ಸಿಎಂ ಬದಲಾವಣೆ ವಿವಾದದ ಬೆನ್ನಲ್ಲೇ ಬಿಜೆಪಿ ಮಹತ್ವದ ಸಭೆ
ಚಿತ್ರದುರ್ಗ, ಜುಲೈ 21: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಬದಲಾಯಿಸಲಾಗುತ್ತದೆ ಎನ್ನುವ ಸುದ್ದಿ ಕಳೆದ ಒಂದು ವಾರದಿಂದ ಹರಡಿದೆ. ಸದ್ಯ ಸಿಎಂ ಬದಲಾವಣೆ ವಿಚಾರ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸುದ್ದಿಯಾಗಿದ್ದು, ಯಡಿಯೂರಪ್ಪ ಬದಲಾವಣೆಗೆ ಹಲವು ಮಠಾಧೀಶರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ರಾಜ್ಯ ಬಿಜೆಪಿ ಮಹತ್ವದ ಸಭೆಯೊಂದನ್ನು ಕರೆದಿದ್ದು, "ಇದೇ ತಿಂಗಳ 24 ರಂದು ಇಂಡಿಯನ್ ಇಂಟರ್ನ್ಯಾಷನಲ್ ಕಾಲೇಜಿನಲ್ಲಿ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಯು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆಯಲಿದೆ,'' ಎಂದು ಎಂಎಲ್ಸಿ ರವಿಕುಮಾರ್ ಹೇಳಿದರು.
ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, "ಸಭೆಯಲ್ಲಿ ಜಿ.ಪಂ ಹಾಗೂ ತಾ.ಪಂ ಚುನಾವಣೆ ಕುರಿತು ಹಾಗೂ ಪಕ್ಷದ ಮುಂದಿನ ರೂಪುರೇಷಗಳ ಬಗ್ಗರ ಚರ್ಚ ನಡೆಯಲಿದೆ. ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಕುರಿತು ಕೂಡಾ ಮಾತುಕತೆ ನಡೆಯಲಿದೆ,'' ಎಂದರು.

"ಬರುವ ಡಿಸೆಂಬರ್ನಲ್ಲಿ 25 ವಿಧಾನ ಪರಿಷತ್ ಚುನಾವಣೆ ಬರಲಿದ್ದು, ಈ ಚುನಾವಣೆಯ ಬಗ್ಗೆಯು ಚರ್ಚೆ ನಡೆಯಲಿದೆ. ರಾಜ್ಯದಲ್ಲಿ ಬಿಜೆಪಿ ಬೂತ್ಗಳನ್ನು ರಚಿಸಲು ಚಿಂತನೆ ಇದೆ. ಆಗಸ್ಟ್ 16ರಿಂದ 30 ಬೂತ್ ಅಧ್ಯಕ್ಷರ ಮನೆಗೆ ಬೋರ್ಡ್ ಹಾಕುವ ಮೂಲಕ ರಾಜ್ಯದಲ್ಲಿ 60 ಸಾವಿರ ಬೂತ್ಗಳಿಗೆ ನಾಮಫಲಕ ಹಾಕುತ್ತೇವೆ.''
"ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಬೂತ್ ಅಧ್ಯಕ್ಷರು ಆಯೋಜಿಸುವಂತೆ ಮಾಡುತ್ತೇವೆ. ರಾಜ್ಯದಲ್ಲಿ 30 ಮನ್ ಕೀ ಬಾತ್ ಕಾರ್ಯಕ್ರಮ ನಡೆಯಲಿವೆ. ಸೆಪ್ಟಂಬರ್ 1ರಿಂದ 15 ಗ್ರಾ.ಪಂ ಸದಸ್ಯರ ಜಿಲ್ಲಾ ಸಮಾವೇಶ ನಡೆಸುತ್ತೇವೆ.''
"ಅಕ್ಟೋಬರ್ನಲ್ಲಿ ಗ್ರಾ.ಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ರಾಜ್ಯ ಮಟ್ಟದ ಸಮಾವೇಶ ನಡೆಸುತ್ತೇವೆ. ಈ ಬಾರಿ ಹೆಚ್ಚು ವಿಧಾನ ಪರಿಷತ್ ಸ್ಥಾನಗಳನ್ನು ಗೆಲ್ಲುತ್ತೇವೆ,'' ಎಂದು ರವಿಕುಮಾರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಜಿಲ್ಲಾಧ್ಯಕ್ಷ ಮುರುಳಿ, ರಾಜ್ಯ ಮುಖಂಡ ಕೆ.ಎಸ್. ನವೀನ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications