ವಾಣಿವಿಲಾಸ ಸಾಗರಕ್ಕೆ ಭದ್ರಾ ನೀರನ್ನು ಬಿಡುವ ಕಾರ್ಯಕ್ರಮ ಮುಂದೂಡಿಕೆ
ಚಿತ್ರದುರ್ಗ, ಸೆಪ್ಟೆಂಬರ್ 30: ಚಿತ್ರದುರ್ಗ ಜಿಲ್ಲೆಗೆ ಬಹು ನಿರೀಕ್ಷಿತವಾಗಿರುವ ಭದ್ರಾ ನೀರನ್ನು ವಾಣಿವಿಲಾಸ ಸಾಗರಕ್ಕೆ ಮಂಗಳವಾರ ಹರಿಸಬೇಕಾಗಿತ್ತು. ಆದರೆ ಈ ವರೆಗೂ ಭದ್ರಾ ಅಧಿಕಾರಿಗಳು ನಿಖರವಾದ ಮಾಹಿತಿ ನೀಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಇದೀಗ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ, "ತಾಂತ್ರಿಕ ದೋಷಗಳಿಂದ ಭದ್ರಾ ಮೇಲ್ದಂಡೆ ನೀರು ಬಿಡುವ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ" ಎಂದು ಪೋಸ್ಟ್ ಮಾಡಿದ್ದಾರೆ.
ಆದರೆ, ಭದ್ರಾ ನೀರು ಬಿಡುವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಸಾಮಾಜಿಕ ಜಾತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಭದ್ರಾ ಅಧಿಕಾರಿಗಳನ್ನು ಸಂಪರ್ಕಿಸಿದಾಗ, "ನಾವು ಆಹ್ವಾನ ಪತ್ರಿಕೆ ಮಾಡಿಸಿಲ್ಲ, ಇದು ನಮಗೆ ಗೊತ್ತಿಲ್ಲ" ಎಂದಿದ್ದಾರೆ. "ಇದು ಬೇರೆ ಯಾರೋ ಸೃಷ್ಟಿ ಮಾಡಿದಂತೆ ಇದೆ. ನಮ್ಮ ಇಲಾಖೆಯಿಂದ ಪತ್ರಿಕೆ ಮಾಡಿಸಿಲ್ಲ" ಎಂದು ಹೇಳುತ್ತಾರೆ.

ಸೆಪ್ಟೆಂಬರ್ 4ರಂದು ನಡೆದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ರೈತರ ಸಭೆಯಲ್ಲಿ ಭದ್ರಾ ಅಧಿಕಾರಿಗಳು ಅಕ್ಟೋಬರ್ 1ರಂದು ನೀರು ಬಿಡುವುದಾಗಿ ಹೇಳಿದ್ದರು. ಆದರೆ ಇದೀಗ ಏಕಾಏಕಿ ಹೀಗಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ರೈತರ ಹೇಳುತ್ತಾರೆ. ಇಲ್ಲಿಯವರೆಗೂ ಸುಳ್ಳು ಹೇಳಿಕೊಂಡು ಬಂದಿದ್ದ ಭದ್ರಾ ಅಧಿಕಾರಿಗಳು ರಾಜ್ಯದ ಮುಖ್ಯಮಂತ್ರಿಗೂ ಸುಳ್ಳು ಹೇಳಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಹದಿನೈದು- ಇಪ್ಪತ್ತು ದಿನಗಳಿಂದ ನಿರಂತರವಾಗಿ ಸಂಸದರ ಫೋನ್ ಸಂಪರ್ಕದಲ್ಲಿದ್ದೆ. ಆದರೆ ಇತ್ತೀಚೆಗೆ ಸಂಸದರು ಕರೆ ಸ್ವೀಕರಿಸುತ್ತಿಲ್ಲ. ಭದ್ರಾ ಮೇಲ್ದಂಡೆ ವಿಚಾರಗಳನ್ನು ಚರ್ಚೆ ಮಾಡಲು, ಸಂಸದರ ಗಮನಕ್ಕೆ ತರಲು ಪ್ರಯತ್ನಿಸಿದ್ದೇನೆ. ಮುಖ್ಯವಾಗಿ ಸಚಿವ ಮಾಧುಸ್ವಾಮಿ ಅವರನ್ನು ಹಿರಿಯೂರಿನಲ್ಲಿ ಭೇಟಿ ಮಾಡಿದ್ದೇನೆ ಎಂದು ಕೃಷಿಕ ಸಮಾಜದ ಅಧ್ಯಕ್ಷ ಎಚ್. ಆರ್. ತಿಮ್ಮಯ್ಯ ಹೇಳಿದ್ದಾರೆ.
ಇನ್ನು ಅಜ್ಜಂಪುರ ಬಳಿ ಇರುವ 22 ರೈತರ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ಎರಡು ವರ್ಷಗಳಿಂದ ವಿಳಂಬವಾಗಿದ್ದು, ಈ ವಿಚಾರವನ್ನು ಮೂರು ತಿಂಗಳ ಹಿಂದೆ ಸಂಸದರ ಗಮನಕ್ಕೆ ತಂದಿದ್ದೇನೆ. ಆಗ ಅವರು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದಂತೆ ಭೂ ಸ್ವಾಧೀನ ಪ್ರಕ್ರಿಯೆ ಮುಂದುವರಿದ ಮೇಲೆ ಯಾರೂ ಅಕ್ಷೇಪಣೆ ಸಲ್ಲಿಸದಿರಲು ಅಲ್ಲಿನ ಸರ್ಕಾರ ಮಾಡಿರುವ ಯೋಜನೆಯನ್ನು ನಮ್ಮ ರಾಜ್ಯದಲ್ಲಿ ಜಾರಿಗೆ ತರುತ್ತೇನೆಂದು ಹೇಳಿದ್ದರು ಎನ್ನುತ್ತಾರೆ.
ಹದಿನೈದು ದಿನಗಳಿಂದ ವಿಶ್ವೇಶ್ವರಯ್ಯ ಜಲನಿಗಮದ ಅಧಿಕಾರಿಗಳು ಆಸ್ಟ್ರಿಯಾ ದೇಶದಿಂದ ತಂದಿರುವ ಮೋಟಾರ್ ಪಂಪ್ ಗಳನ್ನು ಪರೀಕ್ಷಿಸಲು ಸ್ವಿಚ್ ಆನ್ ಮಾಡಲು ಬರುತ್ತಿದ್ದಾರೆಂದು ಸುಳ್ಳು ಹೇಳಿ, ರೈತರನ್ನು ದಿಕ್ಕು ತಪ್ಪಿಸಲಾಯಿತು ಎಂದು ತಿಮ್ಮಯ್ಯ ಹೇಳುತ್ತಾರೆ.
ಭದ್ರಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ದಿನಾಂಕಗಳು 'ನಾಳೆ ಬಾ' ಎನ್ನುವ ರೀತಿಯಲ್ಲಿ ಮುಂದಕ್ಕೆ ಹೋಗುತ್ತಿವೆ. ಆದರೆ ಇಂಜಿನಿಯರ್ ಗಳು ಆಸ್ಟ್ರಿಯಾದಿಂದ ಬರುವ ತಾಂತ್ರಿಕ ಅಧಿಕಾರಿಗೆ ವೀಸಾ ಸಿಕ್ಕಿಲ್ಲವೆಂದು ಈಗ ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಭದ್ರಾ ಅಧಿಕಾರಿಗಳು ವಾಣಿವಿಲಾಸ ಸಾಗರ ಹೋರಾಟ ಸಮಿತಿ, ರೈತರನ್ನು ಮತ್ತು ಸರ್ಕಾರವನ್ನು ವಂಚಿಸಿದ್ದಾರೆ ಎಂದು ಎಚ್. ಆರ್. ತಿಮ್ಮಯ್ಯ ಆರೋಪಿಸಿದ್ದಾರೆ.












Click it and Unblock the Notifications