Breaking: ಲೈಂಗಿಕ ದೌರ್ಜನ್ಯ ಆರೋಪ: ಶಿವಮೂರ್ತಿ ಮುರುಘಾ ಶರಣರ ಪ್ರತಿಮೆ ಧ್ವಂಸ
ಚಿತ್ರದುರ್ಗ, ಆಗಸ್ಟ್ 29 : ರಾಜ್ಯದ ಪ್ರಸಿದ್ಧ ಮುರುಘಾ ಮಠದ ಶರಣರ ವಿರುದ್ಧ ಲೈಂಗಿಕ ಪ್ರಕರಣ ರಾಜ್ಯದಲ್ಲಿ ತಲ್ಲಣ ಮೂಡಿಸಿದೆ. ಶರಣರ ವಿರುದ್ಧ ಪರ -ವಿರೋಧ ಘೋಷಣೆಗಳು ಕೇಳಿ ಬರುತ್ತಿವೆ. ಈ ಪ್ರಕರಣದ ಬಗ್ಗೆ ಮೊದಲ ಬಾರಿಗೆ ತನಿಖೆಯನ್ನು ಎದುರಿಸುವುದಾಗಿ ಸ್ವತಃ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ. ಆದರೆ ಮತ್ತೊಂದು ಕಡೆ ಸ್ವಾಮೀಜಿ ಪ್ರತಿಮೆಯನ್ನು ಯುವಕರ ಗುಂಪೊಂದು ಧ್ವಂಸಗೊಳಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಅನಾಥಾ ಸೇವಾಶ್ರಮದಲ್ಲಿ ನಿರ್ಮಿಸಲಾಗಿದ್ದ ಶಿವಮೂರ್ತಿ ಮುರುಘಾ ಶರಣರ ಪ್ರತಿಮೆಯನ್ನು ಗ್ರಾಮಸ್ಥರು ಸೋಮವಾರ ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಲಾಡಿಹಳ್ಳಿ, ರಾಮಘಟ್ಟ, ಡುಮ್ಮಿ, ಕೆಂಗುಂಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಯುವಕರು ಗುಂಪು ಆಶ್ರಮ ಪ್ರವೇಶಿಸಿ ಶಿವಮೂರ್ತಿ ಶರಣರ ಫೋಟೋಗಳನ್ನು ಹೊರಗೆ ತಂದು ಶವಯಾತ್ರೆ ಮಾಡಿದರು. ನಂತರ ಗ್ರಾಮದ ಮುಖ್ಯವೃತ್ತದಲ್ಲಿ ಶಿವಮೂರ್ತಿ ಶರಣರ ಫೋಟೋಗಳನ್ನು ಸುಟ್ಟು ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.
ಮುರುಘಾ ಶರಣರು ಆಶ್ರಮದ ಅಧ್ಯಕ್ಷರಾಗಿ 15 ವರ್ಷ ಕಳೆದಿದೆ, ಆದರೆ ಯಾವುದೇ ಅಭಿವೃದ್ಧಿಯಾಗಿಲ್ಲ. ಆಶ್ರಮದ ಆವರಣದಲ್ಲಿ ದನಕರು ಮೇಯುವಂತ ದುಸ್ಥಿತಿ ಬಂದಿದೆ. ಆಶ್ರಮಕ್ಕೆ ಕೋಟ್ಯಾಂತರ ರೂ ಆದಾಯ ಬರುತ್ತದೆ, ಆದರೆ ಎಲ್ಲಾ ಹಣ ದುರಪಯೋಗ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮಲ್ಲಾಡಿ ಹಳ್ಳಿ ಆಶ್ರಮ ಹಿಂದೆ ಶಿಸ್ತಿಗೆ ಹೆಸರಾಗಿತ್ತು, ಈಗ ಶಿಸ್ತು ಮಾಯವಾಗಿದೆ, ಟ್ರಸ್ಟಿಗಳು ಆಶ್ರಮಕ್ಕೆ ಬರುತ್ತಿಲ್ಲ. ಇದೀಗ ಸ್ವಾಮೀಜಿ ಮೇಲೆ ಆರೋಪ ಕೇಳಿಬರುತ್ತಿದ್ದು, ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಯುವಕರ ಗುಂಪು ಆಕ್ರೋಶ ಹೊರ ಹಾಕಿದರು.
ಆರೋಪಕ್ಕೆ ಮುರುಘಾ ಶರಣರು ಹೇಳಿದ್ದೇನು?
ಚಿತ್ರದುರ್ಗದ ಮುರುಘಾಮಠಕ್ಕೆ ಸಂಬಂಧಿಸಿದ ಯಾವುದೇ ರೀತಿ ಗಾಳಿಸುದ್ದಿಗಳನ್ನು ನಂಬಬಾರದು ಎಂದು ಮುರುಘಾಮಠದ ಶಿವಮೂರ್ತಿ ಶರಣರು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸೋಮವಾರ ಮಠಕ್ಕೆ ಹಿಂದಿರುಗಿದ ಮುರುಘಾ ಶರಣರು "ಯಾವುದೇ ಕಾರಣಕ್ಕೂ ಭಕ್ತರು ಆತಂಕಕ್ಕೆ ಒಳಗಾಬೇಡಿ. ಎದುರಾಗಿರುವ ಸಮಸ್ಯೆಯನ್ನು ಶಾಂತವಾಗಿ ಎದುರಿಸೋಣ. ಎಲ್ಲರೂ ಸೇರಿ ಎದುರಿಸೋಣ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡೋಣ" ಎಂದು ತಿಳಿಸಿದ್ದರು.

ಇಂಥ ಆರೋಪಗಳು ಮತ್ತು ಘಟನೆಗಳು ನಡೆಯುತ್ತಿರುವುದು ಮೊದಲೇನಲ್ಲ. ಹಿಂದೆಯಲ್ಲಾ ಇಂಥ ಪಿತೂರಿಗಳು ಒಳಗಡೆ ನಡೆಯುತ್ತಿದ್ದು, ಈಗ ಹೊರಗೆ ನಡೆಯುತ್ತಿದೆ. ಇದಕ್ಕೆ ತಾತ್ವಿಕ ಅಂತ್ಯ ಕಾಣಬೇಕಾಗಿದೆ ಎಂದು ಮುರುಘಾಮಠದ ಶಿವಮೂರ್ತಿ ಶರಣರು ಹೇಳಿದ್ದಾರೆ.












Click it and Unblock the Notifications