ಜೆಜಿ ಹಳ್ಳಿ ಕಾಲೇಜು ಸ್ಥಳಾಂತರ ಆದೇಶಕ್ಕೆ ಶಾಸಕಿ ಕೆ. ಪೂರ್ಣಿಮಾ ಗರಂ
ಹಿರಿಯೂರು, ಜೂನ್ 26: ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆಸ್ತೂರಿಗೆ ಸ್ಥಳಾಂತರಿಸಲು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಅಧಿಕೃತ ಆದೇಶ ಹೊರಡಿಸಿದ್ದು, ಇದಕ್ಕೆ ಹಿರಿಯೂರು ಬಿಜೆಪಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಗರಂ ಆಗಿದ್ದಾರೆ.
ಸರ್ಕಾರ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ಆದರೆ ಅದನ್ನು ಬಿಟ್ಟು ದಾಖಲಾತಿ ಕಡಿಮೆ ಇದೆ ಅಂತ ಕುಂಟು ನೆಪವೊಡ್ಡಿ ಮಂಡ್ಯ ಜಿಲ್ಲೆಗೆ ಕಾಲೇಜು ಸ್ಥಳಾಂತರಿಸಿರುವುದು ಸರಿಯಲ್ಲ. ಜೊತೆಗೆ ತಾಲ್ಲೂಕಿನ ಯಾವ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತರದೆ, ಸಭೆ ನಡೆಸದೆ ಏಕಾಏಕಿ ಆದೇಶ ನೀಡಿರುವುದನ್ನು ಖಂಡಿಸುತ್ತೇನೆ ಎಂದರು.
ನಿಮ್ಮ ಭಾಗದಲ್ಲಿರುವ ಯಾವ ಕಾಲೇಜಿನಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇಲ್ಲವೆ? ನಿಮಗೆ ನಮ್ಮ ಕ್ಷೇತ್ರದ ಮೇಲೆ ಯಾಕೆ ಕಣ್ಣು ಎಂದು ಖಾರವಾಗಿ ಸಿಎಂ ಕುಮಾರಸ್ವಾಮಿಯನ್ನು ಪ್ರಶ್ನಿಸಿದ್ದಾರೆ.

ಉರಿಯುವ ಬೆಂಕಿಗೆ ತುಪ್ಪಸುರಿದ ಸಿಎಂ...
ಸತತ ಬರಗಾಲಕ್ಕೆ ತತ್ತರಿಸಿ ಹೋಗಿರುವ ಹಿರಿಯೂರಿನಲ್ಲಿ ಸುಮಾರು ಐವತ್ತೂ ಸಾವಿರಕ್ಕೂ ಹೆಚ್ಚು ಎಕರೆಗಳಲ್ಲಿ ತೋಟಗಳು ಒಣಗಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಇದರ ಜೊತೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುವ ಕಾಲೇಜು ಸ್ಥಳಾಂತರದ ಆದೇಶ ಉರಿಯುವ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತೆ ಆಗಿದೆ.
ಈ ಹೋಬಳಿಯಲ್ಲಿ ಹೆಚ್ಚಾಗಿ ಅಲೆಮಾರಿ ಬುಡಕಟ್ಟು, ಕಾಡುಗೊಲ್ಲ ಸಮುದಾಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗ ಸೇರಿದಂತೆ ಇನ್ನಿತರ ಸಮುದಾಯಗಳು ವಾಸವಾಗಿದ್ದು, ತೀರ ಹಿಂದುಳಿದ ಪ್ರದೇಶವಾಗಿದೆ. ಸರ್ಕಾರಿ ಕಾಲೇಜು ಇರುವುದರಿಂದ ಒಂದಿಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಮಕ್ಕಳ ಊಟದಲ್ಲಿ ಕಲ್ಲು ಹಾಕುವಂಥ ಕೆಲಸ ಸರ್ಕಾರ ಮಾಡಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆಂದು ಈ ರೀತಿ ಮಾಡಬಾರದು. ಕಾಲೇಜು ಉಳಿವಿಗಾಗಿ ಹೋರಾಟ ಮಾಡ್ತೀನಿ. ಸಿಎಂ ಅವರ ಜೊತೆ ಮಾತನಾಡುತ್ತೇನೆ. ವಿಧಾನ ಸಭೆಯಲ್ಲಿ ಇದರ ಬಗ್ಗೆ ಗಂಭೀರ ಚರ್ಚೆ ಮಾಡಿ ಗಮನ ಸೆಳೆಯುತ್ತೇನೆ ಎಂದರು.












Click it and Unblock the Notifications