ಚಳ್ಳಕೆರೆಯಲ್ಲಿ ಧನ್ಯವಾದ ಹೇಳಲು ಪೊಲೀಸರಿಗೆ ಹೂಮಳೆಗರೆದ ಜನರು
ಚಿತ್ರದುರ್ಗ, ಏಪ್ರಿಲ್ 15: ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದೆ. ಇದನ್ನು ತಡೆಗಟ್ಟುವುದೇ ಸದ್ಯದ ಸವಾಲಿನ ಕೆಲಸವಾಗಿದೆ. ಇದರಲ್ಲಿ ಪೊಲೀಸರ ಪಾತ್ರ ಹಿರಿದು. ಹೀಗಾಗಿ ಚಿತ್ರದುರ್ಗದಲ್ಲಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಬಂದ ಪೊಲೀಸರಿಗೆ ಇಲ್ಲಿನ ಜನರು ಹೂವುಗಳನ್ನು ಸುರಿದು ಸ್ವಾಗತಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಪೊಲೀಸರು ಜಾಗೃತಿ ಮೂಡಿಸುವ ಸಲುವಾಗಿ ಚಳ್ಳಕೆರೆಯ ಹಳೇ ನಗರಕ್ಕೆ ಬಂದಾಗ ಅಲ್ಲಿನ ನಿವಾಸಿಗಳು ಪೊಲೀಸರ ಮೇಲೆ ಹೂಗಳನ್ನು ಸುರಿದಿದ್ದಾರೆ. ಪೊಲೀಸರು ಮತ್ತು ಸಿಬ್ಬಂದಿಗೆ ಮಕ್ಕಳು, ಹಿರಿಯರು, ಮಹಿಳೆಯರು ಸೇರಿ ಹೂವು ಸುರಿಯುವ ಮೂಲಕ ಧನ್ಯವಾದ ಹೇಳಿದ್ದಾರೆ.
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ, ವೈದ್ಯರು, ಪೊಲೀಸರು, ನರ್ಸ್ ಗಳು, ಆಶಾ ಕಾರ್ಯಕರ್ತೆಯರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಸುಮಾರು ಒಂದು ತಿಂಗಳಿನಿಂದಲೂ ಪೊಲೀಸರು ಹಗಲು ರಾತ್ರಿ ಎನ್ನದೆ, ಮಳೆ ಗಾಳಿ ಲೆಕ್ಕಿಸದೆ, ರಣ ಬಿಸಿಲಿನಲ್ಲಿ, ಕುಟುಂಬದ ಸದಸ್ಯರನ್ನು ಬಿಟ್ಟು, ಸರಿಯಾದ ಸಮಯಕ್ಕೆ ಊಟ ನೀರಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಕಾರ್ಯವನ್ನು ಶ್ಲಾಘಿಸಲು ಜನರು ಹೂಮಳೆಗರೆದಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಚಳ್ಳಕೆರೆ ಪಿಎಸ್ಐ ನೂರ್ ಅಹಮದ್, "ನಾವು ಜಾಗೃತಿ ಮೂಡಿಸಲು ಹೋದ ಸಂದರ್ಭ ಅಲ್ಲಿನ ಸ್ಥಳೀಯರು ನಮ್ಮನ್ನು ಹೂವು ಸುರಿದು ಸ್ವಾಗತಿಸಿದ್ದು ಸಂತೋಷವಾಯಿತು. ದೇಶ ಇಂದು ಸಂಕಷ್ಟದಲ್ಲಿ ಸಿಲುಕಿದೆ. ನಾವೆಲ್ಲರೂ ಈ ಸಂಕಷ್ಟದಿಂದ ಪಾರಾಗಲು ಕಾನೂನು ಪಾಲಿಸಬೇಕು, ಯಾರೂ ಮನೆಯಿಂದ ಹೊರ ಬರಬಾರದು. ಸರ್ಕಾರದ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಿ ಕೊರೊನಾ ತಡೆಗಟ್ಟಲು ಸಹಕರಿಸಿದರೆ ನಮ್ಮ ಕೆಲಸಕ್ಕೆ ಸಾರ್ಥಕತೆ ಇರುತ್ತದೆ" ಎಂದು ಹೇಳಿದರು.
ಹೂವು ಸುರಿದು ಸ್ವಾಗತಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಪೊಲೀಸರು ಕಾನೂನು ಪಾಲಿಸುವಂತೆ ನಾಗರಿಕರಲ್ಲಿ ಕೈ ಮುಗಿದು ಜಾಗೃತಿ ಮೂಡಿಸಿದ್ದಾರೆ. ಡಿವೈಎಸ್ಪಿ ರೋಷನ್ ಜಮೀರ್, ಸಿಪಿಐ ಈ. ಆನಂದ್, ಪಿಎಸ್ಐ ನೂರ್ ಅಹಮದ್ ಸೇರಿದಂತೆ ಆರಕ್ಷಕ ಸಿಬ್ಬಂದಿ ಇದ್ದರು.












Click it and Unblock the Notifications