯಕಾಲುವೆಯಿಂದ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಸುತ್ತಿದ್ದು, ಅಂದು ಬೆಳಗ್ಗೆ 11ಕ್ಕೆ ಬೆಟ್ಟದ ತಾವರೆಕೆರೆಯ 2ನೇ ಪಂಪ್ ಹೌಸ್ ನಲ್ಲಿ ಸಿಎಂ ಅಧಿಕೃತ ಚಾಲನೆ ನೀಡಲಿದ್ದಾರೆ.
ಇಂದಿನಿಂದ ವಿವಿ ಸಾಗರಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಲು ಸಿದ್ಧತೆ
ಶಾಂತಿಪುರದ ಮೊದಲನೇ ಪಂಪ್ ಹೌಸ್ನಿಂದ ನೀರು ಎತ್ತಿ ಕಾಲುವೆಗೆ ಹರಿಸುವ ಪ್ರಾಯೋಗಿಕ ಕಾರ್ಯ ಈಗಾಗಲೇ ನಡೆದಿದ್ದು, ಬೆಟ್ಟದ ತಾವರೆಕೆರೆ ಲಿಫ್ಟ್ ಮಾಡುವ ಮೂಲಕ ಕಾಲುವೆಗೆ ಹರಿಸಲು ಎಲ್ಲ ಪೂರ್ವ ಸಿದ್ಧತೆಗಳು ನಡೆದಿವೆ. ಸೆ.25ರಂದು ಇಲ್ಲಿ ಪ್ರಾಯೋಗಿಕವಾಗಿ ನೀರೆತ್ತುವ ಕೆಲಸಕ್ಕೆ ಚಾಲನೆ ಸಿಗಬೇಕಿತ್ತು. ಆದರೆ, ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ತೊಡಕು ಎದುರಾಗಿರುವುದರಿಂದ ಶಾಂತಿಪುರ ಮತ್ತು ಬೆಟ್ಟದ ತಾವರೆಕೆರೆ ಲಿಫ್ಟ್ಗಳ ಬಳಿ ತಲಾ 220 ಕೆ.ವಿ. ಸಬ್ಸ್ಟೇಷನ್ಗಳನ್ನು ನಿರ್ಮಿಸಲಾಗಿದೆ.
ಅಜ್ಜಂಪುರ ಬಳಿ 7 ಕಿ.ಮೀ. ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ರೈಲ್ವೇ ಕ್ರಾಸಿಂಗ್ ಬಳಿ ಬಾಕ್ಸ್ ಕೆಲಸ ಪೂರ್ಣವಾಗಿ ಸದ್ಯಕ್ಕೆ 2.2. ಮೀಟರ್ ವ್ಯಾಸದ ಎರಡು ಪೈಪ್ಗಳಲ್ಲಿ ನೀರು ಹರಿಸಬೇಕಿದೆ. ನೀರು ವೈಜಂಕ್ಷನ್ ಹತ್ತಿರ ಖಾಸಗಿ ರೈತರ ಹೊಲದಲ್ಲಿ ನಿರ್ಮಾಣ ಮಾಡಿರುವ ಕಾಲುವೆಯ ಮೂಲಕ ಅಲ್ಲಿಂದ ಹೆಬ್ಬೂರು, ಅಬ್ಬಿನಹೊಳಲು, ಬೇಗೂರು ಮುಖಾಂತರ ಕುಕ್ಕೆ ಸಮುದ್ರ ಸೇರಿ, ಚೌಳು ಹಿರಿಯೂರು ಕೆಲ್ಲೋಡ್ ಚೆಕ್ ಡ್ಯಾಂ ನಂತರ ಕಾರೆಹಳ್ಳಿ ಸೇರುವ ಮೂಲಕ ಹಿರಿಯೂರಿನ ವಿವಿ ಸಾಗರ ಸೇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಗಿಯದ ಭದ್ರಾ ಕಾಮಗಾರಿ; ಅಧಿಕಾರಿಗಳಿಗೆ ರೈತರಿಂದ ತರಾಟೆ
ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು, ಚಿತ್ರದುರ್ಗ ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿಶ್ವೇಶ್ವರಯ್ಯ ಜಲ ನಿಗಮದ ಹಿರಿಯ ಅಧಿಕಾರಿಗಳು, ಭದ್ರಾ ಯೋಜನೆ ಅಧಿಕಾರಿಗಳು ಸೇರಿದಂತೆ ಹಿರಿಯೂರು, ಚಿತ್ರದುರ್ಗ ಜಿಲ್ಲೆಯ ಪ್ರಗತಿಪರ ರೈತ ಹೋರಾಟಗಾರು, ಸಂಘ ಸಂಸ್ಥೆಗಳು ಸೇರಿದಂತೆ ಸಾವಿರಾರು ರೈತರು ಭಾಗವಹಿಸಲಿದ್ದಾರೆ.