ವಿವಿ ಸಾಗರ ಡ್ಯಾಂನಲ್ಲಿ ಸೋರಿಕೆ; ರೈತರಿಗೆ ಆತಂಕ ಬೇಡ
ಚಿತ್ರದುರ್ಗ, ಫೆಬ್ರವರಿ 24 : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಏಕೈಕ ಜಲಾಶಯವಾದ ವಾಣಿವಿಲಾಸ ಜಲಾಶಯಕ್ಕೆ 110 ವರ್ಷಗಳ ಇತಿಹಾಸವಿದೆ. ಹಿರಿಯೂರು ತಾಲೂಕಿನಲ್ಲಿರುವ ಜಲಾಶಯದ ಕೆಲವು ಭಾಗದಲ್ಲಿ ಸೋರಿಕೆ ಕಂಡು ಬಂದಿದ್ದು, ವೀಕ್ಷಣೆಗೆ ಭೇಟಿ ನೀಡುತ್ತಿರುವ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಕಣಿವೆ ಮಾರಮ್ಮ ದೇವಾಲಯದ ಹಿಂಭಾಗದಲ್ಲಿನ ಜಲಾಶಯದ ಗೋಡೆಯ ಹತ್ತಾರು ಕಡೆಗಳಲ್ಲಿ ನೀರು ಜಿನುಗುತ್ತಿರುವುದು ಕಂಡು ಬಂದಿದೆ. ಆದರೆ, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಅಭಯ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಸಹಾಯಕ ಇಂಜಿನಿಯರ್ ಪರಶುರಾಮ, "ವಾತಾವರಣದಲ್ಲಿ ಆಗುವ ಬದಲಾವಣೆಯಿಂದ ಈ ರೀತಿಯಾದ ಸೋರಿಕೆ ಕಂಡು ಬರುತ್ತದೆ. ಇದರಿಂದ ಜಲಾಶಯಕ್ಕೆ ಯಾವುದೇ ಅಪಾಯವಿಲ್ಲ" ಎಂದು ಸ್ಪಷ್ಟನೆ ನೀಡಿದರು.

"ನಮ್ಮ ರಾಜ್ಯದಲ್ಲಿ ನೂರಾರು ವರ್ಷ ತುಂಬಿದ ಅಣೆಕಟ್ಟುಗಳ ಸುರಕ್ಷತೆ ಹೆಚ್ಚಿಸಲು ವಿಶ್ವಬ್ಯಾಂಕ್ ಸಾಲ ನೀಡಲಿದೆ. ಕೇಂದ್ರ ಜಲ ಆಯೋಗ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳಲ್ಲಿದೆ. ಡ್ರಿಪ್ 1 ಯೋಜನೆಯಡಿ ಕೃಷ್ಣರಾಜಸಾಗರ ಜಲಾಶಯ ಸೇರಿದ್ದು, ಡ್ರಿಪ್ 2ರಲ್ಲಿ ವಾಣಿವಿಲಾಸ ಜಲಾಶಯವು ಸೇರ್ಪಡೆಗೊಳ್ಳಲಿದೆ" ಎಂದು ವಿವರಣೆ ನೀಡಿದರು.
"ಜಲಾಶಯ 100 ಅಡಿ ದಾಟಿದಾಗಲೆಲ್ಲ ಈ ರೀತಿ ನೀರು ಜಿನುಗುವುದು ಕಂಡು ಬಂದಿದೆ. ಇದರಿಂದ ಸಾರ್ವಜನಿಕರು, ರೈತರು ಭಯಪಡುವ ಅಗತ್ಯವಿಲ್ಲ" ಎಂದು ಪರುಶರಾಮ ಅಭಯ ನೀಡಿದ್ದಾರೆ.












Click it and Unblock the Notifications