ಹಿರಿಯೂರು: ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ 150ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಶಾಸಕಿ ಕೆ.ಪೂರ್ಣಿಮಾಗೆ ಶಾಕ್
ಚಿತ್ರದುರ್ಗ, ಏಪ್ರಿಲ್, 04: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಮೇ 10ರಂದು ಮತದಾನ ನಡೆಯಲಿದೆ. 13 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಮತ್ತೊಂದೆಡೆ ಎಲ್ಲಾ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚುನಾವಣಾ ಕಾವು ರಂಗೇರಿದ್ದು, 150ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ.
ಅಲ್ಲದೇ ಗುರುವಾರ (ಏಪ್ರಿಲ್ 06) 150ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಕ್ಷಕ್ಕೆ ಬರುವ ಕಾರ್ಯಕರ್ತರನ್ನು ಸೇರಿಸಿಕೊಳ್ಳಲು ಮಾಜಿ ಸಚಿವ ಡಿ.ಸುಧಾಕರ್ ಅವರು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ವಿವಿಧ ಸಮುದಾಯಗಳ ಮುಖಂಡರು ಗುರುವಾರ ಸಂಜೆ 3ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ "ಕೈ" ಸೇರ್ಪಡೆಯಾಗಲಿದ್ದಾರೆ.

ಮತ್ತೊಂದು ಕಡೆ ಹಿರಿಯೂರಿನ ಅವಧಾನಿ ನಗರದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಾದ ಬಳಿಕ ಪಕ್ಷ ಸೇರಿದ ಕಾರ್ಯಕರ್ತರಿಂದ ತಡವಾಗಿ ಸುಧಾಕರ್ ಅವರ ಜನ್ಮದಿನವನ್ನು ತಡವಾಗಿ ಆಚರಿಸಲಿದ್ದಾರೆ. ಬಿಜೆಪಿ ಪಕ್ಷ ತೊರೆಯಲಿರುವ ಪ್ರಮುಖ ಮುಖಂಡರ ಹೆಸರು ಲಭ್ಯವಾಗಿದೆ. ಹಾಗಾದರೆ ಕಾಂಗ್ರೆಸ್ ಸೇರಲಿರುವವ ಪಟ್ಟಿ ಇಲ್ಲಿದೆ ನೋಡಿ.
"ಕೈ" ಸೇರ್ಪಡೆಯಾಗಲಿರುವವರ ವಿವರ
ಅದರಲ್ಲಿಯೂ ಪ್ರಮುಖವಾಗಿ ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಆರ್. ತಿಮ್ಮಯ್ಯ, ವಕೀಲ ಬಬ್ಬೂರು ಸುರೇಶ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಧನಂಜಯ್ ಕುಮಾರ್, ಉದ್ಯಮಿ ಬೀರೆನಹಳ್ಳಿ ಷಡಕ್ಷರಿ, ಕಸಾಪ ಅಧ್ಯಕ್ಷ ಡಾ. ವಿ.ಎಂ.ನಾಗೇಶ್, ವೇಲು ಸ್ವಾಮಿ ನಾಯ್ಡು, ಆರ್.ಆರ್. ರಮೇಶ್ ರಂಗನಾಥಪುರ, ಪಿಟ್ಲಾಲಿ ಕರಿಬಸಣ್ಣ, ಭಾಗ್ಯ ಕೀರ್ತಿ ಪ್ರಕಾಶ್, ವಿ.ಹೆಚ್.ರಾಜ್, ಪಾಟೇಲ್ ಸಂಜೀವಪ್ಪ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಹಾಗೆಯೇ ಮಲ್ಲಿಕಾರ್ಜುನ್ ಆಲೂರು, ಫಕ್ರುದ್ದೀನ್ ಕೂನಿಕೆರೆ ಮತ್ತು ಬೆಂಬಲಿಗರು, ಮಾಜಿ ಸಚಿವ ಡಿ.ಮಂಜುನಾಥ್ ಅವರ ಅಳಿಯ ಸಿದ್ದಪ್ಪ ಸೇರಿದಂತೆ ತಮಿಳು ಸಮುದಾಯ, ಉಪ್ಪಾರ ಸಮುದಾಯ, ವೀರಶೈವ ಸಮುದಾಯ, ಮುಸ್ಲಿಂ ಸಮುದಾಯದ ಮುಖಂಡರು ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಬಿಜೆಪಿ ಹಾಗೂ ಇತರೇ ಪಕ್ಷಗಳನ್ನು ತೊರೆಯಲಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಕಾಂಗ್ರೆಸ್ ಸೇರ್ಪಡೆಯಾದವರ ವಿವರ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾದ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರನ್ನು ಬೆಂಬಲಿಸಿದ್ದವರೇ ಇದೀಗ ಶಾಸಕಿಗೆ ಶಾಕ್ ನೀಡಿದ್ದಾರೆ. ಶಾಸಕಿಯ ಗೆಲುವಿಗೆ ಸಹಕಾರಿ ಆಗಿದ್ದ ಮಾಜಿ ನಗರಸಭಾ ಸದಸ್ಯ ಹಾಗೂ ಕಾಡುಗೊಲ್ಲ ಸಮುದಾಯ ಮುಖಂಡ ಜಿ. ಪ್ರೇಮ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಕರಿಯಮ್ಮ ಶಿವಣ್ಣನವರು ಸಹ ಮಂಗಳವಾರ (ಏಪ್ರಿಲ್ 04) ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಇವರಿಬ್ಬರ ಮನೆಗೆ ಭೇಟಿ ನೀಡಿದ ಮಾಜಿ ಸಚಿವ ಡಿ.ಸುಧಾಕರ್ ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಸ್ವಾಗತಿಸಿದ್ದಾರೆ.
ಹೀಗೆ ದಿನ ಕಳೆದಂತೆ ಬಿಜೆಪಿ ಪಕ್ಷಕ್ಕೆ ಮೇಲಿಂದ ಮೇಲೆ ಹೊಡೆತ ಬೀಳುತ್ತಲೇ ಇದೆ. ಕ್ಷೇತ್ರದಲ್ಲಿ ದಿನ ಬೆಳಗಾದರೆ ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಇದರಿಂದ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರಿಗೆ ದೊಡ್ಡ ಹಿನ್ನೆಡೆ ಉಂಟಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಈಗಾಗಲೇ ಮಾಜಿ ನಗರಸಭೆ ಅಧ್ಯಕ್ಷ ಟಿ.ಚಂದ್ರಶೇಖರ್, ಎಸ್ಟಿ ಮೋರ್ಚಾದ ಅಧ್ಯಕ್ಷ ಮಂಜುನಾಥ್, ಮಾಜಿ ನಗರಸಭಾ ಸದಸ್ಯ ಪ್ರೇಮ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಕರಿಯಮ್ಮ, ಕಾಡುಗೊಲ್ಲ ಸಮುದಾಯ ಮುಖಂಡ ದಿಂಡವಾರ ಶಿವಣ್ಣ ಸೇರಿದಂತೆ ಮತ್ತಿತರರು ಪಕ್ಷ ತೊರೆದಿದ್ದು, ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಠಿಣ ಆಗಲಿದೆ ಎನ್ನುವ ಮಾತುಗಳು ಕೂಡ ಜೋರಾಗಿಯೇ ಕೇಳಿಬರುತ್ತಿವೆ.
ಒಟ್ಟಾರೆಯಾಗಿ ಹೇಳುವುದಾದರೆ ಕಳೆದ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ನಾಯಕರು ಮತ್ತು ಕಾರ್ಯಕರ್ತರು ಈ ಬಾರಿ ಬಿಜೆಪಿಗೇ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ವಿಧಾನಸಭೆ ಚುನಾವಣೆಯ ಮತದಾನಕ್ಕೆ ತಿಂಗಳಷ್ಟೇ ಬಾಕಿ ಉಳಿದಿದ್ದು, ಹಿರಿಯೂರು ಕ್ಷೇತ್ರದ ಅಧಿಪತಿ ಯಾರಾಗಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications