ಚಿತ್ರದುರ್ಗ: "ಸಚಿವ ಶ್ರೀರಾಮುಲು ರಾಜ್ಯದ ಸಿಎಂ ಆಗಬೇಕು'
ಚಿತ್ರದುರ್ಗ, ಜೂನ್ 16: ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಹೊಸದುರ್ಗದ ಅಭಿಮಾನಿಯೊಬ್ಬ ಅವರಿಗೆ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದಾನೆ.
ಸಚಿವರ ಪ್ರೀತಿ, ವಿಶ್ವಾಸ, ಅಭಿಮಾನ ಹಾಗೂ ಅವರ ಸರಳತೆಗೆ ಮಾರುಹೋಗಿರುವ ಅಭಿಮಾನಿ ಯುವಕನೊಬ್ಬ ಮಣ್ಣಿನಿಂದ ಪ್ರತಿಮೆ ಮಾಡಿಸಿ ಸಚಿವರಿಗೆ ನೀಡಿದ್ದಾನೆ.
ಕಳೆದ ಎರಡು ದಿನಗಳ ಹಿಂದೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ನಗರದ ಶರತ್ ಹೊಸದುರ್ಗ ಎನ್ನುವ ಯುವಕ, 5,500 ರೂ. ಖರ್ಚು ಮಾಡಿ, ಕೆಂಪು ಮಣ್ಣಿನಿಂದ ಸುಮಾರು 10 ಕೆ.ಜಿ ತೂಕದ ಪ್ರತಿಮೆ ಮಾಡಿಸಿದ್ದಾನೆ. ಅದಕ್ಕೆ ಬಣ್ಣದ ಸ್ಪರ್ಷ ಕೊಟ್ಟು, ಬಳ್ಳಾರಿಯ ಸಚಿವರ ನಿವಾಸದಲ್ಲಿ ಪ್ರತಿಮೆ ನೀಡಿದನು.

ಶ್ರೀರಾಮುಲು ನನ್ನ ದೇವರು, ಅವರಲ್ಲಿ ಬೇದಬಾವ ಇಲ್ಲ. ಅವರಿಗೆ ಎಲ್ಲರೂ ಒಂದೇ, ದೇವಸ್ಥಾನದಲ್ಲಿ ದೇವರು ಎಲ್ಲರನ್ನೂ ಹೇಗೆ ನೋಡುತ್ತಾನೋ ಅದೇ ರೀತಿಯಲ್ಲಿ ಸಚಿವರು ಕೂಡ ನೋಡುತ್ತಾರೆ. ರಾಜ್ಯದಲ್ಲಿ ತುಂಬಾ ಜನ ಶಾಸಕರು, ಸಂಸದರು, ಸಚಿವರನ್ನು ನೋಡಿದೀನಿ ಆದರೆ ಇವರ ತರ ಯಾರೂ ಇಲ್ಲ ಎಂದಿದ್ದಾನೆ.
ಶ್ರೀರಾಮುಲು ಅವರ ಸರಳತೆ, ಅವರಲ್ಲಿರುವ ಮನೋಭಾವ, ಪ್ರೀತಿ, ಅವರು ತೋರಿಸುವ ಅಭಿಮಾನ, ನಾನು ಮನೆಗೆ ಹೋದರೆ ಅವರು ಉಪಚರಿಸುವ ರೀತಿ, ನನ್ನನ್ನು ತಮ್ಮ ಎಂದು ಕರೆಯುವ ಶೈಲಿ, ಅವರ ಭಾಷೆ ತುಂಬಾ ಮೆಚ್ಚುವಂತೆ ಮಾಡುತ್ತದೆ ಎಂದನು.

ಶ್ರೀರಾಮುಲು ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಎನ್ನುವುದು ನನ್ನ ಆಸೆ, ಅವರು ಸಿಎಂ ಆಗುತ್ತಾರೆಂಬ ವಿಶ್ವಾಸವೂ ಇದೆ. ಅದಕ್ಕಾಗಿ ನಾನು ಕಳೆದ ಎರಡು ವರ್ಷಗಳಿಂದ ಬನ್ನಿಮರ ಪೂಜೆ ಮಾಡುತ್ತಾ ಬಂದಿದ್ದೆನೆ ಎಂದರು.
ಅವರು ರಾಜ್ಯದ ಸಿಎಂ ಆದರೆ ಕರ್ನಾಟಕ ಅಭಿವೃದ್ಧಿ ಆಗುತ್ತದೆ ಎನ್ನುವ ಭರವಸೆ ಇದೆ. ಶ್ರೀರಾಮುಲು ರಾಜ್ಯದ ಸಿಎಂ ಆದರೆ ನಾನು ಸತ್ತ ನಂತರ ನನ್ನ ಅಂಗಾಂಗಗಳನ್ನು ದಾನ ಮಾಡುತ್ತೇನೆ ಎಂದು "ಒನ್ ಇಂಡಿಯಾ' ಗೆ ದೂರವಾಣಿ ಮೂಲಕ ಅಭಿಮಾನಿ ಶರತ್ ಹೊಸದುರ್ಗ ತಿಳಿಸಿದರು.












Click it and Unblock the Notifications