ಚಿತ್ರದುರ್ಗದಲ್ಲಿ ಕೈಗಾರಿಕಾ ಟೌನ್ಶಿಪ್ ನಿರ್ಮಾಣ; ಬೊಮ್ಮಾಯಿ
ಚಿತ್ರದುರ್ಗ, ಅಕ್ಟೋಬರ್ 18; "ಮುರುಘಾ ಶರಣರ ಆಶಯದಂತೆ ಜಿಲ್ಲೆಯಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್ಶಿಪ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮುರುಘಾ ಮಠದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವದ ಸಮಾರೋಪ ಹಾಗೂ ಮುರುಘಾ ಶ್ರೀಗಳ ಪೀಠಾರೋಹಣದ ತೃತೀಯ ದಶಮಾನೋತ್ಸವ, ಗುರುವಂದನೆ ಸಮಾರಂಭದಲ್ಲಿ ಭಾಗವಹಿಸಿ ಬಸವ ಭೂಷಣ ಪ್ರಶಸ್ತಿ ಸ್ವೀಕರಿಸಿ ಮುಖ್ಯಮಂತ್ರಿಗಳು ಮಾತನಾಡಿದರು.
"ಕೈಗಾರಿಕಾ ಟೌನ್ಶಿಪ್ ಮಾಡಲು ಸಿದ್ದನಿದ್ದೇನೆ. ಜಿಲ್ಲಾಧಿಕಾರಿಗಳು ಚಿತ್ರದುರ್ಗದಲ್ಲಿ 1 ಸಾವಿರದಿಂದ 2 ಸಾವಿರ ಎಕರೆ ಭೂಮಿಯನ್ನು ಗುರುತಿಸಿದರೆ ನಾನು ಈ ಕಾರ್ಯ ಮಾಡಲು ಸಿದ್ದನಿದ್ದೇನೆ" ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದರು.

"ಮನುಷ್ಯರನ್ನು ಮನುಷ್ಯರಾಗಿ ನೋಡುವುದೇ ಶರಣ ಸಂಸ್ಕೃತಿ. 12ನೇ ಶತಮಾನದ ಪ್ರತಿಪಾದನೆಯನ್ನು ಶ್ರೀಗಳು ಮಾಡುತ್ತಿದ್ದಾರೆ. ಈಗ 21ನೇ ಶತಮಾನ, ಅಂಕಿಗಳು ತಿರುಗುಮುರುಗಾಗಿವೆ. ಮನುಕುಲದ ಅಭಿವೃದ್ದಿಯಾಗಬೇಕು. ಅಸಮಾನತೆ, ಲಿಂಗಬೇಧ ಇಂದಿಗೂ ಇದೆ. ಸಂಪೂರ್ಣವಾಗಿ ಇದನ್ನು ತೊಲಗಿಸುವ ಜವಾಬ್ದಾರಿ ಶರಣರಿಂದ ಪ್ರಾರಂಭವಾಗಿದೆ. ಇದನ್ನು ಎಲ್ಲರು ಮುಂದುವರಿಸಿಕೊಂಡು ಹೋಗಬೇಕು. ಮೌಢ್ಯಗಳು ತಮಗೆ ದುಃಖ ಉಂಟು ಮಾಡಿವೆ. ಸಾಮಾಜಿಕ ಸಮಾನತೆ ಸಂತೋಷವನ್ನು ಉಂಟು ಮಾಡಿದೆ" ಎಂದರು.
"ಬಿ. ಎಸ್. ಯಡಿಯೂರಪ್ಪ ಭದ್ರಾ ಮೇಲ್ದಂಡೆ ಯೋಜನೆಯನ್ನು ಆರಂಭಿಸಿ ಬರದ ನಾಡಾದ ಚಿತ್ರದುರ್ಗಕ್ಕೆ ನೀರಾವರಿ ಸೌಲಭ್ಯವನ್ನು ಹರಿಸಲು ನೆರವಾಗಿದ್ದಾರೆ. ಇದೊಂದು ಜನಪರ ಕೆಲಸ" ಎಂದು ಹೇಳಿದರು.
"ಶರಣರ ಜನ್ಮದಿನವನ್ನು ಸಮಾನತೆ ದಿನವನ್ನಾಗಿ ಆಚರಿಸಲು ಚಿಂತನೆ ನಡೆಸುವುದಾಗಿ ತಿಳಿಸಿದರು. ಮುರುಘಾ ಮಠದ ಶರಣರು ಶಿಷ್ಯ ಬಳಗದವರು ಮುರುಘಾ ಶರಣರ ಜನ್ಮದಿನವನ್ನು ಸಮಾನತೆ ದಿನವನ್ನಾಗಿ ಘೋಷಿಸಬೇಕು ಎಂದು ಮನವಿ ಮಾಡಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ" ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ ಎಸ್ ಎಸ್ ರಿಮೋಟ್ ಕಂಟ್ರೋಲ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, "ನಾನು ಅರ್ ಎಸ್ ಎಸ್ ಹಿಡಿತದಲ್ಲಿ ಇರುವುದಕ್ಕೆ ಬೇಸರವಿಲ್ಲ. ಆರ್ ಎಸ್ ಎಸ್ ರಾಷ್ಟ್ರ ಕಟ್ಟುವ ಕೆಲಸ ಮಾಡುತ್ತಿದೆ. ನಾನು ರಾಷ್ಟ್ರ ಕಟ್ಟುವ ಕೆಲಸ ಮಾಡುವ ಸಂಘಟನೆಯ ಹಿಡಿತದಲ್ಲಿದ್ದೇನೆ. ಆದರೆ ಸಿದ್ದರಾಮಯ್ಯ ಒಂದು ಕುಟುಂಬದ ಹಿಡಿತದಲ್ಲಿರುವುದಕ್ಕೆ ನನಗೆ ಬೇಸರವಾಗುತ್ತಿದೆ" ಎಂದು ತಿರುಗೇಟು ನೀಡಿದರು.
ಉಪ ಚುನಾವಣೆ ಬಗ್ಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, "ಹಾನಗಲ್ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಗೆಲ್ಲುವು ಶತಸಿದ್ಧ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಶರಣಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿಶ್ವರೂಪಿ ಡಾ. ಶಿವಮೂರ್ತಿ ಮುರುಘಾ ಶರಣರು ಪುಸ್ತಕ ಬಿಡುಗಡೆ ಮಾಡಲಾಯಿತು.












Click it and Unblock the Notifications