ಮುರುಘಾ ಶ್ರೀ ಜಾಮೀನು ಅರ್ಜಿ; ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು, ಅಕ್ಟೋಬರ್ 28. ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೊ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಸ್ವಾಮೀಜಿ ಜಾಮೀನು ಅರ್ಜಿ ಸಂಬಂಧ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಸರ್ಕಾರಿ ಅಭಿಯೋಜಕರಿಗೆ ಸೂಚನೆ ನೀಡಿದೆ.
ನ್ಯಾಯಾಂಗ ಬಂಧನದಲ್ಲಿರುವ ಸ್ವಾಮೀಜಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಜೆಎಂ ಖಾಜಿ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ಆಗ ಪ್ರಾಸಿಕ್ಯೂಷನ್ ಪರ ವಕೀಲರು, ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಮಯ ಕೋರಿದರು. ಪ್ರತಿವಾದಿ ಬಾಲಕಿಯರಿಗೂ ಕೋರ್ಟ್ ನೋಟಿಸ್ ಹಿನ್ನೆಲೆಯಲ್ಲಿ ಓರ್ವ ಬಾಲಕಿ ಪರವಾಗಿ ತಂದೆಯಿಂದ ವಕಾಲತ್ ಹಾಕಿದ್ದಾರೆ. ಮತ್ತೋರ್ವ ಬಾಲಕಿ ಪರ ಒಡನಾಡಿ ಪರ ವಕೀಲರು ಹಾಜರಾದರು.
ಅದಕ್ಕೆ ಮುರುಘಾ ಶರಣರ ಪರ ವಕೀಲರ ಆಕ್ಷೇಪ ಎತ್ತಿದರು. ಬಾಲಕಿ ಪರವಾಗಿ ತಂದೆ ವಕಾಲತ್ಗೆ ಸಹಿ ಮಾಡಬಹುದು. ಆದರೆ ಒಡನಾಡಿ ಸಂಸ್ಥೆಯ ವಕೀಲರ ವಕಾಲತ್ತಿಗೆ ಆಕ್ಷೇಪ ಇದೆ ಎಂದರು. ಅದಕ್ಕೆ ನ್ಯಾಯಾಲಯ ಲಿಖಿತ ಆಕ್ಷೇಪಗಳಿದ್ದರೆ ಸಲ್ಲಿಸಬಹುದು ಎಂದು ಸೂಚನೆ ನೀಡಿ ವಿಚಾರಣೆಯನ್ನು ಒಂದು ವಾರ ಮುಂದೂಡಿತು.
ಕಳೆದ ವಿಚಾರಣೆ ವೇಳೆ ನ್ಯಾಯಾಲಯ, ಪ್ರತಿವಾದಿಗಳಾದ ಚಿತ್ರದುರ್ಗ ಗ್ರಾಮೀಣ ಪೊಲೀಸರು, ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸಿ. ಚಂದ್ರಕುಮಾರ್ ಹಾಗೂ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ನೋಟಿಸ್ ಜಾರಿಗೊಳಿಸಿತ್ತು.

ವಿಚಾರಣೆ ನಂತರ ಜೈಲಿನಲ್ಲಿಡುವುರಿಂದ ಹಕ್ಕು ಮೊಟಕು
ಅರ್ಜಿದಾರರ ಪರ ವಕೀಲರು, ಬಸವರಾಜು ಮತ್ತು ಅವರ ಪತ್ನಿಯ ಪ್ರೇರಣೆಯಿಂದಾಗಿ ದೂರು ದಾಖಲಿಸಲಾಗಿದೆ. ಜತೆಗೆ, ಸಂತ್ರಸ್ತರಲ್ಲಿ ಒಬ್ಬರು ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರೆ, ಮತ್ತೊಬ್ಬರು ನಿರಾಕರಿಸಿದ್ದಾರೆ. ಅರ್ಜಿದಾರರು ಪೊಲೀಸರಿಗೆ ಶರಣಾಗಿದ್ದಾರೆ. ಮ್ಯಾಜಿಸ್ಟ್ರೇಟ್ ಮಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಅರ್ಜಿದಾರರ ವಿರುದ್ಧ ವಿಚಾರಣೆ ಬಹುತೇಕ ಮುಕ್ತಾಯವಾಗಿದ್ದು, ಮತ್ತೂ ಜೈಲಿನಲ್ಲಿಡುವುದರಿಂದ ಅವರ ಹಕ್ಕು ಮೊಡಕುಗೊಳಿಸದಂತಾಗಿದೆ ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದರು.

2020ರಿಂದ ಅತ್ಯಾಚಾರ ಆರೋಪ
ಸ್ವಾಮೀಜಿಯಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ವಿದ್ಯಾರ್ಥಿನಿಯರ ತಾಯಿಯು ಪತಿ ತನ್ನನ್ನು ತೊರೆದ ಬಳಿಕ ಮಕ್ಕಳನ್ನು ಮಠಕ್ಕೆ ಒಳಪಟ್ಟಿರುವ ಎಸ್ ಜೆಎಂ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದ್ದೆ. ಹಿರಿಯ ಮಗಳನ್ನು 3ನೇ ತರಗತಿ ಮತ್ತು ಎರಡನೇ ಪುತ್ರಿಯನ್ನು 1ನೇ ತರಗತಿಗೆ ಸೇರಿಸಲಾಗಿತ್ತು. 2020ರಿಂದ ಸ್ವಾಮೀಜಿ ಅವರು ನಿರಂತರವಾಗಿ ಮಕ್ಕಳ ಮೇಲೆ ಇತರ ಆರೋಪಿಗಳ ಸಹಕಾರದೊಂದಿಗೆ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಒಡನಾಡಿ ಸಂಸ್ಥೆಯನ್ನು ಮಕ್ಕಳು ಮತ್ತು ತಾಯಿ ಸಂಪರ್ಕಿಸಿದ್ದರು. ಆನಂತರ ಒಡನಾಡಿ ಸಂಸ್ಥೆಯ ಪದಾಧಿಕಾರಿಗಳು ಅವರನ್ನು ಮಕ್ಕಳ ಕಲ್ಯಾಣ ಸಮಿತಿಯ ಎದುರು ಹಾಜರುಪಡಿಸಿದ್ದರು

ಎಸ್ಸಿ ಮತ್ತು ಎಸ್ಟಿ ಕಾಯಿದೆ ಅಡಿಯಲ್ಲೂ ದೂರು
ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಸೆಕ್ಷನ್ಗಳಾದ 17, 5(ಎಲ್), 6 ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್ಗಳಾದ 376(2)(ಎನ್), 376(3), 149 ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣವನ್ನು ಚಿತ್ರದುರ್ಗ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿದೆ. ಅಲ್ಲದೇ, ಅಲ್ಲಿ ಪೋಕ್ಸೊ ಕಾಯಿದೆ ಸೆಕ್ಷನ್ಗಳಾದ 17, 5(ಎಲ್), 6, ಐಪಿಸಿ ಸೆಕ್ಷನ್ಗಳಾದ 376(2)(ಎನ್), 376(3), 149 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿರ್ಮೂಲನೆ) ಕಾಯಿದೆ ಸೆಕ್ಷನ್ 3(1) (ಡಬ್ಲ್ಯು) (1)(2), 3(2) (V) ಅಡಿ ಪ್ರಕರಣ ದಾಖಲಿಸಲಾಗಿದೆ.

7 ಮಂದಿ ವಿರುದ್ಧ ಎಫ್ಐಆರ್
ಈ ಮಧ್ಯೆ, ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಮತ್ತಿಬ್ಬರು ವಿದ್ಯಾರ್ಥಿಯರು ನೀಡಿದ ದೂರನ್ನು ಆಧರಿಸಿ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಏಳು ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮುರುಘಾ ಶರಣರು, ಹಾಸ್ಟೆಲ್ ವಾರ್ಡನ್ ರಶ್ಮಿ, ಬಸವಾದಿತ್ಯ, ಪರಮಶಿವಯ್ಯ, ಗಂಗಾಧರ, ಮಹಾಲಿಂಗ ಮತ್ತು ಕರಿಬಸಪ್ಪ ಅವರನ್ನು ಕ್ರಮವಾಗಿ ಒಂದರಿಂದ ಏಳನೇ ಆರೋಪಿಗಳನ್ನಾಗಿಸಲಾಗಿದೆ. ಸೆಪ್ಟೆಂಬರ್ 23 ರಂದು ಚಿತ್ರದುರ್ಗದ ವಿಶೇಷ ನ್ಯಾಯಾಲಯವು ಮುರುಘಾ ಶರಣರ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು.












Click it and Unblock the Notifications