ಕೂಲಿ ಕಾರ್ಮಿಕರೆಂದು ಬಂದು ಕೈ ಹಾಕಿದ್ದು ಬೇರೆ ಕೆಲಸಕ್ಕೆ
ಚಿತ್ರದುರ್ಗ, ಡಿಸೆಂಬರ್ 4: ಕೂಲಿ ಕೆಲಸ ಎಂದು ಬಂದು ಸುಲಿಗೆ, ಮನೆಗಳ್ಳತನ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಯಲ್ಲಾಭೋವಿಹಟ್ಟಿ ಹಾಗೂ ವೀರವ್ವನಾಗತಿಹಳ್ಳಿ ಗ್ರಾಮಗಳಲ್ಲಿ ಈಚೆಗೆ ನಡೆದಿದ್ದ ಸುಲಿಗೆ, ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ನಾಲ್ವರು ಅಂತರರಾಜ್ಯ ಕಳ್ಳರನ್ನು ಸೆರೆಹಿಡಿದಿದ್ದಾರೆ.
ಅರ್ಜುನ್ (28), ಕನಕ (25), ಆದಿ ನಾಗನ ಬೋಸ್ಲೆ (29), ಪಾರವ್ವ(50) ಬಂಧಿತ ಆರೋಪಿಗಳು. ಆರೋಪಿಗಳು ಮಹಾರಾಷ್ಟ್ರದ ನಾಗ್ಪುರ ಜಿಲ್ಲೆ ಉಮ್ರತ್ ತಾಲೂಕಿನ ರಾಜವಾಡಿ ನಿವಾಸಿಗಳು ಎಂಬುದು ತಿಳಿದುಬಂದಿದೆ.

ಹೊಸದುರ್ಗ ತಾಲೂಕಿನ ಕೆಂಕೆರೆ ಸಮೀಪದ ಗುಡ್ಡದಲ್ಲಿ ಇವರು ಟೆಂಟ್ ಹಾಕಿಕೊಂಡು ಬೀಡು ಬಿಟ್ಟಿದ್ದರು. ಕೂಲಿ ಕೆಲಸದ ನೆಪದಲ್ಲಿ ಮನೆಗಳಲ್ಲಿ ಕಳ್ಳತನ ನಡೆಸುತ್ತಿದ್ದರು. ರಾತ್ರಿ ಹೊತ್ತು ವ್ಯಕ್ತಿಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು. ಪ್ರಕರಣ ಬೇಧಿಸಿರುವ ಪೊಲೀಸರು ಇವರನ್ನು ಬಂಧಿಸಿ, 8.50 ಗ್ರಾಂನ ಚಿನ್ನಾಭರಣ, 5500ರೂ ನಗದು, ಮೊಬೈಲ್ ಹಾಗು ಕೃತ್ಯಕ್ಕೆ ಬಳಸುತ್ತಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications