ಕೆಲಸದ ಹೊರೆ ತಗ್ಗಿಸಿ ಎಂದು ಚಿತ್ರದುರ್ಗದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಪ್ರತಿಭಟನೆ
ಚಿತ್ರದುರ್ಗ, ಜುಲೈ 18: ಮುಂಬಡ್ತಿಯಲ್ಲಾಗುತ್ತಿರುವ ಅನ್ಯಾಯ ಹಾಗೂ ಬೇರೆ ಇಲಾಖೆಯ ಕೆಲಸದ ಒತ್ತಡವನ್ನು ತಮ್ಮ ಮೇಲೆ ಹೇರುತ್ತಿರುವುದನ್ನು ಖಂಡಿಸಿ ನೂರಾರು ಗ್ರಾಮ ಲೆಕ್ಕಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಚಿತ್ರದುರ್ಗ ಜಿಲ್ಲಾ ಶಾಖೆ ವತಿಯಿಂದ ತಮ್ಮ ಹತ್ತಾರು ಬೇಡಿಕೆಗಳ ಈಡೇರಿಕೆಗಾಗಿ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಗ್ರಾಮ ಲೆಕ್ಕಾಧಿಕಾರಿಗಳು ಅನ್ಯ ಇಲಾಖೆಯ ಕೆಲಸದ ಹೊರೆಯನ್ನು ತಮ್ಮ ಮೇಲೆ ಹೇರುತ್ತಿರುವುದು ನಿಲ್ಲಿಸುವಂತೆ ಒತ್ತಾಯಿಸಿದರು.
ರಜಾ ದಿನಗಳಲ್ಲಿ ಕೆಲಸದ ಒತ್ತಡ ಹೇರಬಾರದೆಂದು ಸರ್ಕಾರವೇ ಆದೇಶಿಸಿದ್ದರೂ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಾರ್ವತ್ರಿಕ ರಜೆ ದಿನದಂದು ಕೆಲಸ ಮಾಡಲು ಒತ್ತಾಯಿಸಲಾಗುತ್ತಿದೆ. ಇದರಿಂದ ಕುಟುಂಬದ ಜೊತೆ ರಜೆಯ ದಿನಗಳಲ್ಲಿಯೂ ಸಂತೋಷವಾಗಿರಲು ಆಗುತ್ತಿಲ್ಲ. ಮಾನಸಿಕ ನೆಮ್ಮದಿ ಕಳೆದುಕೊಳ್ಳುವಂತಾಗಿದೆ ಎಂದು ಪ್ರತಿಭಟನಾನಿರತ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡರು. ಜೊತೆಗೆ ಮುಂಬಡ್ತಿಯಲ್ಲಾಗುತ್ತಿರುವ ಅನ್ಯಾಯವನ್ನು ಸರಿಪಡಿಸುವುದರೊಂದಿಗೆ ಗ್ರಾಮ ಸಹಾಯಕರ ಹುದ್ದೆಯನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮ ಲೆಕ್ಕಾಧಿಕಾರಿಗಳ ಪ್ರಯಾಣ ಭತ್ಯೆಯನ್ನು ಒಂದು ಸಾವಿರ ರೂಪಾಯಿಗೆ ಹೆಚ್ಚಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತೀರ್ಮಾನಿಸಿದ್ದಾರೆ. ರಾಜ್ಯ ಸಂಘ ಒಂದು ಸಾವಿರ ರೂ. ಹೆಚ್ಚಿಸಲು ಆರನೇ ವೇತನ ಆಯೋಗಕ್ಕೂ ಮನವಿ ನೀಡಿದೆ. ಸರ್ಕಾರ ಕೇವಲ ಮುನ್ನೂರರಿಂದ ಆರು ನೂರುಗಷ್ಟು ಮಾತ್ರ ಹೆಚ್ಚಿಸಿದೆ. ಇದನ್ನು ಪುನರ್ ಪರಿಶೀಲಿಸಿ ಒಂದು ಸಾವಿರ ರೂಪಾಯಿಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ, ಮರಳು ದಂಧೆಕೋರರು ಲಾರಿ ಹರಿಸಿ ಹತ್ಯೆಗೈದಿರುವ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಾಟೀಲ್ ಕುಟುಂಬಕ್ಕೆ ವಿಶೇಷ ಪರಿಹಾರ ಮಂಜೂರಾಗಿಲ್ಲ. ಕೂಡಲೇ ಇಪ್ಪತ್ತು ಲಕ್ಷ ರೂ.ವಿಶೇಷ ಪರಿಹಾರವನ್ನು ನೀಡಬೇಕು ಎಂದರು.
ನ್ಯಾಯಸಮ್ಮತವಾದ ಈ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ಬೆಂಗಳೂರಿನಲ್ಲಿ ಕುಟುಂಬ ಸಮೇತ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಪ್ರತಿಭಟನಾನಿರತ ಗ್ರಾಮ ಲೆಕ್ಕಾಧಿಕಾರಿಗಳು ಎಚ್ಚರಿಕೆ ನೀಡಿದರು.
ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಆರ್.ಲಕ್ಷ್ಮಿಪತಿ, ಉಪಾಧ್ಯಕ್ಷ ಎಂ.ಪ್ರಭಾಕರ, ಪ್ರಧಾನ ಕಾರ್ಯದರ್ಶಿ ಎಸ್.ಗಂಗಾಧರ್, ಗೌರವಾಧ್ಯಕ್ಷ ಕರಿಯಪ್ಪ, ಸಂಘಟನಾ ಕಾರ್ಯದರ್ಶಿ ಆರ್.ರಂಗನಾಥ್, ರಾಜ್ಯ ಪರಿಷತ್ ಸದಸ್ಯರು, ನಿರ್ದೇಶಕರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications