ಸಂಡೇ ಲಾಕ್ ಡೌನ್ ಗೆ ಕೋಟೆನಾಡು ಚಿತ್ರದುರ್ಗ ಸ್ತಬ್ಧ
ಚಿತ್ರದುರ್ಗ, ಜುಲೈ 5: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಭಾನುವಾರ ಲಾಕ್ ಡೌನ್ ಜಾರಿಯಾದ ಪರಿಣಾಮವಾಗಿ ಇಂದು ಬಹುತೇಕ ಕೋಟೆನಾಡು ಚಿತ್ರದುರ್ಗ ಸ್ತಬ್ಧವಾದಂತೆ ಕಂಡುಬಂದಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಪೇಪರ್, ಔಷಧಿಗಳು, ಆಸ್ಪತ್ರೆ ಎಂದಿನಂತೆ ಕಾರ್ಯ ನಿರ್ವಹಿಸಿದವು. ಉಳಿದಂತೆ ಕಾರು, ಆಟೋ, ಬಸ್ ಸೇವೆ ಇರಲಿಲ್ಲ. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ರಸ್ತೆಯಲ್ಲಿ ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ಬುದ್ಧಿ ಹೇಳಿ ಕಳಿಸಿದ್ದಾರೆ.
ಜಿಲ್ಲೆಯ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ, ಮೊಳಕಾಲ್ಮೂರು, ಹೊಸನಗರದಲ್ಲೂ ಸಹ ಭಾನುವಾರದ ಲಾಕ್ ಡೌನ್ ಗೆ ಜನರು ಸ್ಪಂದಿಸಿದ್ದಾರೆ ಎನ್ನಲಾಗಿದೆ.

ಈ ಮೊದಲು ಕೊರೊನಾ ವೈರಸ್ ಮುಕ್ತವಾಗಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ತಾಯಿ-ಮಗನಿಗೆ ಕೊರೊನಾ ಸೋಂಕು ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಮತ್ತೆ ಕೊರೊನಾ ಭೀತಿ ಎದುರಾಘಿದೆ. ಇದರಿಂದ ಸೋಂಕಿತರ ಸಂಖ್ಯೆ 80 ಕ್ಕೆ ಏರಿಕೆಯಾಗಿತ್ತು. 50 ಜನರು ಸೋಂಕಿನಿಂದ ಗುಣಮುಖರಾಗಿದ್ದು, 30 ಸಕ್ರೀಯ ಪ್ರಕರಣಗಳು ಉಳಿದಿವೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಜನತೆಯನ್ನು ನಿದ್ದೆಗೆಡಿಸಿದ್ದ ಮಹಾಮಾರಿ ಸೋಂಕಿಗೆ 23 ಪ್ರಕರಣಗಳು ಪತ್ತೆಯಾಗಿದ್ದವು. ಅದರಲ್ಲೂ 65 ವರ್ಷದ ವೃದ್ಧನ ಸಂಪರ್ಕದಿಂದ ಸುಮಾರು 13 ಜನರಿಗೆ ಸೋಂಕು ತಗುಲುವ ಮೂಲಕ ಬೆಚ್ಚಿ ಬೀಳಿಸುವಂತೆ ಮಾಡಿತ್ತು.

ಎರಡು ದಿನಗಳ ಹಿಂದೆ ವೃದ್ಧ, ವೈದ್ಯ, ವರ್ತಕ ಮೂರು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಹಿರಿಯೂರು ನಗರದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ನಗರದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕರು ಜಾಗೃತಗೊಂಡಿದ್ದಾರೆ.












Click it and Unblock the Notifications