ಹಿರಿಯೂರಿನಲ್ಲಿ ಅದ್ದೂರಿಯಾಗಿ ನಡೆದ ಶ್ರೀಕೃಷ್ಣ ಜಯಂತಿ ಬೃಹತ್ ಮೆರವಣಿಗೆ
ಹಿರಿಯೂರು, ಆಗಸ್ಟ್, 31: ನಗರದ ವೇದಾವತಿ ಬಡವಾಣೆಯ ಎ.ಕೃಷ್ಣಪ್ಪ ಸರ್ಕಲ್ ಸಮೀಪದಲ್ಲಿರುವ ಶ್ರೀಕೃಷ್ಣ ದೇವಸ್ಥಾನ ಮುಂಭಾಗದಲ್ಲಿ ವಿವಿಧ ಹೂವುಗಳಿಂದ ಅಲಂಕರಿಸಿದ ಬೆಳ್ಳಿ ರಥದಲ್ಲಿ ಕೂರಿಸಿದ ಶ್ರೀಕೃಷ್ಣ ಪ್ರತಿಮೆಗೆ ಚಿತ್ರದುರ್ಗ ಗೊಲ್ಲಗಿರಿ ಮಠದ ಶ್ರೀಕೃಷ್ಣ ಯಾದವನಂದ ಸ್ವಾಮಿಜಿ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು.
ಪ್ರತಿವರ್ಷದಂತೆ ಈ ವರ್ಷವು ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕೃಷ್ಣ ಪ್ರತಿಮೆ ಕೂರಿಸಿ ನಿತ್ಯವು ವಿಶೇಷ ಪೂಜೆ ಹಾಗೂ ವಿವಿಧ ಕಾರ್ಯಕ್ರಮಗಳು ನಡೆದಿದ್ದು, ಶನಿವಾರ ಭವ್ಯ ಮೆರವಣಿಗೆ ಆಯೋಜಿಸಲಾಗಿತ್ತು. ಶ್ರೀಕೃಷ್ಣ ದೇವಸ್ಥಾನದಿಂದ ಹೊರಟ ಬೃಹತ್ ಮೆರವಣಿಗೆ ನೂರು ಅಡಿ ರಸ್ತೆ, ಚಳ್ಳಕೆರೆ ರಸ್ತೆ, ಅಂಬೇಡ್ಕರ್ ವೃತ್ತ, ತಾಲೂಕು ಕಚೇರಿ ಮೂಲಕ ನಗರದೊಳಗೆ ಪ್ರವೇಶಿಸಿತು.

ಅಲ್ಲಿಂದ ಗಾಂಧಿ ಸರ್ಕಲ್ ಮೂಲಕ ಆಸ್ಪತ್ರೆ ವೃತ್ತ, ಚರ್ಚ್ ರಸ್ತೆ, ಹುಳಿಯಾರು ರಸ್ತೆ ಮೂಲಕ ಅದೇ ಮಾರ್ಗದಲ್ಲಿ ವಾಪಸ್ ಶ್ರೀಕೃಷ್ಣ ದೇವಸ್ಥಾನ ತಲುಪುವ ಮೂಲಕ ಬೃಹತ್ ಮೆರವಣಿಗೆಗೆ ತೆರೆ ಎಳೆದರು. ರಸ್ತೆಯ ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ನೆರೆದು ಮೆರವಣಿಗೆ ಕಣ್ತುಂಬಿಕೊಂಡರು. ಗೊಂಬೆಯಾಟ, ಉರುಮೆವಾದ್ಯ, ತಮಟೆ ವಾದ್ಯ, ವೀರಗಾಸೆ, ಚಂಡಿ ಮದ್ದಾಳೆ, ಡೊಳ್ಳು ಕುಣಿತ ಮುಂತಾದ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಜೊತೆಗೆ ನರ್ತಿಸಿದರು. ಅಲ್ಲದೇ ಡಿಜೆ ಸೌಂಡ್ಗೆ ಸಾವಿರಾರು ಯುವಕರು ಮೈಮರೆತು ಕುಣಿದು ಕುಪ್ಪಳಿಸಿದರು.
ವಾಹನ ಸಂಚಾರ ಅಸ್ತವ್ಯಸ್ಥ: ಶನಿವಾರ ಭವ್ಯ ಮೆರವಣಿಗೆ ಹಿನ್ನೆಲೆಯಲ್ಲಿ ಸಂಬಂಧಪಟ್ಟಂತಹ ಇಲಾಖೆಗಳು ಸಾರ್ವಜನಿಕರಿಗೆ ಯಾವುದೇ ಮಾಹಿತಿ, ಮನ್ಸೂಚನೆಗಳು ನೀಡದೇ ಮೆರವಣಿಗೆ ಆರಂಭಗೊಂಡ ತಕ್ಷಣವೇ ನಗರದೊಳಗೆ ವಾಹನಗಳ ಪ್ರವೇಶ ನೀಷೇಧಿಸಿದರು. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಅದರಲ್ಲಿಯೂ ವಾರದ ಸಂತೆಯಿದ್ದ ಕಾರಣ ಜನರು ನಗರದೊಳಗೆ ಹೋಗಲು ಹರಸಾಹಸ ಪಡುವಂತಾಗಿತ್ತು.
ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ, ನಗರಸಭೆ ಸದಸ್ಯೆ ಶಿವರಂಜನಿ ಯಾದವ್, ಮಾಜಿ ಸದಸ್ಯರಾದ ಶಿವಣ್ಣ, ಜಿ.ಪ್ರೇಮ್ ಕುಮಾರ್, ತಾಲ್ಲೂಕು ಗೊಲ್ಲ ಸಂಘದ ಅಧ್ಯಕ್ಷ ರಂಗಸ್ವಾಮಿ, ಹಿರಿಯ ಮುಖಂಡ ಎನ್.ಆರ್.ಲಕ್ಷ್ಮೀಕಾಂತ್, ವಿಶ್ವನಾಥ್, ಕರಿಯಣ್ಣ, ಆಲೂರು ತಮ್ಮಣ್ಣ, ಜೀವದಾತೆ ಫೌಂಡೇಶನ್ ಸಂಸ್ಥಾಪಕ ಕೆ.ಅಭಿನಂದನ್, ಡಾಬಾ ಚಿಕ್ಕಣ್ಣ, ಶ್ರೀಕೃಷ್ಣ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಮಂದಿ ಭಾಗವಹಿಸಿದ್ದರು.











Click it and Unblock the Notifications