ಹಗಲಿನಲ್ಲಿ ಪಾತ್ರೆ ವ್ಯಾಪಾರ, ರಾತ್ರಿ ಮಾಡುತ್ತಿದ್ದ ಕೆಲಸವೇ ಬೇರೆ
ಚಿತ್ರದುರ್ಗ, ಸೆಪ್ಟೆಂಬರ್ 11: ಹಗಲಿನಲ್ಲಿ ಪಾತ್ರೆ ವ್ಯಾಪಾರ ಮಾಡಿಕೊಂಡು ರಾತ್ರಿ ಹೊತ್ತು ದರೋಡೆಗೆ ಇಳಿಯುತ್ತಿದ್ದ ಡಕಾಯಿತರನ್ನು ಬಂಧಿಸುವಲ್ಲಿ ಹಿರಿಯೂರು ಪೊಲೀಸರು ಯಶಸ್ವಿಯಾಗಿದ್ದಾರೆ. ರಾತ್ರಿಯಾಗುತ್ತಿದ್ದಂತೆ ನಿರ್ಜನ ಪ್ರದೇಶಗಳಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ವಾಹನ ಚಾಲಕರಿಂದ ದರೋಡೆ ಮಾಡುತ್ತಿದ್ದ ನಾಲ್ಕು ಜನ ಡಕಾಯಿತರು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ಉಮೇಶ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಹಿರಿಯೂರು ತಾಲೂಕಿನ ಕೆ.ಆರ್.ಹಳ್ಳಿ ಗೇಟ್ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಹಣ ವಸೂಲಿ ಮಾಡುತಿದ್ದ ದ್ಯಾಮಪ್ಪ (25), ಶಂಕರ (19), ಬಸವರಾಜ (26), ಯಮನೂರು (22) ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಮಾರಪ್ಪ (24) ಎಂಬಾತ ತಪ್ಪಿಸಿಕೊಂಡಿದ್ದಾನೆ.

ಆತನಿಗಾಗಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಬಂಧಿತರಿಂದ ಒಂದು ಕಾರು, ಮಚ್ಚು, ದೊಣ್ಣೆ, ಕಲ್ಲುಗಳು, ಡ್ರಾಗರ್ ಹಾಗೂ ಖಾರದ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಇವರೆಲ್ಲರು ಬಳ್ಳಾರಿ, ಗದಗ, ರಾಯಚೂರು ಜಿಲ್ಲೆಯವರಾಗಿದ್ದು, ಪಾತ್ರೆ ವ್ಯಾಪಾರ, ಕೂದಲು ವ್ಯಾಪಾರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹಿರಿಯೂರು ಪೊಲೀಸರ ಕಾರ್ಯಾಚರಣೆಗೆ ಚಿತ್ರದುರ್ಗ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಅಭಿನಂದಿಸಿದ್ದಾರೆ.












Click it and Unblock the Notifications