ತುಮಕೂರು-ದಾವಣಗೆರೆ ನೇರ ರೈಲು; ಜನರಿಗೆ ಸಿಹಿ ಸುದ್ದಿ
ಚಿತ್ರದುರ್ಗ, ಮಾರ್ಚ್ 11 : ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಬೇಡಿಕೆ ಇಟ್ಟಿದ್ದ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ. ಈ ಯೋಜನೆಗಾಗಿ ಹಿರಿಯೂರು ತಾಲೂಕಿನಲ್ಲಿ 475 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಒಪ್ಪಿಗೆ ನೀಡಲಾಗಿದೆ.
Recommended Video
ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪುನರ್ವಸತಿ, ಪುನರ್ ನಿರ್ಮಾಣ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲೆಯ ಹಿರಿಯೂರು ತಾಲೂಕಿನ 19 ಗ್ರಾಮಗಳ 475 ಎಕರೆ ಭೂಮಿಯನ್ನು ಯೋಜನೆಗಾಗಿ ನೀಡಲಾಗುತ್ತದೆ.
ಈ ರೈಲು ಯೋಜನೆಗಾಗಿ ಹಿರಿಯೂರು ತಾಲೂಕಿನಲ್ಲಿ 639 ಎಕರೆ ಭೂಮಿಯ ಅಗತ್ಯವಿದೆ. ಈ ಪೈಕಿ ಐಮಂಗಲ, ಕಸಬಾ ಮತ್ತು ಜವಗೊಂಡನಹಳ್ಳಿ ಹೋಬಳಿಯ 19 ಗ್ರಾಮಗಳ 475 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ 55 ಕಿ. ಮೀ. ಮಾರ್ಗ ಹಿರಿಯೂರು ತಾಲೂಕಿನಲ್ಲಿ ಹಾದು ಹೋಗುತ್ತದೆ. ಒಟ್ಟು 5 ನಿಲ್ದಾಣಗಳನ್ನು ತಾಲೂಕಿನಲ್ಲಿ ಪ್ರಸ್ತಾಪಿಸಲಾಗಿದೆ. ಈ ಯೋಜನೆಯ ವೆಚ್ಚದ ತಲಾ ಶೇ 50ರಷ್ಟನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಭರಿಸಲಿವೆ.

ರೈಲು ಮಾರ್ಗದ ಯೋಜನೆ ವಿವರ
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಕಾಮಗಾರಿಯನ್ನು ತುಮಕೂರು, ಹಿರಿಯೂರು, ಚಿತ್ರದುರ್ಗ, ದಾವಣಗೆರೆ ಎಂದು ಒಟ್ಟು 5 ಪ್ಯಾಕೇಜ್ ಮಾಡಲಾಗಿದೆ. "ಹಿರಿಯೂರು ತಾಲೂಕಿನಲ್ಲಿ ಭೂ ಸ್ವಾಧೀನ ಕೈಗೊಳ್ಳುವ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಗ್ರಾಮಸಭೆ ನಡೆಸಿ, ಅಹವಾಲು ಸ್ವೀಕಾರ ಮಾಡಲಾಗಿದೆ" ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಹೇಳಿದ್ದಾರೆ.

ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಒತ್ತಾಯ
ಹಿರಿಯೂರಿನ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, "ಯೋಜನೆಯಿಂದ ಮನೆ ಕಳೆದುಕೊಳ್ಳುವವರಿಗೆ ಬೇರೆ ಕಡೆ ನಿವೇಶನ ನೀಡಿ, ಮನೆ ಕಟ್ಟಿಕೊಡುವ ಬಗ್ಗೆ ಪರಿಶೀಲಿಸಬೇಕು. ಇದರಲ್ಲಿ ಗ್ರಾಮೀಣ ಹಾಗೂ ನಗರದವರಿಗೆ ನಿಯಮಗಳು ಯಾವ ರೀತಿ ಎಂದು ಸ್ಪಷ್ಟಪಡಿಸಬೇಕು. ಸಂತ್ರಸ್ತರಿಗೆ ಅನ್ಯಾಯವಾಗಬಾರದು" ಎಂದು ಒತ್ತಾಯಿಸಿದ್ದಾರೆ.

ಬಜೆಟ್ನಲ್ಲಿ 100 ಕೋಟಿ ರೂ. ಘೋಷಣೆ
2018-19ರ ಬಜೆಟ್ನಲ್ಲಿ ಕೇಂದ್ರ ಸರ್ಕಾರ ನೇರ ರೈಲು ಮಾರ್ಗ ಯೋಜನೆಗೆ 100 ಕೋಟಿ ರೂ. ಘೋಷಣೆ ಮಾಡಿತ್ತು. 2018ರ ಜುಲೈನಲ್ಲಿ ಕರ್ನಾಟಕ ಸರ್ಕಾರ 2 ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಿ ಭೂಸ್ವಾಧೀನ ಕಾರ್ಯಕ್ಕೆ ಚಾಲನೆ ನೀಡುವಂತೆ ಅಧಿಸೂಚನೆ ಹೊರಡಿಸಿತ್ತು. ಭೂ ಸ್ವಾಧೀನ ಕಾರ್ಯ ಆರಂಭವಾದರೆ ಯೋಜನೆಗೆ ಚಾಲನೆ ಸಿಗಲಿದೆ.

ಪ್ರಯಾಣದ ಅವಧಿ ಕಡಿತ
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಆರಂಭವಾದರೆ ಬೆಂಗಳೂರು-ಚಿತ್ರದುರ್ಗ ನಡುವಿನ ಅಂತರ 110 ಕಿ. ಮೀ. ಕಡಿಮೆಯಾಗಲಿದೆ. ಬೆಂಗಳೂರು-ಅರಸೀಕೆರೆ-ಶಿವಮೊಗ್ಗ ಮಾರ್ಗದ ಮೇಲಿನ ಒತ್ತಡ ಕಡಿಮೆಯಾಗಲಿದೆ.












Click it and Unblock the Notifications